Advertisement

ಕಾಸರಗೋಡು ಜಿಲ್ಲೆಗೆ ಹರಿದು ಬರುತ್ತಿರುವ ಗಾಂಜಾ

02:45 AM Jul 16, 2017 | Harsha Rao |

ಕಾಸರಗೋಡು: ಮದ್ಯ ಸಹಿತ ಹೊಗೆಸೊಪ್ಪು ಉತ್ಪನ್ನಗಳನ್ನು ನಿಷೇಧಿಸಿದ್ದರೂ ಕಾಸರಗೋಡು ಜಿಲ್ಲೆಗೆ ನಿರಂತರವಾಗಿ ಮದ್ಯ, ಹೊಗೆಸೊಪ್ಪು ಉತ್ಪನ್ನಗಳು ಮತ್ತು ಮಾದಕ ದ್ರವ್ಯ ಗಾಂಜಾ ಹರಿದು ಬರುತ್ತಿದೆ. ಹಲವೆಡೆಗಳಿಂದ ಇಂತಹ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದರೂ, ಬಯಲಾಗುವ ಪ್ರಕರಣಗಳಿಗಿಂತ ಬಯಲಾಗದ ಪ್ರಕರಣಗಳೇ ಹೆಚ್ಚು.  ಇದೇ ವೇಳೆ ವ್ಯವಸ್ಥಿತ ಮಾಫಿಯಾ ತಂಡ ಗಾಂಜಾ ಸಾಗಾಟದಲ್ಲಿ ಸಕ್ರಿಯವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 12 ವರ್ಷದ ಬಾಲಕ ಕೂಡಾ ಗಾಂಜಾ ಗುಲಾಮನಾಗಿದ್ದಾನೆಂದರೆ ಇದರ ಗಂಭೀರತೆಯನ್ನು ಅರ್ಥೈಸಿಕೊಳ್ಳಬಹುದು.
ಕಾಸರಗೋಡು ಜಿಲ್ಲೆಯಲ್ಲಿ 12 ವರ್ಷದ ಬಾಲಕನಿಗೂ ಕೂಡ ಮಾದಕ ದ್ರವ್ಯದ ಚಟ ಹಿಡಿದಿದೆ ಎಂದು ಸರ್ವೆಯೊಂದರಲ್ಲಿ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ  700 ಕಿಲೋಗಿಂತ ಅಧಿಕ  ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

Advertisement

ವಿದ್ಯಾರ್ಥಿಗಳಲ್ಲೇ ಹೆಚ್ಚು
ವಿದ್ಯಾರ್ಥಿಗಳಲ್ಲಿ ಮದ್ಯಕ್ಕಿಂತಲೂ ಮಾದಕ ದ್ರವ್ಯ ಬಳಕೆ ಅಧಿಕವಾಗುತ್ತಿದೆ. ಸುಲಭವಾಗಿ ಸಾಗಾಟ, ಬಳಸಲು ಸುಲಭ ಮತ್ತು ಅಧಿಕ ಮಾದಕತೆ ಲಭಿಸುತ್ತದೆ ಎಂಬ ಕಾರಣದಿಂದ ಗಾಂಜಾ ಸಹಿತ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಬೊಟ್ಟು ಮಾಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಿಂದಲೂ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ವಶಪಡಿಸಲಾಗಿದೆ ಎಂದು ನಾರ್ಕೋಟಿಕ್ಸ್‌ ಸೆಲ್‌ ಅಧಿಕಾರಿಗಳು ಹೇಳುತ್ತಾರೆ. ಅಂತಾರಾಜ್ಯ ಮಾದಕ ಸಾಗಾಟದಾರರನ್ನು ಬಂಧಿಸಿ ವಾಹನಗಳನ್ನು ವಶಪಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರನ್ನು ಬಂಧಿಸಲು ನಾಲ್ಕು ಶ್ಯಾಡೋ ಪೊಲೀಸ್‌ ವಿಭಾಗವನ್ನು ರಚಿಸಲಾಗಿದ್ದು, ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಮಾದಕ ಬೆರೆತ ಮಿಠಾಯಿ, ಚೂಯಿಂಗಂ, ಜ್ಯೂಸ್‌ ಮೊದಲಾದವು ಗಡಿ ದಾಟಿ ಕಾಸರಗೋಡು ಜಿಲ್ಲೆಗೆ ಹರಿದು ಬರುತ್ತಿದೆ. ಅನ್ಯ ರಾಜ್ಯಗಳ ಕಾರ್ಮಿಕರು ಗಾಂಜಾ, ಪಾನ್‌ ಮಸಾಲ ಮೊದಲಾದ ಮಾದಕ ವಸ್ತುಗಳನ್ನು ಜಿಲ್ಲೆಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯ ಶಾಲಾ ವಿದ್ಯಾರ್ಥಿಗಳನ್ನು ಗುರಿಯಿರಿಸಿಕೊಂಡು ಮಾದಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ತಿಳಿವಳಿಕೆ ತರಗತಿ ನಡೆಸಲು ಆರು ಮಂದಿ ತರಬೇತುದಾರರನ್ನು ನೇಮಿಸಿದೆ. ಜಿಲ್ಲೆಯ 81 ಶಾಲೆಗಳಲ್ಲಿ 40 ವಿದ್ಯಾರ್ಥಿಗಳಂತೆ ಮಾದಕ ವಿರುದ್ಧ ಕ್ಲಬ್‌ಗಳನ್ನು ರೂಪೀಕರಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆ.

ರಾಜ್ಯ ಯುವಜನ ಆಯೋಗ ಮದ್ಯ ಹಾಗೂ ಮಾದಕ ದ್ರವ್ಯ ಸೇವನೆಯಿಂದ ತಲೆದೋರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಯುವಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿ ಅಭಿಯಾನ ನಡೆಸುತ್ತಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದ ರ್ಯಾಲಿಗಳು, ಸಮಾವೇಶಗಳು, ತಿಳಿವಳಿಕೆ ಶಿಬಿರಗಳು ನಡೆಯುತ್ತಿವೆ. ಮಾದಕ ದ್ರವ್ಯ ವಿರುದ್ಧ ಸಾಮೂಹಿಕ ಓಟ ಕಾರ್ಯಕ್ರಮವೂ ಜರಗುತ್ತಿದೆ. ವಿದ್ಯಾರ್ಥಿಗಳು, ಯುವಜನ ಸಂಘಟನೆಗಳು, ಕುಟುಂಬಶ್ರೀ, ಎನ್‌.ಸಿ.ಸಿ, ಎನ್‌.ಎಸ್‌.ಎಸ್‌, ರೆಸಿಡೆನ್ಸ್‌ ಅಸೋಸಿಯೇಶನ್‌, ಸಮಾಜ ಸೇವಾ ಸಂಘಟನೆಗಳು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮೊದಲಾದವುಗಳ ಸಹಕಾರದೊಂದಿಗೆ ಮಾದಕ ವಿರುದ್ಧ ಅಭಿಯಾನ ನಡೆಯುತ್ತಿದೆ.

ಕಾಲೇಜು ಕ್ಯಾಂಪಸ್‌ಗಳಲ್ಲಿ ಮದ್ಯ, ಮಾದಕ ಮುಕ್ತಗೊಳಿಸಲು ಸೇಫ್ ಕ್ಯಾಂಪಸ್‌, ಕ್ಲೀನ್‌ ಕ್ಯಾಂಪಸ್‌ ಎಂಬ ಕಾರ್ಯಕ್ರಮವೂ ನಡೆಯುತ್ತಿದೆ. ಶಾಲೆಗಳಲ್ಲೂ, ಕಾಲೇಜುಗಳಲ್ಲೂ ವಿಚಾರಗೋಷ್ಠಿಗಳು, ನಾಟಕ, ಕಿರು ಚಿತ್ರ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಚಿತ್ರ ರಚನೆ, ಪ್ರಬಂಧ, ಭಾಷಣ ಸ್ಪರ್ಧೆಗಳು ನಡೆಯುತ್ತಿವೆ. ಆದರೂ ಕಾಸರಗೋಡು ಜಿಲ್ಲೆಗೆ ಮಾದಕ ದ್ರವ್ಯ ಸಾಗಾಟ ಪ್ರಮಾಣ ನಿಯಂತ್ರಣದಲ್ಲಿ ಹೇಳಿಕೊಳ್ಳುವಂತಹ ಫಲಿತಾಂಶ ಬಂದಿಲ್ಲ.

ಶಾಲಾ ಪರಿಸರದಲ್ಲಿ ಮಾದಕ ವಸ್ತುಗಳ ತಪಾಸಣೆ  
ಶಾಲಾ, ಕಾಲೇಜು ಪರಿಸರಗಳಲ್ಲಿ ಗಾಂಜಾ, ನಿಷೇಧಿತ ಪಾನ್‌ ಮಸಾಲ ಉತ್ಪನ್ನಗಳ ಮಾರಾಟವನ್ನು ತಡೆಗಟ್ಟಲು ಪೊಲೀಸರು ತಪಾಸಣೆಯನ್ನು ಸಕ್ರಿಯಗೊಳಿಸಿದ್ದಾರೆ. ಹಲವೆಡೆಗಳಲ್ಲಿ ಇಂತಹ ಮಾದಕ ವಸ್ತುಗಳು ರಹಸ್ಯವಾಗಿ ಮಾರಾಟವಾಗುತ್ತಿವೆೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಮಾದಕ ವಸ್ತುಗಳ ಮಾರಾಟ, ಸಾಗಾಟ ಬಗ್ಗೆ ಮಾಹಿತಿ ಲಭಿಸಿದಲ್ಲಿ  ಸಾರ್ವಜನಿಕರು ತತ್‌ಕ್ಷಣ ಹತ್ತಿರದ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಅಥವಾ ಜಿಲ್ಲಾ  ಪೊಲೀಸರ “ಆಪರೇಶನ್‌ ಮೂನ್‌ ಲೈಟ್‌’ ನಂಬ್ರ ಆಗಿರುವ 9497975812 ನಂಬ್ರಕ್ಕೆ ಮಾಹಿತಿ ನೀಡಬಹುದು. ಶಾಲಾ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ಗಳನ್ನು ಶಾಲೆ ಪರಿಸರದ ಅಂಗಡಿಗಳಲ್ಲಿ ಇಡುತ್ತಿರುವುದಾಗಿ ಮಾಹಿತಿ ಲಭಿಸಿದೆ. ಇಂತಹ ಮೊಬೈಲ್‌ ಲಭಿಸಿದಲ್ಲಿ ಅಂಗಡಿಗಳ ವಾರಿಸುದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next