Advertisement

ಆರ್ಥಿಕತೆಗೆ ಬಲ ತುಂಬಲು ಉಡುಗೊರೆ ಬೇಡಿಕೆ ಹೆಚ್ಚಳಕ್ಕೆ ಕ್ರಮ

01:01 AM Oct 14, 2020 | mahesh |

ಕೋವಿಡ್‌ನ‌ ಈ ಸಂಕಷ್ಟದ ಸಮಯದಲ್ಲಿ ದೇಶವಾಸಿಗಳ ಆರೋಗ್ಯ ಹಾಗೂ ಆರ್ಥಿಕತೆಗೂ ಬೃಹತ್‌ ಪೆಟ್ಟು ಬಿದ್ದಿದೆ. ಆರ್ಥಿಕತೆಗೆ ಮರು ಜೀವ ತುಂಬಬೇಕೆಂದರೆ, ಜನರ ಖರೀದಿ ಸಾಮರ್ಥ್ಯ ಹೆಚ್ಚುವುದು ಮುಖ್ಯ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಲೇ ಬಂದಿದ್ದರು. ಮಧ್ಯಮ ವರ್ಗವು ದೇಶದ ಉತ್ಪಾದನ ವಲಯ ಹಾಗೂ ಆರ್ಥಿಕತೆಯ ಚಕ್ರಕ್ಕೆ ಬಹುದೊಡ್ಡ ಶಕ್ತಿಯಾಗಿದ್ದು, ಕೋವಿಡ್‌ ಅವರ ಖರೀದಿ ಸಾಮರ್ಥ್ಯಕ್ಕೆ ಹಾನಿ ಮಾಡಿದೆ. ಈ ನಿಟ್ಟಿನಲ್ಲಿಯೇ ಕೇಂದ್ರ ಸರಕಾರ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲು ಹಾಗೂ ಜನರು ಹೆಚ್ಚಿನ ಖರೀದಿಯಲ್ಲಿ ತೊಡಗುವಂತೆ ಉತ್ತೇಜಿಸುವುದಕ್ಕಾಗಿ 73 ಸಾವಿರ ಕೋಟಿ ರೂಪಾಯಿಯ ಯೋಜನೆಯನ್ನು ಜಾರಿಗೊಳಿಸಿದೆ.

Advertisement

ಇದರ ಭಾಗವಾಗಿ ಕೇಂದ್ರ ಸರಕಾರಿ ನೌಕರರಿಗೆ ರಜೆ ಪ್ರಯಾಣ ಅವಧಿಯ ಭತ್ತೆ(ಎಲ್‌ಟಿಸಿ) ಬದಲಾಗಿ ನಗದು ವೋಚರ್‌ ಹಾಗೂ 3 ಪಟ್ಟು ಟಿಕೆಟ್‌ನ ಮೊತ್ತವನ್ನು ಕೊಡಲಿದೆ. ಇದಷ್ಟೇ ಅಲ್ಲದೇ, 10 ಸಾವಿರ ರೂಪಾಯಿಯ ಬಡ್ಡಿ ರಹಿತ ಮುಂಗಡ ಸಾಲವನ್ನೂ ನೀಡಲು ಮುಂದಾಗಿದ್ದು, ಹತ್ತು ಕಂತುಗಳ‌ಲ್ಲಿ ಪಾವತಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರಕಾರಗಳೂ ತಮ್ಮ ನೌಕರರಿಗೆ ಇದನ್ನು ವಿಸ್ತರಿಸುವ ನಿರೀಕ್ಷೆಯಿದೆ.

ಈ ಘೋಷಣೆಗಳು ಆರ್ಥಿಕತೆಯಲ್ಲಿ ಹಣದ ಹರಿವನ್ನು ಹೆಚ್ಚಿಸಲಿರುವುದು ನಿಶ್ಚಿತ. ಪ್ರತಿ ವರ್ಷ ಸರ್ಕಾರಿ ನೌಕರರಿಗೆ ರಜೆ ಪ್ರಯಾಣಕ್ಕಾಗಿ ಭತ್ತೆಯನ್ನು ನೀಡುತ್ತಾ ಬರಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್‌ ಕಾರಣದಿಂದಾಗಿ ಜನರು ಪ್ರವಾಸ ಕೈಗೊಳ್ಳುವುದು ಖಾತ್ರಿಯಿಲ್ಲ. ಹೀಗಾಗಿ, ಅದೇ ಭತ್ತೆಯನ್ನು ವೋಚರ್‌ನ ರೂಪದಲ್ಲಿ ನೀಡಿಬಿಟ್ಟರೆ, ಆ ಮೊತ್ತದಲ್ಲಿ ಅವರು ತಮಗೆ ಬೇಕಾದ ಸಾಮಗ್ರಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಶೇ. 12 ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿ ಹೊಂದಿರುವ ಆಹಾರೇತರ ಉತ್ಪನ್ನಗಳ ಖರೀದಿಗೆ ವೋಚರ್‌ ಬಳಕೆಯಾಗುವ ಕಾರಣ, ಆ ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುವ ಉತ್ಪನ್ನಗಳ ಮಾರಾಟವೂ ಅಧಿಕ­ವಾಗುತ್ತದೆ.

ಗಮನಾರ್ಹ ವಿಷಯವೆಂದರೆ, ಈ ವೋಚರ್‌ಗೆ ಕಾಲಮಿತಿಯನ್ನೂ ವಿಧಿಸಲಾಗಿರು­ವುದರಿಂದಾಗಿ, ಅದನ್ನು ಬಳಸಲೇಬೇಕಾ­ಗುತ್ತದೆ. ಈಗ ಸಾಲು ಸಾಲು ಹಬ್ಬಗಳು ಎದುರಾಗುತ್ತಿರುವುದರಿಂದಾಗಿ, ಜನರಿಗೂ ಖರ್ಚುವೆಚ್ಚಗಳು ಇದ್ದೇ ಇರುತ್ತವೆ. ಈಗ ಖರೀದಿ ಪ್ರಕ್ರಿಯೆಯೂ ಅಧಿಕವಾಗಿ, ಇದರಿಂದಾಗಿ ಉತ್ಪಾದಕರಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಇದು ಎರಡೂ ಬದಿಯ ಜನರಿಗೂ ಅತ್ಯಂತ ಸಹಾಯಕವಾಗಿದೆ. ಆದರೆ ಇದೇ ವೇಳೆಯಲ್ಲೇ ಪ್ರವಾಸೋದ್ಯಮ ವಲಯದಿಂದ ಸಹಜವಾಗಿಯೇ ಈ ಘೋಷಣೆಯ ಬಗ್ಗೆ ಅಸಮಾಧಾನದ ಧ್ವನಿಗಳು ಕೇಳಿಬರುತ್ತಿವೆ. ಏಕೆಂದರೆ ಪ್ರವಾಸೋದ್ಯಮ ಈಗಷ್ಟೇ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಆರಂಭಿಸಿದ್ದು, ರಜೆ ಪ್ರವಾಸ ಭತ್ತೆಯ ಬದಲು ನಗದು ವೋಚರ್‌ ಜಾರಿ ಮಾಡಿದ್ದರಿಂದಾಗಿ ಜನ ಪ್ರವಾಸ ಮಾಡುವುದಿಲ್ಲ ಎನ್ನುವ ಅಸಮಾಧಾನ ಈ ವಲಯದ್ದು.

ಇನ್ನು ಆರ್ಥಿಕ ಬಿಕ್ಕಟ್ಟಿನಿಂದಾಗಿ ಎಲ್ಲ ರಾಜ್ಯಗಳೂ ತತ್ತರಿಸಿರುವುದರಿಂದಾಗಿ 50 ವರ್ಷಗಳ ಅವಧಿಗೆ ಬಡ್ಡಿರಹಿತ ನೀಡಿರುವುದು ಸ್ವಾಗತಾರ್ಹ ಕ್ರಮ. ಒಟ್ಟಾರೆಯಾಗಿ, ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ಯಾವ ಮಾರ್ಗವನ್ನೂ ನಾವು ಮುಚ್ಚಿಲ್ಲ ಎನ್ನುವ ಮಾತಿಗೆ ಬದ್ಧವಾಗಿ ಕೇಂದ್ರ ಸರಕಾರ ಮುಂದಡಿಯಿಟ್ಟಿರುವುದು ಶ್ಲಾಘನೀಯ. ದೇಶವು ಆರ್ಥಿಕತೆಗೆ ಪುನಶ್ಚೇತನ ನೀಡುವಂಥ ಮತ್ತಷ್ಟು ಪೂರಕ ಕ್ರಮಗಳ ನಿರೀಕ್ಷೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next