Advertisement

ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ : ಕಾದಿವೆ 23 ಮಸೂದೆಗಳು

02:59 AM Jul 19, 2021 | Team Udayavani |

ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರ (ಜು.19)ರಿಂದ ಶುರುವಾಗಲಿದ್ದು, ಆ.13ರವರೆಗೆ ನಡೆಯಲಿದೆ. ಹಿರಿಯ ನಾಗರಿಕರ ಕ್ಷೇಮಪಾಲನೆ, ಡಿಎನ್‌ಎ ತಂತ್ರಜ್ಞಾನ, ವಿದ್ಯುತ್‌ ವಿತರಣೆ ಸೇರಿದಂತೆ 23 ಮಸೂದೆಗಳು ಮಂಡನೆಯಾಗಲಿವೆ.

Advertisement

ನ್ಯಾಯಮಂಡಳಿ ಸುಧಾರಣೆ ಮಸೂದೆ
1. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆ ತರುವುದು ಈ ಮಸೂದೆಯ ಉದ್ದೇಶ. ಹಾಲಿ ಇರುವ ಕೆಲವು ನ್ಯಾಯಾಧಿಕರಣ ಮತ್ತು ಮೇಲ್ಮನವಿ ಪ್ರಾಧಿಕಾರಗಳನ್ನು ವಿಸರ್ಜಿಸಿ ಮತ್ತು ಇನ್ನು ಕೆಲವು ಮಂಡಳಿಗಳನ್ನು ಹಾಲಿ ಇರುವುದಕ್ಕೆ ವರ್ಗವಾಗಲಿದೆ.

ಉದಾ: ಸಿನೆಮಾಟೋಗ್ರಾಫ್ ಕಾಯ್ದೆ 1952ನ್ನು ರದ್ದು ಪಡಿಸಿ ಸಿನೆಮಾ ಪ್ರಮಾಣಪತ್ರ ಮಂಡಳಿಯ ಅಧಿಕಾರವನ್ನು ಹೈಕೋರ್ಟ್‌ಗೆ ನೀಡುವುದು.

ಡಿಎನ್‌ಎ ತಂತ್ರಜ್ಞಾನ ಮಸೂದೆ, 2019
2. ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ಡಿಎನ್‌ಎ ಬಲ ನೀಡುವುದು ಈ ಮಸೂದೆಯ ಉದ್ದೇಶ. ಅಪರಾಧಿಗಳು, ಸಂಶಯಿತರು, ವಿಚಾರಣಾಧೀನ ಖೈದಿಗಳು ಮತ್ತು ನಿಗೂಢವಾಗಿ ಅಸುನೀಗಿದ ಅಪರಿಚಿತರ ವಿವರ ಪತ್ತೆ ಹಚ್ಚಲು ಇದರಿಂದ ಅನುಕೂಲ. ಪ್ರಾದೇಶಿಕವಾಗಿ ಡಿಎನ್‌ ಎ ಬ್ಯಾಂಕ್‌ ಸ್ಥಾಪನೆ, ಪ್ರಯೋಗಶಾಲೆಗಳ ಸ್ಥಾಪನೆ ಮತ್ತು ನಿಯಂತ್ರಣ, ಅವುಗಳಿಗೆ ಮಾನ್ಯತೆ ನೀಡುವಿಕೆ, ಡಿಎನ್‌ ಎ ಮಾದರಿ ಸಂಗ್ರಹ, ಅವುಗಳನ್ನು ನಿರ್ಮೂಲನ ಗೊಳಿಸುವಿಕೆ ಹೀಗೆ ಸಮಗ್ರ ವಿಚಾರಗಳನ್ನು ಈ ಮಸೂದೆ ಒಳಗೊಂಡಿದೆ.

ಸಂತಾನೋತ್ಪತ್ತಿ ಪೂರಕ ತಂತ್ರಜ್ಞಾನ (ನಿಯಂತ್ರಣ) ಮಸೂದೆ 2020
3. ಲೋಕಸಭೆಯಲ್ಲಿ 2020ರ ಸೆ.14ರಂದು ಮಂಡಿಸ ಲಾಗಿತ್ತು. ಐವಿಎಫ್ ತಂತ್ರಜ್ಞಾನದಿಂದ ಮಕ್ಕಳನ್ನು ಪಡೆಯುವ ವ್ಯವಸ್ಥೆಗೆ ಇದು ನಿಯಂತ್ರಣ ಹೇರಲಿದೆ. ಇಂಥ ಸೌಲಭ್ಯ ಒದಗಿಸುವ ಕ್ಲಿನಿಕ್‌ಗಳು ಮತ್ತು ಇತರ ವೈದ್ಯಕೀಯ ವ್ಯವಸ್ಥೆಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಇದು ನೆರವಾಗಲಿದೆ. ಹೊಸ ಮಸೂದೆದಲ್ಲಿ ಉಲ್ಲೇಖೀಸಿರು ವಂತೆ ಐವಿಎಫ್ ಕ್ಲಿನಿಕ್‌ ನಿಯಂತ್ರಿಸಲು ರಾಷ್ಟ್ರೀಯ ಮಂಡಳಿ ರಚಿಸಬೇಕಾಗುತ್ತದೆ. ನಿಮಾತ್ರವಲ್ಲದೆ ಭ್ರೂಣ ಮಾರಾಟದಲ್ಲಿ ತೊಡಗಿರುವವರಿಗೆ ಶಿಕ್ಷೆ ವಿಧಿಸಲಾಗುತ್ತದೆ.

Advertisement

ಹೆತ್ತವರ ಮತ್ತು ಹಿರಿಯ ನಾಗರಿಕರ ಕ್ಷೇಮಪಾಲನೆ ಮಸೂದೆ
4. 2019ರ ಡಿ.11ರಂದು ಲೋಕಸಭೆಯಲ್ಲಿ ಅದನ್ನು ಮಂಡಿಸಲಾಗಿತ್ತು. ಹಿರಿಯ ನಾಗರಿಕರ ಪಾಲನ ಕೇಂದ್ರಗಳು, ಮನೆಯಲ್ಲಿಯೇ ಆರೈಕೆ ನೀಡುವ ಸೇವೆ ನೀಡುವ ಸಂಸ್ಥೆಗಳನ್ನು ನೋಂದಣಿ, ಪ್ರತೀ ಪೊಲೀಸ್‌ ಠಾಣೆಗಳಲ್ಲಿ ನೋಡಲ್‌ ಅಧಿಕಾರಿ ನೇಮಿಸುವ ಅಂಶವಿದೆ. ಸಾಮಾಜಿಕ ನ್ಯಾಯ ಖಾತೆ ಮತ್ತು ಸಶಕ್ತಿಕರಣಕ್ಕಾಗಿ ಸಂಸತ್‌ ಸ್ಥಾಯಿ ಸಮಿತಿ ವರದಿ ಸಲ್ಲಿಸಿತ್ತು. ಅದನ್ನು ಜ.29ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ಅಗತ್ಯ ರಕ್ಷಣ ಸೇವೆಗಳ ಮಸೂದೆ 2021
5. ಹಾಲಿ ಇರುವ ಅಧ್ಯಾದೇಶ ಸ್ಥಾನದಲ್ಲಿ ಮಸೂದೆ ಕಾಯ್ದೆಯಾಗಿ ಅನುಷ್ಠಾನಗೊಳ್ಳಲಿದೆ. ಸೇನಾಪಡೆ ಗಳಿಗೆ ಅಡೆ-ತಡೆ ಇಲ್ಲದೆ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಮತ್ತು ಇತರ ಅಗತ್ಯ ವಸ್ತುಗಳು ನಿರಂತರ ವಾಗಿ ಪೂರೈಕೆ ಮಾಡಲು ಇದರಿಂದ ನೆರವಾಗುತ್ತದೆ. ಸರಕಾರಿ ಸ್ವಾಮ್ಯದಲ್ಲಿರುವ ಶಸ್ತ್ರಾಸ್ತ್ರ ತಯಾರಿಕ ಕಾರ್ಖಾನೆಯನ್ನು ಖಾಸಗಿಕರಣ ಗೊಳಿಸಿದ್ದರಿಂದ ಉಂಟಾಗುವ ವಿಳಂಬ ತಡೆಯಲು ಈ ಮಸೂದೆ ನೆರವಾಗಲಿದೆ.

ಕಲ್ಲಿದ್ದಲು ಪ್ರದೇಶಗಳ ಮಸೂದೆ 2021
6. ಕಲ್ಲಿದ್ದಲು ಇರುವ ಬ್ಲಾಕ್‌ಗಳನ್ನು ಭೋಗ್ಯಕ್ಕೆ ನೀಡಿ, ಅವುಗಳನ್ನು ಅಭಿವೃದ್ಧಿಪಡಿಸಲು ಹಾಗೂ ಕಲ್ಲಿದ್ದಲು ಹೊರತೆಗೆಯುವ ಹಕ್ಕುಗಳನ್ನು ಕಂಪೆನಿಗೆ ನೀಡುವ ಅಧಿಕಾರ ಈ ಮಸೂದೆ ಅಂಗೀಕಾರಗೊಂಡ ಬಳಿಕ ಸಿಗುತ್ತದೆ.

ದಂಡು ಮಸೂದೆ 2021
7. ಬ್ರಿಟಿಷ್‌ ಅವಧಿಯಲ್ಲಿ ಸೇನೆಯ ತುಕಡಿಗಳನ್ನು ಮತ್ತು ಅಧಿಕಾರಿಗಳು, ಸಿಬಂದಿಯ ವಾಸ್ತವ್ಯ ಕ್ಕಾಗಿಯೇ ಪ್ರತ್ಯೇಕ ಸ್ಥಳ ಮೀಸಲಾಗಿ ಇರಿಸಲಾಗುತ್ತಿತ್ತು. ಅವುಗಳನ್ನು ದಂಡು ಪ್ರದೇಶ ಎಂದು ಕರೆಯಲಾಗುತ್ತದೆ. ಈ ಮಸೂದೆ ಬಂದ ಬಳಿಕ ದಂಡು ಪ್ರದೇಶಗಳ ವ್ಯವಸ್ಥೆಗಳನ್ನು ಇತರ ನಾಗರಿಕರ ಬಳಕೆಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗಲಿದೆ.

ಠೇವಣಿದಾರರ ವಿಮೆ ಮತ್ತು ಸಾಲ ಖಾತರಿ ನಿಗಮ ಮಸೂದೆ 2021
8. ಪುಣೆ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಬಿಕ್ಕಟ್ಟಿನ ಬಳಿಕ ಗ್ರಾಹಕರ ಹಿತರಕ್ಷಣೆ ಕಾಯ್ದುಕೊಳ್ಳಲು 1961ರಲ್ಲಿ ಜಾರಿಯಾಗಿದ್ದ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಯಿತು. ಸರಕಾರಿ ಸ್ವಾಮ್ಯದ ಬ್ಯಾಂಕ್‌ ಯಾವುದೇ ಕಾರಣದಿಂದಲಾಗಿ ವಹಿವಾಟು ಸ್ಥಗಿತಗೊಳಿಸಿದರೆ ಬ್ಯಾಂಕ್‌ ಅನ್ನು ದಿವಾಳಿ ಎಂದು ಘೋಷಿಸುವುದಕ್ಕಿಂತ ಮೊದಲೇ ಠೇವಣಿದಾರರು ತಮ್ಮ ಮೊತ್ತವನ್ನು ಪಡೆದುಕೊಳ್ಳಲು ಅವಕಾಶವಿದೆ. ಬ್ಯಾಂಕ್‌ ಗಳಲ್ಲಿ ವಹಿವಾಟು ನಿಷೇಧ ಇದ್ದರೂ ಠೇವಣಿದಾರರಿಗೆ ಮೊತ್ತವನ್ನು ವಾಪಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರಿಷ್ಕೃತ ನಿಯಮ ಪ್ರಕಾರ ವಹಿವಾಟು ಸ್ಥಗಿತಗೊಳಿಸಿದರೆ ಠೇವಣಿದಾರರಿಗೆ 5 ಲಕ್ಷ ರೂ. ಪರಿಹಾರ ಸಿಗಲಿದೆ.

ಕಡಲ ಮೀನುಗಾರಿಕೆ ಮಸೂದೆ
9. ಈ ಮಸೂದೆ 1981ರಲ್ಲಿ ಜಾರಿಗೊಳಿಸಲಾಗಿದ್ದ ವಿದೇಶಿ ನಾವೆಗಳಿಂದ ಮೀನುಗಾರಿಕೆ ನಿಯಂತ್ರಣ ಸ್ಥಾನದಲ್ಲಿ ಬರಲಿದೆ. ದೇಶೀಯ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತದ ನಿಯಂತ್ರಣ ಪ್ರದೇಶದಲ್ಲಿ ಸುಲಭವಾಗಿ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸುವ ಅಂಶ ಉಲ್ಲೇಖೀಸಲಾಗಿದೆ.

ವಿದ್ಯುತ್‌ ಮಸೂದೆ 2021
10. ವಿದ್ಯುತ್‌ ವಿತರಣ ಕಂಪೆನಿಗೆ ನೀಡಲಾಗಿದ್ದ ಪರವಾನಿಗೆಯನ್ನು ರದ್ದು ಮಾಡಲು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ವ್ಯವಸ್ಥೆ ತರುವ ನಿಟ್ಟಿನಲ್ಲಿ ಈ ಮಸೂದೆ ನೆರವಾಗಲಿದೆ. ವಿದ್ಯುತ್‌ ವಿತರಣ ಕಂಪೆನಿಗೆ ಕಾನೂನು ಹಿನ್ನೆಲೆ ಹೊಂದಿರುವ ಸದಸ್ಯರ ನೇಮಕಕ್ಕೂ ಅನುಕೂಲವಾಗಲಿದೆ.

ಅಂಜೆಂಡಾದಲ್ಲಿ ಇಲ್ಲ
ಕ್ರಿಪ್ಟೋ ಕರೆನ್ಸಿಗಳ ಕಾರ್ಯನಿರ್ವಹಣೆ ಮೇಲೆ ನಿಯಂತ್ರಣ ಹೇರುವ “ಕ್ರಿಪ್ಟೋಕರೆನ್ಸಿ ಮತ್ತು ಡಿಜಿಟಲ್‌ ಕರೆನ್ಸಿ ನಿಯಂತ್ರಣ ಮಸೂದೆ 2021′ ಸಿದ್ಧಗೊಂಡಿದೆ. ಆದರೆ ಅದನ್ನು ಮಂಡಿಸಲು ನಿರ್ಧರಿಸಲಾಗಿಲ್ಲ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇರುವ ಬ್ಯಾಂಕಿಂಗ್‌ ಕಂಪೆನಿಗಳ (ಸ್ವಾಧೀನ ಮತ್ತು ಉದ್ದಿಮೆಯ ವರ್ಗಾವಣೆ) ತಿದ್ದುಪಡಿ ಮಸೂದೆ ಯನ್ನೂ ಮಂಡಿಸಲು ನಿರ್ಧರಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next