ಮಂಗಳೂರು: ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೇ 27ರಿಂದ 29ರ ವರೆಗೆ ಪಣಂಬೂರು ಕಡಲತಡಿಯಲ್ಲಿ ಹಮ್ಮಿಕೊಂಡಿರುವ ಸರ್ಫಿಂಗ್ ಕ್ರೀಡೆಗೆ ಸರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಆಯೋಜಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನ್ಯಾಶನಲ್ ಸರ್ಫಿಂಗ್ ಫೆಸ್ಟಿವಲ್ 2022 ಕುರಿಂತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಅಪಾಯಗಳು, ಅವಘಡಗಳು ಸಂಭವಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಲೈಫ್ ಗಾರ್ಡ್ಗಳು, ಆ್ಯಂಬುಲೆನ್ಸ್, ಮೆಡಿಕಲ್ ಪರಿಕರವಿರುವ ವಾಹನ, ಜೀವರಕ್ಷಕ ಸಾಧನಗಳು, ದೋಣಿಗಳು ಸೇರಿದಂತೆ ಅಪಾಯದಿಂದ ರಕ್ಷಿಸುವ ಕಾರ್ಯಾಚರಣೆ ಸಾಧನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದರು.
ಜಿಲ್ಲಾಡಳಿತದಿಂದ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಲಾಗುವುದು, ಈ ಸಾಹಸ ಕ್ರೀಡೆಗಳು ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಬೇಕು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಅದಕ್ಕಾಗಿ ಹೆಚ್ಚಿನ ಪ್ರಚಾರ ಕಾರ್ಯ ಮಾಡಬೇಕು ಎಂದವರು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ರಾಮ್ ಮೋಹನ್, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಗೌರವ ಹೆಗ್ಡೆ, ಎನ್ಎಂಪಿಟಿಯ ಸಿವಿಲ್ ಎಂಜಿನಿಯರ್ ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.