Advertisement

Karnataka: ಮೃಗಾಲಯಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌: ಸಚಿವ ಖಂಡ್ರೆ

11:36 PM Sep 02, 2023 | Team Udayavani |

ಬೆಂಗಳೂರು: ಮೈಸೂರಿನಲ್ಲಿರುವ ಶ್ರೀಚಾಮ ರಾಜೇಂದ್ರ ಮೃಗಾಲಯ ಮತ್ತು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಮಹಾ ಯೋಜನೆ (ಮಾಸ್ಟರ್‌ ಪ್ಲಾನ್‌) ರೂಪಿಸಲು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದರು.

Advertisement

ಶನಿವಾರದಂದು ವಿಕಾಸಸೌಧದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮೊದಲ ಸಭೆ ನಡೆಸಿದ ಅವರು, ಮೃಗಾಲಯದಲ್ಲಿರುವ ಪ್ರಾಣಿಗಳ ಸಂತಾನೋತ್ಪತ್ತಿಯ ಪ್ರಮಾಣವೂ ಉತ್ತಮವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ವನ್ಯಮೃಗಗಳ ರಕ್ಷಣೆ ಮತ್ತು ಇಂದಿನ ಮಕ್ಕಳಿಗೆ ವಿವಿಧ ಪ್ರಾಣಿ ಹಾಗೂ ಸಸ್ಯ ಸಂಕುಲಗಳ ಬಗ್ಗೆ ಮಾಹಿತಿ ನೀಡುವ ಮೃಗಾಲಯಗಳನ್ನು ಹೆಚ್ಚು ಮಾಹಿತಿಪೂರ್ಣ ಮತ್ತು ಪ್ರೇಕ್ಷಕಸ್ನೇಹಿ ಮಾಡಲು ಸಮಗ್ರ ನೀತಿ ರೂಪಿಸುವಂತೆ ತಿಳಿಸಿದರು.

ರಾಜ್ಯದಲ್ಲಿ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ, ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯ, ಗದಗ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಹಂಪಿ ಸಹಿತ ಒಟ್ಟು 9 ಮೃಗಾಲಯಗಳಿವೆ. ಈ ಪೈಕಿ ಮೈಸೂರು ಮತ್ತು ಬೆಂಗಳೂರಿನ ಮೃಗಾಲಯಗಳು ಹೆಚ್ಚು ಜನಪ್ರಿಯಗೊಂಡಿದ್ದು, ವಾರ್ಷಿಕ ಕನಿಷ್ಠ 30 ಲಕ್ಷ ಮಂದಿ ಭೇಟಿ ನೀಡುತ್ತಾರೆ ಎಂದರು.

ಲಾಭದಾಯಕವಾಗಿರುವ ಈ ಎರಡು ಮೃಗಾಲಯದಂತೆ ಉಳಿದ ಮೃಗಾಲಯಗಳಲ್ಲೂ ಮೂಲಸೌಕರ್ಯ ಮೇಲ್ದರ್ಜೆಗೇರಿ ಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗದಗ ಮೃಗಾಲಯಕ್ಕೆ 3.5 ಕೋಟಿ ರೂ. ಅನುದಾನ ನೀಡಲಾಗಿದ್ದು, ಒಟ್ಟಾರೆ ಮೃಗಾಲಯ ಪ್ರಾಧಿಕಾರಕ್ಕೆ 7 ಕೋಟಿ ರೂ. ಇರುವ ಹೂಡಿಕೆ ನಿಧಿ (ಕಾರ್ಪಸ್‌ ಫ‌ಂಡ್‌)ಯನ್ನು 20 ಕೋಟಿ ರೂಪಾಯಿಗೆ ಏರಿಸಬೇಕೆಂಬ ಚಿಂತನೆ ಇದೆ. ಸೆ.8ಕ್ಕೆ ಪ್ರಾಧಿಕಾರದ ಮತ್ತೂಂದು ಸಭೆ ನಡೆಸಿ, ಈ ಕುರಿತು ಹೆಚ್ಚಿನ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಹಿರಿಯ ಅರಣ್ಯಾಧಿ ಕಾರಿಗಳಾದ ರಾಜೀವ್‌ ರಂಜನ್‌, ಸುಭಾಷ್‌ ಮಾಲ್ಕೆಡೆ, ಸಂಜಯ್‌ ಬಿಜೂjರ್‌, ಕುಮಾರ್‌ ಪುಷ್ಕರ್‌, ಎ.ಕೆ. ಸಿಂಗ್‌ ಮತ್ತಿತರರು ಇದ್ದರು.

Advertisement

ಮೈಸೂರಿನಿಂದ ಗದಗಕ್ಕೆ ಜಿರಾಫೆ?
ಪ್ರಸ್ತುತ ಮೈಸೂರು ಮೃಗಾಲಯದಲ್ಲಿ ಜಿರಾಫೆಗಳಿದ್ದು, ಎಲ್ಲ ಮೃಗಾಲಯಗಳಿಂದಲೂ ಜಿರಾಫೆಗೆ ಬೇಡಿಕೆ ಇದೆ. ಜಿರಾಫೆ ಇದ್ದರೆ ಮಕ್ಕಳು ಹಾಗೂ ಪ್ರವಾಸಿಗರು ಹೆಚ್ಚು ಆಕರ್ಷಿತರಾಗುತ್ತಾರೆಂಬ ನಂಬಿಕೆ ಇದೆ. ಪ್ರಮುಖವಾಗಿ ಜಿರಾಫೆಗಳು ಯಾವ್ಯಾವ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ? ಅವುಗಳ ಜೀವಿಸುವಿಕೆಗೆ ಎಲ್ಲೆಲ್ಲಿ ಬಾಧಕವಿಲ್ಲ ಎಂಬುದರ ಅಧ್ಯಯನಗಳು ನಡೆಯುತ್ತಿದ್ದು, ಈ
ಅಧ್ಯಯನ ಯಶಸ್ವಿಯಾದರೆ, ಮೈಸೂರು ಮೃಗಾಲಯದಲ್ಲಿರುವ ಜಿರಾಫೆಗಳಲ್ಲಿ ಒಂದೆರಡನ್ನು ಗದಗ ಮೃಗಾಲಯಕ್ಕೆ ಸ್ಥಳಾಂತರಿಸುವ ಚಿಂತನೆ ಇದೆ. ಗದಗ ಮತ್ತು ಕಲಬುರಗಿ ಮೃಗಾಲಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿ ನೀಡುವಂತೆಯೂ ಸೂಚಿಸಿದ್ದೇನೆ ಎಂದು ಸಚಿವ ಖಂಡ್ರೆ ಮಾಹಿತಿ ನೀಡಿದರು.

ಬೀದರ್‌ ಜಿಲ್ಲೆಯಲ್ಲಿ ದಟ್ಟ ಅಡವಿ ಇಲ್ಲದ್ದರಿಂದ ಮಕ್ಕಳಿಗೆ ವನ್ಯಮೃಗಗಳ ನೈಜ ಮಾಹಿತಿ ಇಲ್ಲ. ಈ ಭಾಗದಲ್ಲಿ ಕೃಷ್ಣಮೃಗಗಳ ಸಂರಕ್ಷಣೆಗೆ ಸರಕಾರ ಬಜೆಟ್‌ನಲ್ಲಿ ಹಣ ಇಟ್ಟಿದ್ದು, ಜತೆಗೆ ಮೃಗಾಲಯ ಸ್ಥಾಪನೆ ಮಾಡುವ ಅಗತ್ಯವೂ ಕಾಣುತ್ತಿದೆ. ಹೀಗಾಗಿ ಕ್ರಿಯಾಯೋಜನೆ ರೂಪಿಸಲು ಸೂಚನೆ ಕೊಟ್ಟಿದ್ದೇನೆ.
-ಈಶ್ವರ್‌ ಖಂಡ್ರೆ, ಅರಣ್ಯ ಸಚಿವ

2 ತಿಂಗಳಲ್ಲಿ ಪರಿಸರ ಪ್ರವಾಸೋದ್ಯಮ ನೀತಿ
ಬೆಂಗಳೂರು: ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಪರಿಸರ ಮತ್ತು ಅರಣ್ಯ ನಾಶಕ್ಕೆ ಅವಕಾಶ ಇಲ್ಲದಂತೆ ಪ್ರವಾಸೋದ್ಯಮ ನೀತಿ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದರು.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಭೆ ನಡೆಸಿದ ಅವರು, ಕರಾವಳಿ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ರಿವರ್‌ ರಾಫ್ಟಿಂಗ್‌, ಚಾರಣ ಸಹಿತ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಇಂದಿನ ಯುವಜನರಲ್ಲಿ ಈ ಬಗ್ಗೆ ಹೆಚ್ಚಿನ ಆಸಕ್ತಿಯೂ ಇದೆ. ಹೀಗಾಗಿ 2 ತಿಂಗಳಲ್ಲಿ ಅತ್ಯುತ್ತಮ ಪರಿಸರ ಪ್ರವಾಸೋದ್ಯಮ ನೀತಿಯೊಂದಿಗೆ ಬರುವಂತೆ ತಿಳಿಸಿದ್ದಾರೆ.

ಕಸ್ತೂರಿ ರಂಗನ್‌ ವರದಿ ಬಗ್ಗೆ ಸದ್ಯಕ್ಕಿಲ್ಲ ನಿರ್ಣಯ
ಪರಿಸರ ಸಂರಕ್ಷಣೆ ಸಲುವಾಗಿ ಡಾ| ಕಸ್ತೂರಿ ರಂಗನ್‌ ವರದಿ ಕೊಟ್ಟು 10 ವರ್ಷ ಗಳಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದನ್ನರಿತು ಕೇಂದ್ರ ಸರಕಾರವು ಸಂಜಯ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದರ ವರದಿಯು ಬರಬೇಕಿದೆ. ವರದಿ ಬಂದ ಬಳಿಕ ಸ್ಥಳೀಯರು, ತಜ್ಞರು, ಪರಿಸರವಾದಿಗಳನ್ನು ವಿಶ್ವಾಸಕ್ಕೆ ಪಡೆದು ಸಂಪುಟ ಉಪಸಮಿತಿ ಹಾಗೂ ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಿಯೇ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲು 150 ಕೋಟಿ ರೂ.
ಮಾನವ-ವನ್ಯಜೀವಿ ಸಂಘರ್ಷ ತಡೆ ಸಲುವಾಗಿ ಅರಣ್ಯ ಇಲಾಖೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅರಣ್ಯದಂಚಿನ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪ್ರಮುಖವಾಗಿ ಆನೆ ದಾಳಿ ತಡೆಗೆ ಸೌರವಿದ್ಯುತ್‌ ಬೇಲಿ ಅಳವಡಿಕೆ ಅಥವಾ ಕಂದಕ ನಿರ್ಮಾಣಕ್ಕಿಂತ ರೈಲ್ವೆ ಬ್ಯಾರಿಕೇಡ್‌ ಹೆಚ್ಚು ಪರಿಣಾಮಕಾರಿ. ಸುಮಾರು 300 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣಕ್ಕೆ ಬೇಡಿಕೆ ಇದ್ದು, ಸದ್ಯಕ್ಕೆ 100 ಕಿ.ಮೀ. ಬ್ಯಾರಿಕೇಡ್‌ ನಿರ್ಮಿಸಲು 150 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಲಾಗುತ್ತಿದೆ. 2 ತಿಂಗಳಲ್ಲಿ ರೈಲ್ವೆ ಕಂಬಿ ಅಳವಡಿಸುವ ಕಾರ್ಯ ಆರಂಭಿ ಸಲಾಗುವುದು ಎಂದು ಹೇಳಿದರು.

ಹೊಸ ಆನೆ ಕಾರ್ಯಪಡೆ
ಕೊಡಗು ಆನೆ ಕಾರ್ಯಾಚರಣೆ ಪಡೆಯನ್ನು ಸಶಕ್ತಗೊಳಿಸಿದ್ದು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ಆನೆ ಕಾರ್ಯಪಡೆ ಮಾಡಲಾಗಿದೆ. ಆದರೂ ಆನೆ ದಾಳಿಗಳು ಹೆಚ್ಚುತ್ತಲೇ ಇವೆ. ಇದರ ತಡೆಗಾಗಿ ರೈಲ್ವೆ ಬ್ಯಾರಿಕೇಡಿಂಗ್‌ ಮಾಡಲಾಗುತ್ತದೆ. ಇತ್ತೀಚೆಗೆ ಆನೆ ದಾಳಿಯಿಂದ ಅಸುನೀಗಿದ ವೆಂಕಟೇಶ್‌ ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಆರ್ಥಿಕ ಸಚಿವರೂ ಆಗಿರುವ ಸಿಎಂ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

 

Advertisement

Udayavani is now on Telegram. Click here to join our channel and stay updated with the latest news.

Next