ಕೆರೆಗಳ ಪುನರುಜ್ಜೀವನ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅನವರತ ಕಾರ್ಯ ಮಾಡುತ್ತಿರುವ ಮನು ವಿಕಾಸ ಕುರಿತು ಲೇಖಕ ಗಣಪತಿ ಹೆಗಡೆ ಅರಸಿಕೆರೆ ಅವರು ಇಲ್ಲಿ ದಾಖಲಿಸಿದ್ದಾರೆ.
ಕೆರೆಗಳ ಹೂಳೆತ್ತಿಸಬೇಕು, ಬೆಟ್ಟಗಳಲ್ಲಿ ಇಂಗು ಗುಂಡಿ ಮಾಡಿಸಬೇಕು, ಕೃಷಿಕರ ಭೂಮಿಯಲ್ಲಿ ಕೃಷಿ ಹೊಂಡ ತೆರೆಯಬೇಕು, ಯಾವುದೇ ಇದ್ದರೂ ಅದಕ್ಕಾಗಿ ಸದಾ ಬೆನ್ನಿಗೆ ಬೆನ್ನು ಕೊಡುವ ಸಂಸ್ಥೆಯೊಂದಿದೆ. ಸಣ್ಣ, ದೊಡ್ಡ ಕೆರೆಗಳ ಅಭಿವೃದ್ಧಿಗೆ ಮುಂಚೂಣಿಯಲ್ಲಿದ್ದು ನೆರವಾಗುವ ಮನು ವಿಕಾಸ ಕೆರೆಗಳ ಪಾಲಿಗೆ ವಿಕಾಸ ಪಥದ ದೃಷ್ಟಿಯಲ್ಲಿ ಕಾರ್ಯ ಮಾಡುತ್ತಿದೆ.
ಮನುವಿಕಾಸ ಸ್ವಯಂ ಸೇವಾ ಸಂಸ್ಥೆ ಕಳೆದ 19 ವರ್ಷಗಳಿಂದ ಹಲವು ಸಮಾಜಮುಖಿ ಜನಪರ ಕಾರ್ಯ ಚಟುವಟಿಕೆಗಳಾದ ನೆಲ-ಜಲ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ, ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆ, ಸುಸ್ಥಿರ ಕೃಷಿ ಅಭಿವೃದ್ಧಿಗಳ ಮೂಲಕ ಮುನ್ನಡೆದಿದೆ. ಈ ಸಂಸ್ಥೆ ಅಕ್ಷರಶಃ ತಳಮಟ್ಟದ ಜನ ಸಮುದಾಯವನ್ನು ತಲುಪಿ ಅವರಲ್ಲಿ ಜಾಗೃತಿ, ಸ್ವಾವಲಂಬನೆ ಬಿತ್ತಿ ಅವರ ಬದುಕೂ ಮುಖ್ಯವಾಹಿನಿಗೆ ಸೇರಿಕೊಳ್ಳಲು ಜತೆಯಾಗಿದೆ. ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಾನ ಮನಸ್ಕರ ಗುಂಪು ಈ ಸಂಸ್ಥೆಯನ್ನು ಹುಟ್ಟು ಹಾಕಿದೆ. ಅಂಥ ಸಮಾನ ಮನಸ್ಕರೇ ಸಮಾಜದ ಪ್ರಗತಿಗೆ ಜತೆಯಾಗಿದ್ದಾರೆ.
ಸಂಸ್ಥೆಯ ಉದ್ದೇಶಗಳು: ದೇಶದಲ್ಲಿ ಜನಿಸಿದ ಪ್ರತಿಯೊಂದು ಸಮುದಾಯದ ಜನರಿಗೆ ಲಿಂಗ, ಜಾತಿ ಮತ್ತಿತರೆ ತಾರತಮ್ಯ ಆಗದಂತೆ, ಅವರ ಶೈಕ್ಷಣಿಕ, ಆರ್ಥಿಕ, ನೈಸರ್ಗಿಕ, ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯತೆಗಳನ್ನು ಪೂರೈಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಪಡುವುದು, ನೈಸರ್ಗಿಕ ಸಂಪತ್ತುಗಳಾದ ನೀರು, ಭೂಮಿ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸಿ ಅವುಗಳು ಎಲ್ಲ ಸಮುದಾಯದ ವರ್ಗಗಳಿಗೂ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಮಹಿಳೆಯರನ್ನು ಸ್ವ-ಸಹಾಯ ಸಂಘದ ತತ್ವದ ಅಡಿಯಲ್ಲಿ ಒಂದುಗೂಡಿಸಿ ಆರ್ಥಿಕ, ಸಾಮಾಜಿಕ, ಶೈಕಣಿಕವಾಗಿ ಒಂದು ಗೂಡಿಸುವುದು, ಬಡವರು, ದೀನ ದಲಿತರು, ವೃದ್ಧರು, ಅಂಗವಿಕಲರು ಮತ್ತು ನಿರ್ಗತಿಕರ ಆರೋಗ್ಯ ಸೇವೆ ಮಾಡುವುದು ಆಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ನಿರುದ್ಯೋಗಿ ಯುವಕರಿಗೆ ಸ್ವ-ಉದ್ಯೋಗ ಮಾಹಿತಿ ಮತ್ತು ತರಬೇತಿ ಒದಗಿಸುವುದು, ಸಾವಯವ ಮತ್ತು ಪರಿಸರ ಪೂರಕ ಕೃಷಿಗೆ ಬೆಂಬಲ ನೀಡುವ ಮೂಲ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ.
Related Articles
ಮನುವಿಕಾಸ ಸಂಸ್ಥೆಯ ಕಾರ್ಯ ಸಾಧನೆಗಳು: ಅವಸಾನದ ಅಂಚಿನಲ್ಲಿರುವ ನೀರಿನ ಆಕರಗಳ ಪುನರುಜ್ಜೀವನ, ಹಳ್ಳಿಗಳಿಗೆ ಜಲ ಮರುಪೂರಣ, ಅವಸಾನದ ಅಂಚಿನಲ್ಲಿರುವ ಕೆರೆಗಳ ಪುನರುಜ್ಜೀವನ ಮತ್ತು ರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ರೈತ ಸಮುದಾಯಕ್ಕೆ ತಿಳಿಯಪಡಿಸಲು ಮನುವಿಕಾಸ ಸಂಸ್ಥೆ 175ಕ್ಕೂ ಹೆಚ್ಚು ದೊಡ್ಡ ಕೆರೆಗಳು ಮತ್ತು 10,000ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಮತ್ತು ಸಣ್ಣ ಕೃಷಿ ಹೊಂಡಗಳನ್ನು ನಿರ್ಮಿಸಿ ಉತ್ತರಕನ್ನಡ, ಹಾವೇರಿ, ಶಿವಮೊಗ್ಗ, ಮತ್ತು ಧಾರವಾಡ ಜಿಲ್ಲೆಗಳ ರೈತರ ಮುಖದಲ್ಲಿ ಸ್ವಾವಲಂಬನೆಯ ನಗುವನ್ನು ಮೂಡಿಸಿದೆ. ರೈತರ ಜಮೀನುಗಳಲ್ಲಿ ಇಳುವರಿಯ ಹೆಚ್ಚಳ, ಗ್ರಾಮಗಳಲ್ಲಿ ಅಂತರ್ಜಲ ಮಟ್ಟದ ಏರಿಕೆ, ಆರ್ಥಿಕ ಮಟ್ಟದಲ್ಲಿ ಸುಧಾರಣೆ ಇವೆಲ್ಲವೂ ಸಹ ಮನುವಿಕಾಸದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳ ನಿರ್ಮಾಣ ಮತ್ತು ಆರ್ಥಿಕ ಸ್ವಾವಲಂಬನೆಗೆ ಮುನ್ನುಡಿ, ಮಹಿಳಾ ಸ್ವ-ಸಹಾಯ ಗುಂಪುಗಳ ನಿರ್ಮಾಣ ಮಾಡಿ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮನುವಿಕಾಸ ಸಂಸ್ಥೆ 3000 ಸ್ವ ಸಹಾಯ ಸಂಘಗಳು ಮತ್ತು 995 ಜಂಟಿ ಹೊಣೆಗಾರಿಕೆ ಗುಂಪುಗಳನ್ನು ನಿರ್ಮಾಣ ಮಾಡಿ, ಬ್ಯಾಂಕ್ಗಳು ಅಥವಾ ಸ್ವ-ಸಹಾಯ ಸಂಘಗಳ ಆಂತರಿಕ ಸಾಲ ಮತ್ತು ಇತರೆ ಹಣಕಾಸು ಸಂಸ್ಥೆಗಳ ಮುಖಾಂತರ 20,000ಕ್ಕೂ ಅಧಿಕ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಲು ಸಹಾಯಕಾರಿಯಾಗಿದೆ.
ಇದಲ್ಲದೆ ಮಹಿಳೆಯರಿಗೆ ಸ್ವ ಉದ್ಯೋಗ ಸಾಧಿಸಲು ಮತ್ತು ಜೀವನಮಟ್ಟ ಸುಧಾರಿಸಲು ಕೌಶಲ್ಯ ಅಭಿವೃದ್ಧಿ ತರಬೇತಿ, ಕೋಳಿ ಸಾಕಣೆ, ಸುಸ್ಥಿರ ಕೃಷಿ ತರಬೇತಿ, ಹೈನುಗಾರಿಕೆ, ಕಂಪ್ಯೂಟರ್ ತರಬೇತಿ,ಹೊಲಿಗೆ ತರಬೇತಿ ಮತ್ತು ಬ್ಯೂಟಿಶಿಯನ್ ತರಬೇತಿಗಳನ್ನು ನೀಡಿದೆ. ಬಡ, ನಿರ್ಗತಿಕ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕವಾಗಿಯೂ ಪ್ರೇರೇಪಿಸಿರುವ ಮನುವಿಕಾಸ ಸಂಸ್ಥೆ ಉತ್ತಮ ಅಂಕ ಪಡೆದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ. ಈಗಾಗಲೇ 2000ಕ್ಕೂ
ಹೆಚ್ಚು ಮಕ್ಕಳಿಗೆ ಕಲಿಕೋಪಕರಣ ಮತ್ತು 5000 ಮಕ್ಕಳಿಗೆ ನಿತ್ಯ ಉಪಯೋಗಿ ವಸ್ತುಗಳನ್ನು ವಿತರಿಸಿದೆ.
ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮತ್ತು ಜೀವನೋಪಾಯಕ್ಕೆ ಬೆಂಬಲ ಮಹಾತ್ಮಾಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದ ಅಡಿಯಲ್ಲಿ ಶಿರಸಿ ಮತ್ತು ಸಿದ್ದಾಪುರದಲ್ಲಿ ಲಾಕ್ಡೌನ್ ಸಮಯದಲ್ಲಿ ಕೆಲಸ ಸಿಗದೆ ಚಿಂತೆಗೀಡಾಗಿದ್ದ ದಿನಗೂಲಿ ಕಾರ್ಮಿಕರಿಗೆ ಕೆಲಸವನ್ನು ಒದಗಿಸಿಕೊಟ್ಟ ಮನುವಿಕಾಸ ಸಂಸ್ಥೆ 1100 ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಸಹಕಾರಿಯಾಗಿದೆ.
ಮನುವಿಕಾಸ ಸಂಸ್ಥೆಯ ನೆರವಿನಿಂದ ಕೆಲಸ ಮಾಡಿದ ಆಯ್ದ ದಿನಗೂಲಿ ಕಾರ್ಮಿಕರ ಉತ್ಸಾಹ ಹೆಚ್ಚಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮನುವಿಕಾಸವು ಆಯ್ದ 426ಕ್ಕೂ ಹೆಚ್ಚು ದಿನಗೂಲಿ ಕೆಲಸಗಾರರಿಗೆ ಗುದ್ದಲಿ, ಪಿಕಾಸಿ ಮತ್ತು ಬುಟ್ಟಿಗಳನ್ನು ವಿತರಿಸಿದೆ.
ಕೋವಿಡ್-19ರ ತುರ್ತು ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆಯು ದೇಶವ್ಯಾಪಿ ಲಾಕ್ಡೌನ್ ಸಮಯದಲ್ಲಿ ಜನಸಮುದಾಯ ಬಹಳ ಸಂಕಷ್ಟದಲ್ಲಿರುವುದನ್ನು ಮನಗಂಡು ಆಶಾ ಕಾರ್ಯಕರ್ತೆಯರು, ಖಾಸಗಿ ಶಾಲಾ ಶಿಕ್ಷಕರು, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ, ದಿನಗೂಲಿ ನೌಕರರಿಗೆ, ಅನಾಥರಿಗೆ, ದುರ್ಬಲರಿಗೆ ಸುಮಾರು 10,000ಕ್ಕೂ ಹೆಚ್ಚು ಜನರಿಗೆ ಅಗತ್ಯ ದಿನಸಿ ಕಿಟ್ಗಳನ್ನು ವಿತರಿಸಿದೆ. ಕೋವಿಡ್ ಆರೈಕೆ ಕೇಂದ್ರಗಳಿಗೆ ಆಗಮಿಸುವ ಸೋಂಕಿತರಿಗೆ, ಕೊರೋನಾ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ವೈದ್ಯಾಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವ ಸಾಮಾಗ್ರಿ ನೀಡಿದೆ. ಸಂಸ್ಥೆ ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ಅಗತ್ಯವಿರುವ ಮಾಸ್ಕ್, ಥರ್ಮಾಮೀಟರ್, ಸ್ಯಾನಿಟೈಸರ್ಗಳನ್ನು ವಿತರಿಸಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿರುವ ಗೋಕರ್ಣದ ತರಕಾರಿ ಬೆಳೆಗಾರರಿಗಾಗಿ ರೈತ ಉತ್ಪಾದಕ ಸಂಘವನ್ನು ಆರಂಭಿಸಲಾಗಿದೆ. ಇಲ್ಲಿ ರೈತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ನೇರವಾಗಿ ತಮ್ಮ ಬೆಳೆಗಳನ್ನು ಮಾರಬಹುದಾಗಿದೆ.
-ಗಣಪತಿ ಭಟ್ಟ, ನಿರ್ದೇಶಕರು, ಮನುವಿಕಾಸ ಸಂಸ್ಥೆ
ಮಾಹಿತಿಗೆ ಸಂಪರ್ಕಿಸಿರಿ
ಮನುವಿಕಾಸ, ಮಂಗೇಶ ಮಹಾಲಕ್ಷ್ಮೀ ಬಿಲ್ಡಿಂಗ್ ರಾಯರಪೇಟೆ ಆಂಜನೇಯ ದೇವಸ್ಥಾನ ಹಿಂದೆ ವಿಜಯನಗರ, ಶಿರಸಿ-581401 ದೂ:98459 82552
ಮಿಂಚಂಚೆ
manuvikasa@gmail.com
ಜಾಲತಾಣ
www.manuvikasaindia.org