Advertisement

ಕಾಯಕಲ್ಪ ನಿರೀಕ್ಷೆಯಲ್ಲಿ ಮಾಯಿಲರಸನ ಕೋಟೆಕಣಿ ಕೋಟೆ

06:20 AM Sep 08, 2018 | |

ಕಾಸರಗೋಡು: ಇತಿಹಾಸದ ಬೆಳಕು ಚೆಲ್ಲುವ ಕೋಟೆಗಳು ಕಾಸರಗೋಡಿನಲ್ಲಿ ಸಾಕಷ್ಟಿದ್ದು, ಈ ಪೈಕಿ ಕೆಲವು ಕೋಟೆಗಳು ಕಾಲನ ತುಳಿತಕ್ಕೆ ಬಲಿಯಾಗಿ ಕಣ್ಮರೆಯಾಗುತ್ತಿವೆ. ಅಂತಹ ಕೋಟೆಗಳ ಲ್ಲೊಂದು ಕೋಟೆಕಣಿ ಕೋಟೆ. ಕಾಸರಗೋಡು ಕೋಟೆಗಳ ನಾಡೆಂದೇ ಖ್ಯಾತಿ ಪಡೆದಿದೆ. ಹತ್ತು ಹಲವು ಕೋಟೆಗಳು ಇಲ್ಲಿದ್ದು, ಶೋಚನೀಯ ಸ್ಥಿತಿಗೆ ತಲುಪಿದ್ದ ಕೆಲವು ಕೋಟೆಗಳನ್ನು ದುರಸ್ತಿಗೊಳಿಸಲಾಗಿದೆ. ಈ ಸಾಲಿಗೆ ಸೇರಬೇಕಾದ ಕೋಟೆಕಣಿ ಕೋಟೆ ಪೂರ್ಣವಾಗಿ ನಾಶವಾಗುವ ಮುನ್ನವೇ ದುರಸ್ತಿಗೊಳಿಸಲು ಸಂಬಂಧಪಟ್ಟವರು ಮುಂದಾಗಬೇಕಾಗಿದೆ.

Advertisement

ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಿಂದ ಕೆಲವೇ ದೂರದಲ್ಲಿರುವ ಕೋಟೆಕಣಿಯಲ್ಲಿ ಅಳಿದು ಳಿದ ಕೋಟೆ ಕಾಲದ ಕರಾಳತೆಗೆ ನಲುಗಿ ಕಣ್ಣೀರಿಡುತ್ತಿದೆ. ಮಾಯಿಲರಸನ ಕಾಲದ ಈ ಐತಿಹಾಸಿಕ ಅವಶೇಷ ನೆಲಸಮವಾಗುವ ದಿನಗಳು ದೂರವಿಲ್ಲ. ಎತ್ತರದ ಬತ್ತೇರಿಯ ಮೇಲೆ ನಿಂತರೆ ನಾಲೆªಸೆಗೂ ದೃಷ್ಟಿ ನಿಲುಕುತ್ತದೆ. ಪ್ರಕೃತಿ ರಮಣೀಯ ದೃಶ್ಯ ಗೋಚರಿಸುತ್ತದೆ. ಮಾಯಿಲರಸ ನಿರ್ಮಿಸಿದ ಕೋಟೆಕಣಿಯ ಕೋಟೆ ನಾಮಾವಶೇಷದ ಅಂಚಿನಲ್ಲಿದ್ದು, ಒಂದು ಇತಿಹಾಸವೇ ಕಣ್ಮರೆಯಾಗುವ ಹಂತದಲ್ಲಿದೆ. ಕೋಟೆಯ ಭೂಭಾಗ ಅನ್ಯರ ಪಾಲಾಗಿದೆ. ಅಲ್ಪಸ್ವಲ್ಪ ಉಳಿದುಕೊಂಡ ಕೋಟೆಯ ಭಾಗದಲ್ಲಿ ಬತ್ತೇರಿ, ಬುರುಜುಗಳ ಕುರುಹು ಗಳು ಮಾತ್ರವೇ ಉಳಿದುಕೊಂಡಿವೆ. ಸುತ್ತ ಕಾಡು ಬೆಳೆದು ಒಳಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಕೆಂಗಲ್ಲು ಮತ್ತು ಮಣ್ಣಿನಲ್ಲಿ ನಿರ್ಮಿಸಿದ ಕೋಟೆಯ ಸುತ್ತು ಗೋಡೆ ಅಲ್ಲಲ್ಲಿ ಉಳಿದುಕೊಂಡಿದೆ.

ಮಧೂರ ಮಾಯಿಲರಸ ತುಳುನಾಡಿನ ಪ್ರತಾಪಿ ಅರಸನಾಗಿದ್ದನೆಂದು ಚರಿತ್ರೆ ಯಿಂದ ತಿಳಿದು ಬರುತ್ತದೆ. ಈತ ಮೊಗೇರ ಜನಾಂಗದವನು? ಈ ವಿಷಯ ಇನ್ನೂ ಚರ್ಚಾಸ್ಪದವಾಗಿಯೇ ಇದೆ. ಮಂಜೇಶ್ವರದ ಅರಸ ಅಂಗಾರವರ್ಮ, ಪಟ್ಟದಮೊಗರಿನ ಮುಗರ, ಬಡಾಜೆಯ ಬಡಜ ಮೊದಲಾದವರು ಮಾಯಿಲನ ಸಮಕಾಲೀನರು. ಉಬಾಸಿಗನೆಂಬ ಅರಸನೂ ತುಳುನಾಡಿನಲ್ಲಿದ್ದ. ಅವರೆಲ್ಲ ಅಧಿಕೃತ ವರ್ಗದವರು. ಆದರೆ ಅಧಿಕಾರದ ಸೂತ್ರ ಅವರಲ್ಲಿತ್ತು. ಸೈನ್ಯವೂ ಇತ್ತು. ಆಡಳಿತ ನಡೆಸುವ ಶಕ್ತಿ ಸಾಮರ್ಥ್ಯವಿತ್ತು. ರಾಜ್ಯ ವಿಸ್ತರಿಸಲು ಉತ್ತರದಿಂದ ದಂಡೆತ್ತಿ ಬಂದ ರಾಜರುಗಳು ಇವರ ಹುಟ್ಟಡಗಿಸಿದರು. ತುಂಡರಸರೆಲ್ಲ ದಿಕ್ಕು ಪಾಲಾದರು.

ಮಾಯಿಲ ಮೊಗೇರ ಅರಸನೆನ್ನುವುದಕ್ಕೆ ಸಾಕ್ಷಾÂಧಾರಗಳಿದ್ದರೂ ಅವೆಲ್ಲ ದಂತ ಕಥೆಗಳಾಗಿ ಕ್ಷಯಿಸುತ್ತಲೇ ಇದೆ. ಚಾಣಾಕ್ಷ ಓಟಕ್ಕೆ ಪ್ರಸಿದ್ಧಿಯಾದ ಮೊಲವನ್ನು ಅಟ್ಟಿಸಿ ಬೇಟೆಯಾಡುವುದರಲ್ಲಿ ಮೊಗೇರರು ನಿಷ್ಣಾತರು. ಆದ ಕಾರಣವೇ ಅವರಿಗೆ ಮೇರರು ಎಂಬ ಹೆಸರು ಬಂದಿರುವುದಾಗಿ ಈ ಕುರಿತು ನಡೆದ ಅಧ್ಯಯನಗಳಿಂದ ತಿಳಿದು ಬರುತ್ತದೆ. ಮೊಗೇರರ ಆರಾಧನೆಯಲ್ಲಿ ಬಿಲ್ಲು ಬಾಣಗಳಿಗೆ ಪ್ರಾಮುಖ್ಯತೆ ಇದೆ. ಮಾಯಿಲರಸನೂ ಬೇಟೆಯಾಡುವುದರಲ್ಲಿ ನಿಸ್ಸೀಮನಾಗಿದ್ದ. ದೈವ ದೇವರುಗಳನ್ನು ಆರಾಧಿಸುತ್ತಿದ್ದ.

ಶತಮಾನೋತ್ತರ ಬದುಕು ಸವೆಸಿ ಇತಿಹಾಸವಾದ ಬದಿಯಡ್ಕದ ಮತ್ತಡಿ, ಬೆಳ್ಳೂರಿನ ಪಕ್ರಿ, ಚೇವಾರಿನ ಚನಿಯ ಮೊದಲಾದವರು ಮಧೂರು ಮಾಯಿಲರಸ ಮತ್ತು ಮದರುವಿನ ಕುರಿತು ಹೇಳುತ್ತಿದ್ದುದನ್ನು ಕೇಳಿದವರಿದ್ದಾರೆ. ಐತಿಹಾಸಿಕ ಮಹತ್ವದ ಕೋಟೆಗಳನ್ನು ಬತ್ತೇರಿ ಬುರುಜುಗಳನ್ನು ಸಂರಕ್ಷಿಸುವುದು ಇಂದಿನ ಅನಿವಾರ್ಯವಾಗಿದೆ. 

Advertisement

ಕೊಟ್ಟಾರಿಗುಡ್ಡೆಯಲ್ಲಿ ಅರಮನೆ 
ಮಾಯಿಲರಸ ಮಧೂರು ಶ್ರೀ ಮದನಂತೇಶ್ವರದ ಅನನ್ಯ ಭಕ್ತ. ಮಧೂರು ದೇವಾಲಯದ ಮುಂಭಾಗದ ಕೊಟ್ಟಾರಿಗುಡ್ಡೆಯಲ್ಲಿ ಅವನ ಅರಮನೆ ಇತ್ತು. ಪಟ್ಲದಲ್ಲಿ ಕಳಿಯಾಟದ ಸಂದರ್ಭದಲ್ಲಿ ನಡೆಯುವ ದೈವಗಳ ನುಡಿಗಟ್ಟಿನಲ್ಲಿ ಮಾಯಿಲರಸನ ಪ್ರಸ್ತಾವ ಬರುತ್ತದೆ. ಕೊಟ್ಟಾರಿಗುಡ್ಡೆ ಮತ್ತು ಜೇನಕ್ಕೋಡಿನಲ್ಲಿ ಅವನತಿಯ ಅಂಚಿನಲ್ಲಿರುವ ಬುರುಜುಗಳನ್ನು ಕಾಣಬಹುದು. 

ಉಳಿಯತ್ತಡ್ಕದಲ್ಲಿದ್ದ ಬತ್ತೇರಿಯೊಂದು ವರ್ಷಗಳ ಹಿಂದೆಯೇ ನೆಲಸಮವಾಗಿದೆ. ದಕ್ಷಿಣದ ಅರಸನೊಬ್ಬ ದಂಡೆತ್ತಿ ಬಂದಾಗ ಆತನನ್ನು ಮಾಯಿಲರಸ ಉಳಿಯತ್ತಡ್ಕ ಮೈದಾನದಲ್ಲಿ ನಡೆದ ಯುದ್ಧದಲ್ಲಿ ಪರಾಭವಗೊಳಿಸಿ ಓಡಿಸಿದ್ದನೆಂಬ ವೃತ್ತಾಂತ ಜನಪದದಲ್ಲಿದೆ. ಮಾಯಿಲರಸನು ಪೂಜೆಯನ್ನು ನೋಡಲು ನಿತ್ಯವೂ ಮಧೂರು ದೇವಾಲಯಕ್ಕೆ ಬರುತ್ತಿದ್ದನಂತೆ. ನದಿಯಲ್ಲಿ ಮಿಂದು ಮಡಿಯಾಗಿ ದೇವಸ್ಥಾನದ ಪೂಜೆ ವೀಕ್ಷಿಸುವುದು ಆತನ ಕ್ರಮವಾಗಿತ್ತು.

ಕಾಟುಕುಕ್ಕೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ಮೊದಲಾದೆಡೆ ಮಾಯಿಲರಸನ ಕೋಟೆಗಳಿರುವುದಾಗಿ ಇತಿಹಾಸ ತಜ್ಞರು ಹೇಳುತ್ತಾರೆ. ಆದರೆ ಅವುಗಳು ಅಸ್ತಿತ್ವ ಪಡೆದ ಬಗ್ಗೆ ಜಿಜ್ಞಾಸೆಯಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯ ಬೇಕಾಗಿದೆ. ಮಧೂರು ದೇವಾಲಯದ ಸ್ಥಾಪನೆಯ ಕಾಲ ಮತ್ತು ಮಾಯಿಲರಸನ ಆಡಳಿತ ಕಾಲವನ್ನು ಇತಿಹಾಸಕಾರರು ಸಮೀಕರಿಸಿದ್ದಾರೆ. ಅಡೂರು, ಮಧೂರು, ಕಾವು, ಕಣಿಪುರ ದೇವಾಲಯಗಳು ಮೂಲ ನಿವಾಸಿ ಗಳ ಬದುಕಿನಲ್ಲಿ ಪ್ರಬಲವಾದ ಸಂಬಂಧವನ್ನು ಪಡೆದಿದೆ. ಇದನ್ನು ಸಮರ್ಥಿ ಸಲು ಸಾಕಷ್ಟು ಐತಿಹ್ಯಗಳನ್ನು ಇಲ್ಲಿನ ಜನಪದರು ಒದಗಿಸುತ್ತಾರೆ.
– ರಾಧಾಕೃಷ್ಣ ಕೆ. ಉಳಿಯತ್ತಡ್ಕ,
ಕವಿ, ಲೇಖಕ, ಜಾನಪದ ತಜ್ಞ

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next