Advertisement

ಮರವಂತೆ ಬೀಚ್‌: ಬಂಡೆಗಲ್ಲು ಜಾರುತ್ತಿದೆ ಎಚ್ಚರ

12:33 PM Aug 05, 2022 | Team Udayavani |

ಮರವಂತೆ: ಆಗೊಮ್ಮೆ ಈಗೊಮ್ಮೆ ಮಳೆ ಬಿರುಸು ಪಡೆಯುತ್ತಿದ್ದರೂ, ಕಡಲ ಅಲೆಗಳ ಅಬ್ಬರ ಮಾತ್ರ ಕಡಿಮೆ ಯಾಗಿಲ್ಲ. ಅಲೆಗಳು ದಂಡೆಗೆ ಅಪ್ಪಳಿಸುತ್ತಿರುವುದರಿಂದ ಬೀಚ್‌ನಲ್ಲಿ ನಿರ್ಮಿಸಿದ ಟಿ ಮಾದರಿಯ ಟೆಟ್ರಾಫೈಡ್‌(ಬಂಡೆಗಲ್ಲಿ)ನ ತಡೆಗೋಡೆಯ ಪಾಚಿಗಟ್ಟಿ, ಜಾರು ತ್ತಿದ್ದು, ಪ್ರವಾಸಿಗರು ಮೈ ಮರೆತರೇ ಮಾತ್ರ ಅಪಾಯ ಕಟ್ಟಿಟ್ಟ ಬುಟ್ಟಿ. ಇನ್ನು ಈ ಬೀಚ್‌ ನುದ್ದಕ್ಕೂ ಹಾದುಹೋಗವ ಹೆದ್ದಾರಿಯಲ್ಲಿ ಬೀದಿ ದೀಪಗಳೇ ಇಲ್ಲ.

Advertisement

ಮರವಂತೆ ಬೀಚ್‌ ಮಳೆಗಾಲದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿದೆ. ಇದು ಹೆದ್ದಾರಿಗೆ ಹೊಂದಿಕೊಂಡಿದ್ದು ಈ ಮಾರ್ಗವಾಗಿ ಸಂಚರಿಸುವವರು ಒಂದು ನಿಂತು, ಕಡಲ ಅಲೆಗಳ ಸೌಂದರ್ಯ ಆಸ್ವಾದಿಸುವುದು ಸಾಮಾನ್ಯ. ಆದರೆ ತಡೆಗೋಡೆಗೆ ಹಾಕಲಾದ ಟೆಟ್ರಾಫೈಡ್‌ಗಳಲ್ಲಿ ದಟ್ಟ ಪಾಚಿ ಕಟ್ಟಿದ್ದು, ಕಡಲ ಸೌಂದರ್ಯ ಸವಿಯಲು ಇಲ್ಲಿ ಹೆಜ್ಜೆ ಇರಿಸುವ ಪ್ರವಾಸಿಗರು ಎಚ್ಚರ ವಹಿಸುವುದು ಅತ್ಯವಶ್ಯಕ.

ಮೈ ಮರೆತರೆ ಅಪಾಯ

ತ್ರಾಸಿ-ಮರವಂತೆ ಬೀಚ್‌ನಲ್ಲಿ ಅಂದಾಜು 90 ಕೋ. ರೂ. ವೆಚ್ಚದಲ್ಲಿ ನಡೆದಿರುವ ಟಿ ಆಕಾರದ ತಡೆಗೋಡೆ ಮರವಂತೆ ಬೀಚ್‌ನ ಸೌಂದರ್ಯ ಇಮ್ಮಡಿಗೊಳಿಸಿದೆ. ಆದರೆ ಈ ತಡೆಗೋಡೆಯ ಕಲ್ಲುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಹಸಿರು ಪಾಚಿಗಳಿಂದ ಆವರಿಸಿಕೊಂಡಿದೆ. ಮರವಂತೆ ಬೀಚ್‌ ವ್ಯಾಪ್ತಿಯಲ್ಲಿರುವ ಎಲ್ಲ ತಡೆಗೋಡೆಯ ಬಂಡೆಗಳಲ್ಲಿ ದಪ್ಪನಾದ ಪಾಚಿ ಕುಳಿತಿದೆ. ಕಡಲ ಸೌಂದರ್ಯ ವೀಕ್ಷಿಸ ಲೆಂದು ಬರುವ ಮಂದಿ ತಡೆಗೋಡೆ ಬಂಡೆಯ ಮೇಲೆ ಹೆಜ್ಜೆಯಿರಿಸಿ ಮೈಮರೆ ತರೆ ಅಪಾಯದ ಸಾಧ್ಯತೆ ಇದೆ.

Advertisement

ಎಚ್ಚರಿಕೆ ಫಲಕಕ್ಕೆ ಬೆಲೆಯೇ ಇಲ್ಲ

ತ್ರಾಸಿ-ಮರವಂತೆ ಬೀಚ್‌ನುದ್ದಕ್ಕೂ ಪೊಲೀಸ್‌ ಇಲಾಖೆ ಹಾಗೂ ಪ್ರವಾಸೋ ದ್ಯಮ ಇಲಾಖೆಯಿಂದ ಎಚ್ಚರಿಕೆಯ ನಾಮ ಫಲಕ ಅಳವಡಿಸಿದೆ. ಆದರೆ ಪ್ರವಾಸಿಗರು ಮಾತ್ರ ಇದಕ್ಕೆ ಬೆಲೆಯೇ ಕೊಡುತ್ತಿಲ್ಲ. ಇದನ್ನು ತಿಳಿ ಹೇಳಲು ಅಥವಾ ಕಲ್ಲು ಬಂಡೆಗಳಿಗೆ ಇಳಿಯದಂತೆ ಎಚ್ಚರಿಸಲು ಇಲ್ಲಿ ಪ್ರವಾಸಿ ಮಿತ್ರರೇ ಇಲ್ಲದಂತಾಗಿದೆ.

ಬೀದಿ ದೀಪ ಅಳವಡಿಸಿ

ಮರವಂತೆಯಲ್ಲಿ ಅರಬೀ ಸಮುದ್ರ ಹಾಗೂ ಸೌಪರ್ಣಿಕ ನದಿಯ ಮಧ್ಯೆಯೇ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುತ್ತದೆ. ಈ ಅಪೂರ್ವ ವಿದ್ಯಮಾನದ ಚಿತ್ರವನ್ನು ಕೆಲ ದಿನಗಳ ಹಿಂದೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿಯವರೇ ಟ್ವೀಟ್‌ ಮಾಡಿದ್ದರು. ಆದರೆ ಮರವಂತೆಯ ಹೆದ್ದಾರಿಯಲ್ಲಾಗಲಿ, ಅತ್ಯಾಕರ್ಷಕ ಬೀಚ್‌ ಬಳಿಯಾಗಲಿ ರಾತ್ರಿ ವೇಳೆ ಕಗ್ಗತ್ತಲ ಹಾದಿಯಾಗಿದೆ. ಸುಮಾರು 2 ಕಿ.ಮೀ. ದೂರದವರೆಗೂ ಬೀಚ್‌ ಬಳಿಯ ಹೆದ್ದಾರಿ ಯಲ್ಲಿ ಯಾವುದೇ ಬೆಳಕಿನ ವ್ಯವಸ್ಥೆಯಿಲ್ಲ. ಇಲ್ಲಿ ಬೀದಿ ದೀಪ ಅಳವಡಿಸಿದರೆ ರಾತ್ರಿ ವೇಳೆಯಲ್ಲಿ ಸಂಚರಿಸುವ ಸವಾರರು, ಪ್ರಯಾಣಿಕರಿಗೂ ಬೀಚ್‌ನ ಸೌಂದರ್ಯ ಕಾಣಲು ಅವಕಾಶ ಮಾಡಿಕೊಟ್ಟಂತಾಗಲಿದೆ. ಬೀಚ್‌,ಹೆದ್ದಾರಿ ಬದಿ ಫುಟ್‌ಪಾತ್‌ ಮಾಡಿದರೆ ಪ್ರವಾಸಿಗರಿಗೆ, ವಾಯು ವಿಹಾರಕ್ಕೆ ಬರುವವರಿಗೆ ಅನುಕೂಲವಾಗಲಿದೆ.

ಬೀಚ್‌ ಅಭಿವೃದ್ಧಿಗೆ ಯೋಜನೆ: ಮರವಂತೆಯ ಬೀಚ್‌ ಅಭಿವೃದ್ಧಿಗೆ ಈಗಾಗಲೇ ಡಿಪಿಆರ್‌ ಸಿದ್ಧಪಡಿಸಿ, ಸಮಗ್ರ ಯೋಜನೆ ರೂಪಿಸಿದ್ದು, ಅದಕ್ಕಾಗಿ 10 ಕೋ.ರೂ. ಅನುದಾನ ಬಿಡುಗಡೆ ಆಗಿದೆ. ಈ ಕಾರ್ಯ ಮುಂದಿನ ದಿನಗಳಲ್ಲಿ ಆಗಲಿದೆ. ಇದರಲ್ಲಿ ಬೆಳಕಿನ ವ್ಯವಸ್ಥೆ ಸಹಿತ ಎಲ್ಲ ಕಾಮಗಾರಿಯೂ ನಡೆಯಲಿದೆ. ಇಲ್ಲಿಗೆ ಒಬ್ಬರು ಪ್ರವಾಸಿ ಮಿತ್ರರನ್ನು ನಿಯೋಜಿಸಿದ್ದು, ಈ ಬಗ್ಗೆ ಪೊಲೀಸ್‌ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ.-ಕ್ಲಿಫರ್ಡ್‌ ಲೋಬೋ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ, ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next