Advertisement

ನಮ್ಮಲ್ಲಿನ ಅಮೃತವು ನಮಗೇ ವಿಷವಾಗದಿರಲಿ

11:55 PM Aug 17, 2022 | Team Udayavani |

ಒಂದು ಮಂಗ ತನ್ನ ಮರಿಯೊಂದಿಗೆ ನದಿ ದಾಟುತ್ತಿತ್ತು. ಮರಿಗೆ ನೀರು ತಾಗದಿರಲೆಂದು ಅದನ್ನು ಎದೆಗವಚಿಕೊಂಡಿತ್ತು. ಸ್ವಲ್ಪ ಮುಂದೆ ಹೋದಾಗ ನೀರು ಎದೆಮಟ್ಟದವರೆಗೆ ಬಂತು. ಮಂಗ ಮರಿಯನ್ನು ಭುಜದಲ್ಲಿ ಹೊತ್ತುಕೊಂಡು ಸಾಗತೊಡಗಿತು. ಇನ್ನೂ ಮುಂದೆ ಹೋದಾಗ ಭುಜದವರೆಗೆ ನೀರು ಬಂತು. ಅದು ಮರಿಯನ್ನು ತಲೆಯ ಮೇಲೆ ಇಟ್ಟು ಸಾಗಿ ಜೋಪಾನ ಮಾಡಿತು. ಮತ್ತೂ ಮುಂದೆ ಹೋದಾಗ ತಾಯಿ ಮಂಗವೇ ಮುಳುಗಿ ಹೋಗುವಷ್ಟು ನೀರು ಬಂತು. ಅನ್ಯ ವಿಧಿಯಿಲ್ಲದೇ ಮರಿಯನ್ನು ಕಾಲ ಕೆಳಗಿಟ್ಟು ಅದರ ಮೇಲೆ ನಿಂತು ಮಂಗ ಉಸಿರುಳಿಸಿಕೊಂಡಿತು. ಈ ಕತೆ ಎಲ್ಲರಿಗೂ ಗೊತ್ತು. ಮನುಷ್ಯನ ನಿತ್ಯ ಜೀವನದಲ್ಲೂ ಇಂತಹ ಸಂದರ್ಭಗಳು ಬರಬಹುದು. ನಾವು ಈ ಮಂಗವನ್ನು ಸ್ವಾರ್ಥಿ, ಹೃದಯಹೀನ ಎನ್ನಬಹುದು. ಆದರೆ ಒಂದು ಪ್ರಾಣಿಯಾದ ಅದಕ್ಕೆ ತನ್ನನ್ನು ತಾನು ಉಳಿಸಿಕೊಳ್ಳಲು ಅನ್ಯ ಮಾರ್ಗವಿರಲಿಲ್ಲ.

Advertisement

ಒಬ್ಬರ ಜೀವ ಉಳಿಸುವ ಸಂದರ್ಭದಲ್ಲಿ ತಮ್ಮ ಸ್ವಂತ ಜೀವವನ್ನೇ ಪಣಕ್ಕೊಡ್ಡಿ ಅವರನ್ನು ಕಾಪಾಡುವ ಗುಣ ಮನುಷ್ಯನಲ್ಲಿದೆ. ಇಂತಹ ಉದಾತ್ತ ಗುಣವೇ ಪ್ರಾಣಿಯಾದ ಮನುಷ್ಯನನ್ನು ಇತರ ಪ್ರಾಣಿಗಳಿಂದ ಭಿನ್ನವಾಗಿಸುತ್ತದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಇಂತಹ ಉದಾತ್ತ ಆದರ್ಶವನ್ನು ನಂಬಿಕೊಂಡಿ
ದ್ದರೆ ನಾವು ತೀವ್ರ ದುಃಖ ಅನುಭವಿಸ ಬೇಕಾಗುತ್ತದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ. ಅದಕ್ಕಾಗಿ ಕೆಲವೊಮ್ಮೆ ನಾವು ಈ ಮಂಗನಂತಹ ಸ್ವಾರ್ಥವನ್ನು -ಆದರೆ ಭಿನ್ನ ರೀತಿಯಲ್ಲಿ, ಭಿನ್ನ ತೀವ್ರತೆಯಲ್ಲಿ ಈಡೇರಿಸಬೇಕಾಗುತ್ತದೆ.

ಆತ ಒಬ್ಬ ಪುಕ್ಕಲು ಸ್ವಭಾವದವ. ಹಾಗಾಗಿ ಉಳಿದವರೆಲ್ಲ ಅವನ ಮೇಲೆ ಸವಾರಿ ಮಾಡುತ್ತಿದ್ದರು. ಯಾವುದೋ ಒಂದು ವಿಷಯದಲ್ಲಿ ಸಂದೇಹದ ನೆರಳು ತನ್ನ ಮೇಲೆ ಬಿದ್ದಾಗಲೂ ಆತ ಸುಮ್ಮನಿದ್ದ. ತಾನು ತಪ್ಪು ಮಾಡಿಲ್ಲ. ಅದು ಇತರರಿಗೆ ಒಂದಲ್ಲ ಒಂದು ದಿನ ತಿಳಿಯುತ್ತದೆ ಎಂಬ ಆಶಾಭಾವನೆ ಯಿಂದಿದ್ದ. ಅದಕ್ಕಿಂತಲೂ ಹೆಚ್ಚಾಗಿ ತಾನು ಅವರಲ್ಲಿ ಈ ವಿಷಯದ ಕುರಿತು ವಾದ ಮಾಡಿದರೆ ಅವರೆಲ್ಲ ನೊಂದುಕೊಳ್ಳುವರು ಎಂಬ ಆತಂಕವೂ ಅವನಿಗಿತ್ತು. ಅವನ ಕುರಿತ ಅಪವಾದಗಳು ಏರುತ್ತಲೇ ಹೋದವು. ಮಾಡದ ತಪ್ಪಿನ ಆರೋಪ ಹೊತ್ತು ಆತ ಸತತವಾಗಿ ಕೊರಗುತ್ತಲೇ ಹೋದ. ಉಳಿದವರು ಇವನು ಏನೂ ಪ್ರತಿಭಟನೆ ತೋರದಿರುವ ಕಾರಣ ತಪ್ಪಿತಸ್ಥ ಇವನೇ ಎಂದು ದೃಢವಾಗಿ ನಂಬಿ ಬಳಿಕ ಎಲ್ಲದಕ್ಕೂ ಇವನನ್ನೇ ಹೊಣೆಗಾರ ನನ್ನಾಗಿಸಲು ತೊಡಗಿದರು. ಮರಣಕ್ಕೆ ಸಮಾನವಾದ ನೋವು ಅವನನ್ನು ಕಿತ್ತು ತಿನ್ನಲು ತೊಡಗಿದಾಗ ಆತ ಪ್ರತಿಭಟಿಸಿದ. ಆ ಪ್ರತಿಭಟನೆ ಕಂಡ ಎಲ್ಲರೂ ದಂಗಾಗಿ ಹೋದರು. ಇತರರ ಮನಸ್ಸಿಗೆ ನೋವು ಮಾಡಲು ಬಯಸದ ತನ್ನ ಮನಸ್ಸನ್ನು ಎಲ್ಲರೂ ಸೇರಿ ಸಿಗಿದು ಹಾಕಿದ ನೋವಿನಲ್ಲಿ ಅವನು ಜರ್ಜರಿತನಾಗಿ ಹೋದ. ರೌದ್ರಭಾವದ ಅವನನ್ನು ಕಂಡು ಅವರು ಹೆದರಿದರು. ಅವನ ತಂಟೆಗೆ ಹೋಗಲು ಮತ್ತೆ ಅವರು ಮುಂದಾಗಲಿಲ್ಲ. ಇತರರ ಕುರಿತು ಅತಿಯಾದ ಕಾಳಜಿ ವಹಿಸುವ ತನ್ನ ಸ್ವಭಾವವನ್ನು ಆತನೂ ಬದಲಿಸಿಕೊಂಡ.

ಇದೊಂದು ಕಾಲ್ಪನಿಕ ಕತೆ. ಆದರೆ ಯಾವಾಗ ನಮ್ಮ ನಿಸ್ವಾರ್ಥವು ಮಿತಿ ಮೀರುತ್ತದೋ ಅದು ಸ್ವತಃ ನಮಗೆ ದೊಡ್ಡ ತೊಂದರೆಯನ್ನು ತಂದೊಡ್ಡುತ್ತದೆ. ಅತಿಯಾದ ಸ್ವಾರ್ಥ ಹೇಗೆ ಒಳ್ಳೆಯದಲ್ಲವೋ ಹಾಗೇ ಅತಿಯಾದ ನಿಸ್ವಾರ್ಥವೂ ಒಳ್ಳೆಯದಲ್ಲ. ಅತಿಯಾದ ಒಳ್ಳೆಯತನ, ಇತರರ ಮೇಲೆ ಅತಿಯಾದ ಪ್ರೀತಿ ಅಥವಾ ಕಾಳಜಿ ಯಾವುದೂ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತದಂತೆ. ಸಕರಾತ್ಮಕ ಗುಣಗಳೆಂದು ಯಾವುದನ್ನೂ ಧಾರಾಳ ವಾಗಿ ಪ್ರದರ್ಶಿಸಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳದಿರೋಣ. ವಿವೇಕ, ಜಾಣ್ಮೆ, ಸ್ವಹಿತ ಕಾಪಾಡಲು ತಕ್ಕ ಸ್ವಾರ್ಥ, ಸತ್ಯ, ಪ್ರಾಮಾಣಿಕತೆ, ನಂಬಿಗಸ್ಥತನ ಜತೆ ಸೇರಿಸಿ ಆತ್ಮಸಾಕ್ಷಿಗೆ ಮೋಸ ಮಾಡದೇ ಬದುಕೋಣ.

ಅತಿಯಾದ ಸ್ವಾರ್ಥ ಬೇಡ. ಆದರೆ ನಮ್ಮನ್ನು ನಾವು ಕಳೆದುಕೊಳ್ಳುವಷ್ಟು ಒಳ್ಳೆಯತನವೂ ಕೂಡ ಬೇಡ. ಅದು ನಮಗೇ ಕುತ್ತು ತರುತ್ತದೆ. ಆದ್ದರಿಂದ ನಿಮ್ಮನ್ನು ನೀವು ಮೊದಲು ರಕ್ಷಿಸಿಕೊಂಡು ಉಳಿದವರಿಗೆ ಸಹಾಯ ಮಾಡಿ.

Advertisement

-ಜೆಸ್ಸಿ ಪಿ.ವಿ., ಕೆಯ್ಯೂರು

Advertisement

Udayavani is now on Telegram. Click here to join our channel and stay updated with the latest news.

Next