Advertisement

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

12:04 AM Aug 16, 2022 | Team Udayavani |

ಭಾರತ ಈಗಷ್ಟೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಿಸಿ­ಕೊಂಡಿದೆ. ಸೋಮವಾರವಷ್ಟೇ ಇಡೀ ದೇಶಕ್ಕೆ ದೇಶವೇ 76ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿದೆ. ಕೆಂಪುಕೋಟೆ­ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಬೆಂಗಳೂರಿನ ಮಾಣೆಕ್‌ ಶಾ ಮೈದಾನ­ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಷಣ ಮಾಡಿದ್ದು, ದೇಶ ಮತ್ತು ರಾಜ್ಯದ ಪ್ರಗತಿಯ ಯೋಜನೆಗಳನ್ನು ತೆರೆದಿರಿಸಿದ್ದಾರೆ.

Advertisement

ಈ ಹಿಂದಿನ 75 ವರ್ಷಗಳಲ್ಲಿ ಭಾರತ ಸಾಧಿಸಿದ್ದು ಅಪಾರ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಮುಂದಿನ 25 ವರ್ಷಗಳು ಸವಾಲಿನದ್ದಾಗಿವೆ ಎಂಬುದು ಸತ್ಯವೇ. ಏಕೆಂದರೆ, ಪ್ರಗತಿ ವಿಚಾರದಲ್ಲಿ ಇಡೀ ಜಗತ್ತೇ ತೀವ್ರ ಸ್ಪರ್ಧೆಯಲ್ಲಿದೆ. ಬಹುತೇಕ ರಾಷ್ಟ್ರಗಳು ತಾಮುಂದು ನಾ ಮುಂದು ಎಂದು ನಾಗಾಲೋಟದಲ್ಲಿ ಓಡುತ್ತಿವೆ. ಒಂದೊಮ್ಮೆ ಕೊರೊನಾ ಬಾಧಿಸದೇ ಹೋಗಿದ್ದರೆ, ಈ ವರ್ಷದ ಹೊತ್ತಿಗೆ ಭಾರತವೂ ಸೇರಿದಂತೆ ಬಹಳಷ್ಟು ದೇಶಗಳ ಪ್ರಗತಿ ಉತ್ತಮವಾಗಿ ಇರುತ್ತಿತ್ತು ಎಂಬುದನ್ನು ಆರ್ಥಿಕ ವಿಶ್ಲೇಷಕರೇ ಹೇಳಿದ್ದಾರೆ.

ಈಗ ಕಳೆದುಹೋದ ಕಾಲದ ಬಗ್ಗೆ ಚಿಂತಿಸಿ ಅಗತ್ಯವಿಲ್ಲ. ನಮ್ಮೆಲ್ಲರ ಮುಂದಿರುವುದು ಮುಂದಿನ 25 ವರ್ಷ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಚ ಪ್ರತಿಜ್ಞೆಗಳ ಬಗ್ಗೆ ಕರೆ ನೀಡಿದ್ದಾರೆ. ವಿಶೇಷವೆಂದರೆ, ಈ ಬಾರಿ ಮೋದಿ ಅವರು ಹೊಸ ಯೋಜನೆಗಳನ್ನು ಪ್ರಕಟಿಸಲು ಹೋಗಿಲ್ಲ. ಇದಕ್ಕೆ ಬದಲಾಗಿ ಪ್ರಗತಿಯ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಅಂದರೆ, ದೇಶದ ಪ್ರಗತಿಗಾಗಿ ಎಲ್ಲರ ಸಹಭಾಗಿತ್ವ, ಒಗ್ಗಟ್ಟು, ಸಂಪ್ರದಾಯಗಳ ಕುರಿತಾದ ಹೆಮ್ಮೆ, ಸಮಾನತೆ, ಮಹಿಳಾ ಸ್ವಾವಲಂಬನೆ ಮತ್ತು ಸಂಪನ್ಮೂಲಗಳ ಮಿತವ್ಯಯಕಾರಿ ಬಳಕೆಯ ಬಗ್ಗೆ ಒತ್ತಿ ಹೇಳಿದ್ದಾರೆ.

ಪ್ರಧಾನಿಯ ಭಾಷಣವನ್ನು ಒರೆಗೆ ಹಚ್ಚಿ ನೋಡುವುದಾದರೆ, ಈ ಎಲ್ಲ ಸಂಗತಿಗಳು ಒಪ್ಪತಕ್ಕವೇ ಆಗಿವೆ. ದೇಶದ ಎಲ್ಲ ಜನರ ಭಾಗೀದಾರಿಕೆ ಇಲ್ಲದೇ ಯಾವುದೇ ಕಾರಣಕ್ಕೂ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವು­ದಿಲ್ಲ. ಈ ವಿಚಾರವನ್ನು ಎಲ್ಲರೂ ಮನಗಾಣಬೇಕಾಗಿದೆ. ಇದು ಕೇವಲ ಜನರಿಗಷ್ಟೇ ಅಲ್ಲ, ಎಲ್ಲ ಸರಕಾರಗಳಿಗೂ ಅನ್ವಯವಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಶ್ರಮಿಸಿದರೆ ಮಾತ್ರ ಯಶಸ್ಸು ಸಾಧ್ಯ.

ಇನ್ನು ಮತ್ತೊಬ್ಬರ ಅನುಕರಣೆ ಮಾಡುವುದು ಸಲ್ಲದು ಎಂಬುದನ್ನು ಅಷ್ಟೇ ಸೂಕ್ಷ್ಮವಾಗಿ ಹೇಳಿದ್ದಾರೆ. ಅಂದರೆ, ಜಗತ್ತಿನಲ್ಲಿ ಬೇರೊಬ್ಬರು ನಮಗೆ ಹಾದಿ ತೋರಿಸಬೇಕಾಗಿಲ್ಲ. ನಮ್ಮ ದಾರಿಯಲ್ಲೇ ನಡೆದು, ಅಭಿವೃದ್ಧಿ ಸಾಧಿಸೋಣ ಎಂಬುದು ಅವರ ಈ ಮಾತಿನ ತಿರುಳು. ಏಕೆಂದರೆ, ಅಹಿಂಸಾ ಹೋರಾಟ ಸೇರಿದಂತೆ ಬಹುತೇಕ ವಿಚಾರಗಳಲ್ಲಿ ನಾವೇ ಜಗತ್ತಿಗೆ ಮಾದರಿಯಾಗಿದ್ದೇವೆ. ಹೀಗಾಗಿ, ಯಾವುದೇ ಕಾರಣಕ್ಕೂ ಇನ್ನೊಬ್ಬರ ಅನುಕರಿಸಿ ದಾಸ್ಯದ ಸಂಕೇತವನ್ನು ಪಾಲಿಸುವುದು ಬೇಡ ಎಂದಿರುವುದು ಸಕಾಲಿಕವಾದ ಸಂಗತಿ. ಇದರ ಜತೆಗೆ ಮೆಚ್ಚತಕ್ಕ ಅಂಶವೆಂದರೆ, ನಮ್ಮ ಪರಂಪರೆಯ ರಕ್ಷಣೆ ಮತ್ತು ಭಾಷೆಯ ಮೇಲಿನ ಕೀಳರಿಮೆ ತೊರೆಯು­ವುದು. ನಮ್ಮಲ್ಲಿ ಎಷ್ಟೋ ಪ್ರತಿಭೆ­ಗಳಿ­ದ್ದರೂ, ಭಾಷೆಯ ಸಮಸ್ಯೆಯಿಂದ ಬೆಳೆಕಿಗೆ ಬರುವುದೇ ಇಲ್ಲ. ಈ ಕೀಳರಿಮೆ ದಾಟಿ ಬೆಳೆಯಬೇಕಾಗಿದೆ. ಅಲ್ಲದೆ, ನಮಗೆ ಬೇರೊಂದು ಭಾಷೆ ಬರುವುದಿಲ್ಲವೆಂಬ ಸಂಕುಚಿತ ಮನೋಭಾವ ತೊರೆಯಬೇಕು ಎಂದಿರು­ವುದು ಈ ಹೊತ್ತಿನಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಸಂಗತಿ.

Advertisement

ಏನೇ ಆಗಲಿ ಪ್ರಧಾನಿ ಮೋದಿ ಮುಂದಿನ 25 ವರ್ಷಗಳ ಕನಸನ್ನು ಬಿತ್ತಿ­ದ್ದಾರೆ. ಶತಮಾನೋತ್ಸವದ ವೇಳೆಗೆ ಭಾರತ, ವಿಶ್ವ ಕಿರೀಟಯಾಗಬೇಕೆಂಬುದು ಕನಸು. ಎಲ್ಲರೂ ಈ ಕನಸನ್ನು ನನಸು ಮಾಡುವತ್ತ ಮುಂದಾಗೋಣ.

Advertisement

Udayavani is now on Telegram. Click here to join our channel and stay updated with the latest news.

Next