Advertisement

Maravanthe, ಮೀನುಗಾರಿಕಾ ಹೊರಬಂದರು; ಶುರುವಾಗದ ಕಾಮಗಾರಿ: ಮೀನುಗಾರರಿಗೆ ತೂಫಾನ್‌ ಭೀತಿ

03:39 PM May 19, 2023 | Team Udayavani |

ಕುಂದಾಪುರ: ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಕೇರಳ ಮಾದರಿಯ ಔಟ್‌ ಡೋರ್‌ ಬಂದರಿನ ಒಂದನೇ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, 85 ಕೋ.ರೂ. ವೆಚ್ಚದ ಎರಡನೇ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತು 2 ವರ್ಷಗಳಾದರೂ ಸಿಆರ್‌ಝಡ್‌ ತೊಡಕಿನಿಂದಾಗಿ ಕಾಮಗಾರಿ ಆರಂಭಗೊಂಡಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ತೂಫಾನ್‌ ಶುರುವಾಗಲಿದ್ದು, ಮೀನುಗಾರರಲ್ಲಿ ಈಗಿನಿಂದಲೇ ಆತಂಕ ಮನೆಮಾಡಿದೆ.

Advertisement

ಕಳೆದ ತೌಖೆ¤ ಚಂಡಮಾರುತದ ಪರಿಣಾಮ ಮರವಂತೆಯ ಸುಮಾರು ಒಂದು ಕಿ.ಮೀ. ನಷ್ಟು ಉದ್ದದ ಕಡಲ ತೀರ ಕಡಲ ಅಲೆಗಳ ಅಬ್ಬರಕ್ಕೆ ನಲುಗಿ ಹೋಗಿತ್ತು. ಈ ಭಾಗದ ಪ್ರಮುಖ ಸಂಪರ್ಕ ರಸ್ತೆ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿತ್ತು. ನೂರಾರು ಮರಗಳು ಕಡಲ ಪಾಲಾಗಿದ್ದಲ್ಲದೆ ಅಪಾರ ಆಸ್ತಿ- ಪಾಸ್ತಿ ನಷ್ಟ ಸಂಭವಿಸಿತ್ತು. ಆಗ ಹಾನಿಯಾಗಿದ್ದ ಬ್ರೇಕ್‌ವಾಟರ್‌ ಇನ್ನೂ ಪೂರ್ಣವಾಗಿ ದುರಸ್ತಿಯಾಗದ ಕಾರಣ, ಈ ಬಾರಿಯ ಮಳೆಗಾಲದಲ್ಲಿ ಮತ್ತಷ್ಟು ಹಾನಿಯಾಗಬಹುದು ಅನ್ನುವ ಭೀತಿ ಮೀನುಗಾರರದ್ದಾಗಿದೆ.

ತುರ್ತು ಕಾಮಗಾರಿ ನಡೆಸಿ
ಜೂನ್‌ ಮೊದಲ ಅಥವಾ ಎರಡನೇ ವಾರದಲ್ಲಿ ತೂಫಾನ್‌ ನಿರೀಕ್ಷೆಯಿದ್ದು, ತೂಫಾನ್‌ ಆದರೆ ಇಲ್ಲಿನ ಹೊರಬಂದರಿನ ತಡೆಗೋಡೆಗಳಿಗೆ ಮತ್ತಷ್ಟು ಹಾನಿಯಾಗುವುದು ಖಚಿತ. ಇದರಿಂದ ದೋಣಿಗಳು ಮೀನುಗಾರಿಕೆಗೆ ತೆರಳಲು ಭಾರೀ ಕಷ್ಟವಾಗಲಿದೆ. ಈಗಿನ್ನು ಕೆಲವೇ ದಿನಗಳಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಹೊಸ ಸಚಿವರು, ಶಾಸಕರು, ಅಧಿಕಾರಿಗಳು ಇಲ್ಲಿನ ಸಮಸ್ಯೆಯನ್ನು ಮನಗಂಡು ಆದಷ್ಟು ಬೇಗ ಹಾನಿಯಾದ ಬ್ರೇಕ್‌ ವಾಟರ್‌ ದುರಸ್ತಿ ಸಹಿತ ಇನ್ನಿತರ ತುರ್ತು ಕಾಮಗಾರಿ ನಡೆಸಬೇಕಾಗಿದೆ ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

ಸುದಿನ ವರದಿ
ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿ ವಿಳಂಬದ ಬಗ್ಗೆ, ಮಳೆಗಾಲದಲ್ಲಿ ಹಾನಿಯಾದ ಕುರಿತಂತೆ “ಉದಯವಾಣಿ ಸುದಿನ’ವು ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿದೆ.

200ಕ್ಕೂ ಮಿಕ್ಕಿ ದೋಣಿ
ಈ ಬಂದರನ್ನು ಆಶ್ರಯಿಸಿಕೊಂಡು 200ಕ್ಕೂ ಮಿಕ್ಕಿ ದೋಣಿಗಳಿವೆ. 4 ರಿಂದ 5 ಸಾವಿರದಷ್ಟು ಮಂದಿಗೆ ಈ ಬಂದರೇ ಜೀವನಾಧಾರ ವಾಗಿದೆ. ಈಗಂತೂ ಸರಿಯಾಗಿ ಸಿಗದ ಸೀಮೆಎಣ್ಣೆ, ಮತ್ಸéಕ್ಷಾಮದಿಂದಾಗಿ ವಾರದಲ್ಲಿ 2 ದಿನ, ಕೆಲವರಿಗೆ ಅದೂ ಇಲ್ಲದ ಪರಿಸ್ಥಿತಿಯಿದೆ. ಮುಂದಿನ ಋತುವಾದರೂ ಆಶಾದಾಯಕವಾಗಬೇಕಾದರೆ ಈಗಲೇ ಇಲ್ಲಿನ ಬಂದರನ್ನು ಸರಿಪಡಿಸುವ ಕಾರ್ಯ ಆಗಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಮೀನುಗಾರರು.

Advertisement

ತುರ್ತು ಕಾಮಗಾರಿ
ಹಾನಿಯಾಗಿರುವ ಬ್ರೇಕ್‌ವಾಟರ್‌ ದುರಸ್ತಿ ಸಹಿತ ಇನ್ನಿತರ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಇನ್ನು ಎರಡನೇ ಹಂತದ ಕಾಮಗಾರಿಗೆ ನಮ್ಮ ಇಲಾಖೆಯಿಂದ, ಜಿಲ್ಲಾ ಸಮಿತಿಯಿಂದ ಸಿಆರ್‌ಝಡ್‌ ಅನುಮತಿಗಾಗಿ ರಾಜ್ಯ ಸಮಿತಿಗೆ ಕಳುಹಿಸಲಾಗಿದೆ. ಅಲ್ಲಿ ಚುನಾವಣೆಯಿಂದಾಗಿ ಪರಿಸರ ಇಲಾಖೆಯ ಅಧೀನದ ರಾಜ್ಯ ಸಮಿತಿಯ ಸಭೆ ನಡೆದಿರಲಿಲ್ಲ. ಕಾಮಗಾರಿ ಆರಂಭಕ್ಕೆ ಸಿಆರ್‌ಝಡ್‌ ಅನುಮತಿಗಾಗಿ ಕಾಯುತ್ತಿದ್ದೇವೆ.-ಉದಯ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಇಲಾಖೆ

ಶೀಘ್ರ ದುರಸ್ತಿ ಮಾಡಲಿ
ಇಲ್ಲಿನ ಮೀನುಗಾರಿಕಾ ಬಂದರಿಗೆ ತೌಖೆ¤à ಚಂಡಮಾರುತ ಹಾಗೂ ಕಳೆದ ವರ್ಷದ ಮಳೆಗಾಲದಲ್ಲಿ ಅಪಾರ ಹಾನಿಯಾಗಿದ್ದು, ಅದರ ದುರಸ್ತಿ ಇನ್ನೂ ಮಾಡಿಲ್ಲ. ಅದನ್ನು ಆದಷ್ಟು ಬೇಗ ದುರಸ್ತಿ ಮಾಡುವ ಕಾರ್ಯ ಮಾಡಬೇಕಾಗಿದೆ. ಇಲ್ಲದಿದ್ದರೆ ಬಂದರಿಗೆ ಇನ್ನಷ್ಟು ಹಾನಿಯಾಗಲಿದೆ. ಈ ಕಾರ್ಯ ಶೀಘ್ರ ಆಗಬೇಕಾಗಿದೆ. ಎರಡನೇ ಹಂತದ ಕಾಮಗಾರಿಯು ಆದಷ್ಟು ಬೇಗ ಆಗಬೇಕಾಗಿದೆ.
– ವಾಸುದೇವ ಖಾರ್ವಿ, ಅಧ್ಯಕ್ಷರು, ಶ್ರೀ ರಾಮ ಮೀನುಗಾರರ ಸೇವಾ ಸಮಿತಿ ಮರವಂತೆ

Advertisement

Udayavani is now on Telegram. Click here to join our channel and stay updated with the latest news.

Next