Advertisement

ರಾಹು,ಕೇತುಗಳಿಂದ ಆಗುವ ಬಾಧೆಗಳು ಹಲವು

12:09 PM Jun 10, 2017 | |

ಜಾತಕದಲ್ಲಿ ರಾಹು ಕೇತುಗಳು ವಿಕ್ಷಿಪ್ತತೆ ಪಡೆದು ಹಣಕಾಸಿನ ವಿಚಾರದಲ್ಲಿ ದೋಷಗಳು ಬಂದಾಗ ಹಣದ ವಿಚಾರವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಮಹಾನ್‌ ನಟನೊಬ್ಬ ಚಿತ್ರಂಗದಲ್ಲಿ ಹಿಂದೆ ಮುಂದೆ ಯೋಚಿಸದೆ ತನ್ನ ಚಿತ್ರವನ್ನು ಮಾಡಿ ಮುಗಿಸುವುದಕ್ಕಾಗಿ ಮೈತುಂಬಾ ಸಾಲ ಮಾಡಿಕೊಂಡು ಬಿಡುತ್ತಾನೆ. ಅವನ ವ್ಯಕ್ತಿತ್ವದ ಶಿಷ್ಠತೆ, ಅನನ್ಯತೆ ಸಿನಿಮಾವನ್ನು ನಿರ್ದೇಶಿಸುವ ವಿಚಾರದಲ್ಲಿ ಅದ್ಭುತವಾಗಿದ್ದರೂ, ಮಾಡಿಮುಗಿಸಿದ ಚಿತ್ರ ಮುಂದೆ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತದೋ ಬಿಡುತ್ತದೋ ಅದು ಅದೃಷ್ಟಕ್ಕೆ ಸಂಬಂಧಿಸಿದ ವಿಚಾರ. ದುರ್ದೈವ ವಶಾತ್‌ ಈ ಮಹಾನ್‌ ನಟ, ನಿರ್ದೇಶಕ ತನ್ನ ಬಗೆಗೆ ಬಹುದೊಡ್ಡ ಆತ್ಮವಿಶ್ವಾಸದಲ್ಲಿ ಮುಳುಗಿದ್ದುಕೊಂಡಿರುತ್ತಾನೆಯೇ ವಿನಾ ತನ್ನ ವಿನಾಶವು ಅದೃಷ್ಟದ ಕಾರಣದಿಂದಾಗಿ ವ್ಯತಿರಿಕ್ತವಾದ ಮುನ್ನುಡಿಯನ್ನು ಬರೆಯುತ್ತದೆ ಎಂದು ಯೋಚಿಸಿರುವುದಿಲ್ಲ. ಆತ್ಮವಿಶ್ವಾಸವು ಅತಿಯಾಗಿ ಎದ್ದು ನಿಂತು ಒಂದರ್ಥದಲ್ಲಿ ತಾನು ಎಂಬ ಅಹಂಕಾರವನ್ನೇ ಪ್ರಧಾನವಾಗಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ದೊಡ್ಡ ದೊಡ್ಡ ಸಾಲದ ಹೊರೆ ಹೊತ್ತ ಹತ್ತಾರು ನಟ, ನಿರ್ದೇಶಕ, ನಿರ್ಮಾಪಕರ ಹೆಸರನ್ನು ಉದಾಹರಿಸಬಹುದು. ಸಮಾಜ ವಿರೋಧಿ ಶಕ್ತಿಗಳಿಂದ ಸಾಲ ಪಡೆದು ತಮ್ಮ ಸಿನಿಮಾ ಮಾಡಿದವರಿದ್ದಾರೆ. ಸಾಲ ತೀರಿಸಲಾಗದೆ ಬಸವಳಿದವರಿದ್ದಾರೆ. ಕುಡಿತ, ಲೈಂಗಿಕ ಸ್ವೇಚ್ಛೆಯಲ್ಲಿ ಮುಳುಗಿದವರಿದ್ದಾರೆ. ಪ್ರತಿಭಾನ್ವಿತರನ್ನೂ ಸೋಲು ಕುಡಿತಕ್ಕೆ, ಸ್ವೇಚ್ಛೆಗೆ ನೂಕುತ್ತದೆ.

Advertisement

ರಾಹುಕೇತುಗಳ ಬಗ್ಗೆ ಸತತ ಎಚ್ಚರ ಇರಲಿ
ಹಿಂದಿ ಚಿತ್ರರಂಗದ ಬಹುದೊಡ್ಡ ನಟ, ನಿರ್ದೇಶಕ, ನಿರ್ಮಾಪಕರೊಬ್ಬರು, ಕೆಲವು ಅದ್ಭುತ ಚಿತ್ರಗಳನ್ನು ಮಾಡಿದರು. ನಿರ್ಮಿಸಿದ ಚಿತ್ರಗಳು ಅಪಾರ ಪ್ರಮಾಣದ ಹಣವನ್ನು ಗಳಿಸಿದವು. ಆದರೆ ತಿರುಗಾ ಮುರುಗಾ ಅದೇ ಅದೇ ಪ್ರೇಮದ ಕತೆಯನ್ನು ಹೊಸ ತಾಂತ್ರಿಕತೆ ಲಯ ಬೆರೆಸಿ, ಬಣ್ಣದಲ್ಲಿ ಅದ್ದಿ ಹೊಸದು ಎಂದು ಕೊಟ್ಟಾಗ ಜನ ತಿರಸ್ಕರಿಸಿದ್ದರು. ತಾಂತ್ರಿಕತೆ ಬಣ್ಣ, ಸಂಗೀತದ ಮಾಧುರ್ಯ ಸರಿ ಆದರೆ ಹೊಸ ಕಾಲ ಹೊಸದೊಂದನ್ನು ನಿರೀಕ್ಷಿಸುತ್ತದೆಂಬುದನ್ನು ಮರೆತು ಸಿನಿಮಾ ಮಾಡಿದ್ದರಿಂದ ಸೋತಿತು. ಹಣಗಳಿಕೆ ಸಾಧ್ಯವಾಗಲಿಲ್ಲ. ಕೇತುದಶಾ ಕಾಲ ಬಂದಾಗ ಇಂಥದ್ದೆಲ್ಲಾ ಸಂಭವಿಸುತ್ತದೆ. 

ರಾಹು ವ್ಯಕ್ತಿತ್ವವನ್ನು ಕುಂದಿಸತೊಡಗಿದ್ದ. ಆರೋಗ್ಯವನ್ನು ಮಧ್ಯವಯಸ್ಸಿನಲ್ಲಿ ಅವಶ್ಯಕತೆಗಿಂತ  ಜಾಸ್ತಿಯೇ ಕುಸಿಯುವಂತೆ ಮಾಡಿದ್ದ. ಅಂತೂ ರಾಹುಕೇತುಗಳು ಕುಸಿಯುವಂತೆ ಮಾಡಿದ್ದಲ್ಲದೆ ನಡುವಯಸ್ಸಿನ ಅಸಹಜ ಸ್ವೇಚ್ಛೆ ಕುಡಿತಗಳನ್ನು ವೃದ್ಧಿಸಿದವು. ಆದರ್ಶದ ತೋರಿಕೆಯನ್ನು ಹೊರ ಆವರಣದಲ್ಲಿರಿಸಿ ಹೆಣ್ಣುಗಳ ಅಂಗಾಂಗ ಪ್ರದರ್ಶನಕ್ಕೆ ತಮ್ಮ ಚಿತ್ರಗಳನ್ನು ಮೀಸಲಾಗಿರಿಸಿದರು. ಮೈತುಂಬಾ ಸಾಲಗಳು ಬೆಳೆದಿದ್ದವು. ಹೆಸರು ದೊಡ್ಡದು, ಕೀರ್ತಿಯ ಶಿಖರ ಏರಿದ್ದಂತೂ ಹೌದು. ಆದರೆ ಅಂತರಂಗದಲ್ಲಿ ಸುಖವಿದ್ದಿರಲಿಲ್ಲ. ಕೈ ಹಿಡಿದ ಹೆಂಡತಿಗೆ ಕೀರ್ತಿ ಪಡೆದ ಗಂಡನಾದರೂ ಹೆಸರಿಗಾಗಿ ಪರದಾಡುತ್ತಿದ್ದ ಎಳೆಯ ನಟಿಯರೊಂದಿಗಿನ ಗಂಡನ ಸ್ವೇಚ್ಛೆ ಹೆಂಡತಿಗೆ ಜಿಗುಪ್ಸೆ ತರಿಸಿತ್ತು.

ಸಾಲದ ಹೊರೆಗೆ ತಳ್ಳುವ ರಾಹುಭಾರತೀಯ ಚಿತ್ರರಂಗ ಕಂಡ ಸೂಪರ್‌ ಶೊ ಮ್ಯಾನ್‌ ರಾಜ್‌ಕಪೂರ್‌ ಸಾಲದ ಬಾಧೆಯಿಂದ ನರಳಿದರು. ಅವರು ಅನೇಕ ಹಿಟ್‌ ಸಿನಿಮಾಗಳನ್ನು ತಯಾರಿಸಿ ಹಣ ಗಳಿಸಿದರಾದರೂ ಮೇರಾ ನಾಮ್‌ ಜೋಕರ್‌ ಸಂದರ್ಭದಲ್ಲಿ ನೆಲಕಚ್ಚಿದರು. ಯಾರ್ಯಾರ ಬಳಿಯೋ ಸಾಲ ಮಾಡುವ ಪರಿಸ್ಥಿತಿ ಬಂತು. ಆಸ್ತಮಾ ಕಾಡುತ್ತಿತ್ತು. ಮಿತಿಮೀರಿದ ಬೊಜ್ಜು ಬಾಧೆ ತಂದಿತ್ತು. ಕುಡಿತದ ಪರಿಣಾಮಗಳಿಂದ ಹೈರಾಣಾಗಿದ್ದರು. ಜೊತೆಗೆ ಅಭಿನಯಿಸಿದ ತನ್ನ ಚಿತ್ರದ ನಾಯಕಿಯರ ಜೊತೆ ಸಲುಗೆಯಿಂದ ಇರಲು ಮುಂದಾಗುತ್ತಿದ್ದರು. ಇದರಿಂದ ಕೆಲವು ಕೌಟುಂಬಿಕ ತಾಪತ್ರಯಗಳು ರಾಜ್‌ ಕಪೂರ್‌ರಂಥ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕರಿಗೆ ಕಷ್ಟವಾಗುತ್ತಿತ್ತು. ಆತನ ವೈಯುಕ್ತಿಕ ತೊಂದರೆಗಳ ಬಗ್ಗೆ ಯಾರೂ ಗಮನಿಸಲಾರರು. ಅದು ಅವರಿಗೆ ಬೇಕಾಗಿಯೂ ಇಲ್ಲ. ಇದೇ ಸಮಸ್ಯೆಯಾದದ್ದು. ರಾಜ್‌ ಕಪೂರ್‌ ತೀರಿಕೊಂಡಾಗ ಸಾಲು ಸಾಲು ಸೋಲುಗಳಾಗಿದ್ದವು.  ಮಿತಿಮೀರಿದ ಸಾ,ಲ ಅನಾರೋಗ್ಯ ಎಲ್ಲ ಸೇರಿಕೊಂಡಿದ್ದವು. ರಾಹುವೇ ಮುಳುವಾಗಿದ್ದ.

ನಮ್ಮ ನಡುವೆ ಅನೇಕ ಜನ ರಾಹುಕೇತುಗಳಿಂದ ವಿವಿಧ ಬಾಧೆಗಳನ್ನು  ಎದುರಿಸುತ್ತಿರುತ್ತಾರೆ. ರಾಹು ಕೇತುಗಳಿಗೆ ಅಸ್ತಿತ್ವ ಇಲ್ಲ. ಛಾಯಾಗ್ರಹಗಳು ಮಾತ್ರ. ದಟ್ಟ ಕತ್ತಲಿನ ಸುಪ್ತ ಶಕ್ತಿಯಾಗಿ ಕೇವಲ ಕರಿ ಕತ್ತಲ ನೆರಳುಗಳು ಮಾತ್ರ. ಆದರೂ ಬಿರುಗಾಳಿಯ ರೂಪದಲ್ಲಿ ನಮ್ಮನ್ನು ಬುಡ ಸಮೇತ ಉರುಳಿಸಿ, ದಣಿಸಿ, ಸತಾಯಿಸುತ್ತದೆ. ಆದರೆ ಒಲಿದಾಗ ಸಾಕ್ಷಾತ್‌ ದೇವತೆಗಳೇ ಆಗುತ್ತವೆ. 

Advertisement

ರಾಜಕಾರಣಿಗಳಿಗೂ ರಾಹು ಕೇತುಗಳ ಪೀಡೆ
ರಾಜಯೋಗಗಳನ್ನು ಕ್ಷೀಣಗೊಳಿಸುವ ನೋವಿನ ಕೆಲಸಗಳಿಗೆ ರಾಹುಕೇತುಗಳು ಕೈಹಾಕುತ್ತವೆ ಎಲ್ಲವೂ ಒಂದು ನೆಲೆಯಲ್ಲಿ ಅರ್ಥಪೂರ್ಣ ಹೊಂದಾಣಿಕೆ ಗೊಂಡಾಗ ರಾಹುಕೇತುಗಳೇ ರಾಜಯೋಗವನ್ನು ಗಟ್ಟಿಯಾಗಿ ಪ್ರಧಾನವಾಗಿ ಅನುಗ್ರಹಿಸುತ್ತದೆ. ನಮ್ಮ ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್‌ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಪ್ರಧಾನವಾಗಿ ಸಹಕರಿಸಿದ್ದೇ ರಾಹು. ಯಾವಾಗಲೂ ತತ್ವಶಾಸ್ತ್ರಗಳ ಬಗೆಗೆ ಯಾವುದೇ ಸಾಂಸ್ಕೃತಿಕ ಮಹತ್ವ ಸಿದ್ದಾಂತಗಳ ಬಗೆಗಿನ ಪ್ರಾಜ್ಞತೆಯನ್ನು ಅನುಗ್ರಹಿಸುವ ಬಗೆಗೆ, ಮರಣ ಸ್ಥಾನದಲ್ಲಿರುವ ರಾಹುಗ್ರಹವು ಬಹು ಸೂಕ್ಷ್ಮವಾದ ಅನನ್ಯತೆಯನ್ನು ಒದಗಿಸಿ, ಜನರ ನಡುವೆ ಎದೆಯುಬ್ಬಿಸಿ ನಿಲ್ಲುವ ವರ್ಚಸ್ಸನ್ನು ಕೊಡುತ್ತದೆ. ರಾಧಾಕೃಷ್ಣನ್‌ ಹೊಂದಿದ ಅಸ್ಖಲಿತ ಪಾರಮಾರ್ಥಿಕ ಜಾnನ, ವಿದ್ವತ್ತು ಹಾಗೂ ಭಾರತೀಯ ತತ್ವ ಸಿದ್ಧಾಂತಗಳಿಗೆ ಹಿರಿಯ ಪಂಡಿತರೊಡನೆ ಮಾತಾಡುವ ವಿಶೇಷ ಜಾಣ್ಮೆ ಹೊಂದಿದ್ದರಿಂದ ಭಾರತದ ಎರಡನೇ ರಾಷ್ಟ್ರಪತಿಯಾಗಿ ಅಧಿಕಾರದಲ್ಲಿದ್ದರು. ಇದಕ್ಕೂ ಮುನ್ನ  ಉಪರಾಷ್ಟ್ರಪತಿಗಳು ಆಗಿದ್ದರು. ಬೇರೆಯವರ ಸಂದರ್ಭದಲ್ಲಿ ರಾಹುಗ್ರಹ ಇಷ್ಟೊಂದು ಉದಾರವಾಗಿ ಇರುತ್ತಿರಲಿಲ್ಲ. ಆದರೆ ರಾಧಾಕೃಷ್ಣನ್‌ ಗುರುಗ್ರಹದ ಮೂಲಕವಾಗಿ ರಾಹುವನ್ನೂ ಶನೈಶ್ಚರನನ್ನು ಶಾಂತಗೊಳಿಸಿ ಸಕಾರಾತ್ಮಕ ಶಕ್ತಿಗಳನ್ನು ಕೊಟ್ಟು ರಾಜಯೋಗಕ್ಕೆ ಕಾರಣವಾಗಿಸಿದ. ಇದರಿಂದಾಗಿ ರಾಧಾಕೃಷ್ಣನ್‌ ದೊಡ್ಡ ಸ್ಥಾನವನ್ನು ಅವಲಂಬಿಸಿದ್ದರು. ಸುಮಾರು 16 ವರ್ಷಗಳ ಕಾಲ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು. ಇದು ಭಾರತದ ಅಗ್ರಶೇಣಿ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ಮತ್ತು ಸೆಹ್ವಾಗ್‌ ವಿಷಯದಲ್ಲೂ ಸಾಧ್ಯವಾಗಿದ್ದರಿಂದ ಜೀವನದಲ್ಲಿ ಜನಪ್ರಿಯತೆ ಪಡೆದು ಹಾಗೂ ಕ್ರಿಕೆಟ್‌ ರಂಗದ ಉನ್ನತ ಶಕ್ತಿಗಳಾಗಿ ಇತಿಹಾಸದಲ್ಲಿ ತಮ್ಮನ್ನು ದಾಖಲಿಸಿಕೊಡರು. ಇವರ ಜಾತಕಗಳಲ್ಲಿ ಅನ್ಯರೀತಿಯಲ್ಲಿ ರಾಹು ಶಕ್ತಿ ಬೀಜಗಳನ್ನು ಇವರಿಗೆ ಒದಗಿಸಿದ್ದ. ಧೋನಿ ನಮ್ಮ ರಾಷ್ಟ್ರ ಕಂಡ ಅತ್ಯಂತ ಯಶಸ್ವಿ ನಾಯಕ. ಅಪರಿಮಿತ ಶಕ್ತಿಯೊಂದಿಗೆ ಹೊಡಿ ಬಡಿ ಆಟ ಆಡಿ, ಸಿಕ್ಸರ್‌ಗಳ ಮಾಲೆ ತೊಡಿಸಿದವರು. ಹೆಚ್ಚಿನ ವಿಜಯಗಳನ್ನು ಸಂಪಾದಿಸಿಕೊಟ್ಟರು. 

ನಕಾರಾತ್ಮಕ ಶಕ್ತಿ ಸಕಾರಾತ್ಮಕವಾಗಿ ಬೆಳೆದದ್ದು ರಾಹುವಿನಿಂದ. ಇವರುಗಳ ಯಶಸ್ಸು ಒದಗಿಬಂತು. ಆದರೆ ನಮ್ಮ ರಾಜ್ಯದ ಅತ್ಯಂತ ಪ್ರಸಿದ್ಧ ರಾಜಕಾರಣಿಗಳಾದ ರಾಷ್ಟ್ರ ರಾಜಕೀಯದಲ್ಲೂ ಹೆಸರು ಮಾಡಿದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ರಾಮಕೃಷ್ಣ ಹೆಗಡೆ ರಾಹುಕೇತುಗಳಿಂದ ಯಾತನೆ ಅನುಭಸಿದರು. ದೇವೇಗೌಡರ ಜಾತಕದ ರಾಹು ಅವರ ಜಾತಕದ ಅಮೂಲ್ಯವಾದ ಚಂದ್ರ ದೈತ್ಯ ಶಕ್ತಿಯನ್ನು ನುಂಗಿ ನೊಣೆದಿದ್ದ. ರಾಮಕೃಷ್ಣ ಹೆಗಡೆಯವರಿಗೆ ಬಹು ಅಮೂಲ್ಯವಾದ ಅಧೈರ್ಯದ ಎಳ್ಳು ಕಾಳಿನಷ್ಟು ಅಂಶವನ್ನೂ ಕೊಡಲೊಲ್ಲದ ಕೇತುವನ್ನು ಶನೈಶ್ಚರ ದೃಷ್ಟಿಯಿಂದ ಹೊಸಕಿಹಾಕಿದ್ದ. ಮಹತ್ವದ  ಸಂದರ್ಭದಲ್ಲಿ ಪ್ರಶ್ನಾತೀತ ನಾಯಕನಾಗಿ ಇನ್ನಷ್ಟು ಶಕ್ತಿ ಪಡೆಯಲು ರಾಹು ಭಾಗ್ಯವನ್ನು ಕುಟ್ಟಿ ಪುಡಿ ಮಾಡುತ್ತಿದ್ದ. ಅಭೂತಪೂರ್ವ ಅವಕಾಶಗಳ ಸಂದರ್ಭದಲ್ಲಿ ಕುಜ, ಚಂದ್ರರು ರಾಮಕೃಷ್ಣ ಹೆಗಡೆಯವರಿಗೆ ಯೋಗ್ಯತೆ ಇದ್ದೂ ಯಶಸ್ಸಿನ ಏಣಿಗೆ ಧಕ್ಕೆ ತಂದವು. ಕುಶಾಗ್ರಮತಿಯನ್ನು ಸಣ್ಣ ಪುಟ್ಟ ದೌರ್ಬಲ್ಯಗಳು ರಾಹುವಿನ ರೂಪದಲ್ಲಿ, ಕುಜ ಚಂದ್ರರ ರೂಪದಲ್ಲಿ, ತಿಂದು ತೇಗುತ್ತಿದ್ದವು. ಕೇತು  ಅಭೂತಪೂರ್ವವಾಗಿ ಮಿಂಚ ಬಹುದಾಗಿದ್ದರೂ ಶನಿಯ ದೃಷ್ಟಿಗೆ ಕೇತು ಕಂದಕಕ್ಕೆ ತುಳಿಯಲ್ಪಟ್ಟಿದ್ದ. 

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next