Advertisement

ಪ್ಲಾಸ್ಟಿಕ್‌ ಬಳಕೆ ವಿರುದ್ದ ಸಮರ-ಪರಿಸರ ಪ್ರೇಮ

03:16 PM Jun 05, 2022 | Team Udayavani |

ಗದಗ: ಪರಿಸರದ ತುಂಬೆಲ್ಲ ಇಂದು ಪ್ಲಾಸ್ಟಿಕ್‌ ಬಳಕೆ ವ್ಯಾಪಕವಾಗಿದೆ. ಪ್ಲಾಸ್ಟಿಕ್‌ ಬಳಕೆ ಪರಿಣಾಮ ಮಾನವನ ಜೊತೆಗೆ ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ, ಪರಿಸರಕ್ಕೂ ಅಪಾಯವನ್ನುಂಟು ಮಾಡುತ್ತಿದೆ.

Advertisement

ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿ ಣಾಮ ತಡೆಗಟ್ಟಲು ಸಾವಯವ ಕೃಷಿಕರೊಬ್ಬರು ಕಿರಾಣಿ, ಜನರಲ್‌ ಸ್ಟೋರ್ಸ್‌ ಹಾಗೂ ಪಾನ್‌ ಅಂಗಡಿಗಳು ಬಿಸಾಡುವ ಪಾನ್‌ ಮಸಾಲಾ, ಗುಟ್ಕಾ ಪ್ಲಾಸ್ಟಿಕ್‌ ಪೊಟ್ಟಣಗಳು ಹಾಗೂ ನಿರುಪಯುಕ್ತ ಪ್ಲಾಸ್ಟಿಕ್‌ ಬಾಟಲ್‌ಗ‌ಳನ್ನು ಸಂಗ್ರಹಿಸಿಕೊಂಡು ಮರು ಬಳಕೆ ಮಾಡಿ ಸೊಪ್ಪು, ಸಸಿಗಳನ್ನು ನೆಟ್ಟು ಕೈತೋಟ ನಿರ್ಮಿಸಿಕೊಂಡಿದ್ದಾರೆ.

ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ವೀರೇಶ ಶಂಕರಪ್ಪ ನೇಗಲಿ ಅವರು ಬಿಎ ಪದವೀಧರರಾಗಿದ್ದು, ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾದ ಕಾರಣ ಬೇಸರಗೊಂಡಿದ್ದ ವೀರೇಶ ಅವರು ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಮಣ್ಣು ತುಂಬಿ ತರಕಾರಿ ಹಾಗೂ ವಿವಿಧ ಗಿಡಗಳ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ದರ್ಗಾ, ಬೀರಲಿಂಗೇಶ್ವರ ದೇವಸ್ಥಾನ, ಪಶು ವೈದ್ಯಕೀಯ ಆಸ್ಪತ್ರೆ ಸೇರಿದಂತೆ ಹಲವೆಡೆ ಖಾಲಿಯಿದ್ದ ಜಾಗದಲ್ಲಿ ತೇಗ, ಸಾಗವಾಣಿ, ಪೇರಲ, ಹೆಬ್ಬೇವು, ಬೇವು, ನೆರಳೆ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಸಹಕಾರಿ ಸಂಘದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಪೋಲಾಗುತ್ತಿದ್ದ ನೀರಿನ ಹರಿವಿನ ಪಕ್ಕದಲ್ಲೂ ಗಿಡ ನೆಟ್ಟು ಪರಿಸರ ಪ್ರೇಮ ಸಾರುತ್ತಿದ್ದಾರೆ. ಅಲ್ಲದೇ, ಪರಿಸರ ಪ್ರೇಮಿಗಳ ಸಂಘವನ್ನು ಕಟ್ಟಿಕೊಂಡಿರುವ ವೀರೇಶ ಅವರು ಪ್ರತಿಯೊಬ್ಬರಿಗೂ ಗಿಡ ಕೊಟ್ಟು ಪೋಷಿಸುವ ಜವಾಬ್ದಾರಿ ನೀಡಿದ್ದಾರೆ. ಜೊತೆಗೆ ಜನ್ಮದಿನ ಹಾಗೂ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಸಿಗಳನ್ನು ಉಡುಗೊರೆಯಾಗಿ ಕೊಟ್ಟು ಪೋಷಿಸುವಂತೆ ಸಲಹೆ ನೀಡುತ್ತ ಬಂದಿದ್ದಾರೆ.

ಸಾವಯವ ಕೃಷಿಕರೂ ಆಗಿರುವ ವೀರೇಶ ಅವರು ಆರೂವರೆ ಎಕರೆ ಒಣಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. 5 ಜವಾರಿ ಆಕಳು, 2 ಜರ್ಸಿ, 1ಕರು ಸಾಕಿರುವ ಅವರು, ಅವುಗಳ ಸಗಣಿ, ಗೋಮೂತ್ರ ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಜೋಳ, ಹೆಸರು, ಮಡಿಕೆ, ಅಲಸಂದಿ, ತೊಗರಿ, ಹಿಂಗಾರಿನಲ್ಲಿ ಉಳ್ಳಾಗಡ್ಡಿ, ಕಡಲೆ, ಕುಸುಬೆ ಬೆಳೆಯುತ್ತಿದಾರೆ. ಕಳೆದ ಮುಂಗಾರಿನಲ್ಲಿ 60 ಗುಂಟೆಯಲ್ಲಿ ಬೆಳೆದಿದ್ದ ಶೇಂಗಾ 65 ಚೀಲ ಇಳುವರಿ ಬಂದಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

Advertisement

ಶಾಲಾ-ಕಾಲೇಜು ಹಂತದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನನಗೆ, ಗ್ರಾಮದಲ್ಲಿ ಒಂದು ದಿನ ಬೀಸಿದ ಬಿರುಗಾಳಿ ಮತ್ತಷ್ಟು ಪರಿಸರದ ಬಗ್ಗೆ ಕಾಳಜಿ ಹೊಂದಲು ಕಾರಣವಾಯಿತು. ಬಿರುಗಾಳಿಯಿಂದ ಪ್ಲಾಸ್ಟಿಕ್‌ ತ್ಯಾಜ್ಯಗಳೆಲ್ಲವೂ ಮನೆಯೊಳಗೆ ಹಾಗೂ ರಸ್ತೆ ಸಂಚಾರಕ್ಕೆ ಅಡೆತಡೆ ಉಟು ಮಾಡಿದ್ದವು. ಇದರಿಂದದ ಎಚ್ಚೆತ್ತುಕೊಂಡು, ಪ್ಲಾಸ್ಟಿಕ್‌ ಸಂಗ್ರಹಿಸಿ ಮಣ್ಣು ತುಂಬಿ, ಗಿಡ ನೆಟ್ಟು ಮರು ಬಳಕೆ ಮಾಡಲು ಪ್ರಯತ್ನಿಸಿದೆ. ­ –ವೀರೇಶ ನೇಗಲಿ, ಸಾವಯವ ಕೃಷಿಕ, ಪರಿಸರ ಪ್ರೇಮಿ

ಅಂಗನವಾಡಿ, ಗ್ರಾಪಂ ಕಟ್ಟಡದ ಪಕ್ಕದಲ್ಲಿ ಸಾರ್ವಜನಿಕರಿಂದ ಮೂತ್ರ ವಿಸರ್ಜನೆ ನಿರಾತಂಕವಾಗಿ ನಡೆಯುತ್ತಿತ್ತು. ಇದನ್ನರಿತ ವೀರೇಶ ಅವರು ತೇಗ, ಸಾಗವಾಣಿ, ಹೆಬ್ಬೇವು ಗಿಡಗಳನ್ನು ಬೆಳೆಸಿ ವನವನ್ನಾಗಿಸಿದರು. ಇದರಿಂದ ಮೂತ್ರ ವಿಸರ್ಜನೆ ಬಂದ್‌ ಆಗಿದೆ. ಪರಿಸರದ ಜಾಗೃತಿ ಹೆಚ್ಚಾಗಿದೆ. ­ಪ್ರಕಾಶ ಕುಲಕರ್ಣಿ, ಯಲ್ಲಪ್ಪ ಲಕ್ಕುಂಡಿ, ಕೋಟುಮಚಗಿ ಗ್ರಾಮಸ್ಥರು  

-ಅರುಣಕುಮಾರ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next