Advertisement

ಮಾವು ಫ‌ಸಲಿಗೆ ಮಳೆ ಕಾಟ

02:02 PM May 17, 2018 | Team Udayavani |

ಕೋಲಾರ: ಮಾವಿನ ರಾಜಧಾನಿ ಎನಿಸಿರುವ ಕೋಲಾರ ಜಿಲ್ಲೆ ಮಾರುಕಟ್ಟೆ ವೈವಿಧ್ಯಮಯ ಮಾವನ್ನು ಸ್ವಾಗತಿಸಲು ಸಜ್ಜಾಗುತ್ತಿರುವಾಗಲೇ, ಅಕಾಲಿಕ ಆಲಿಕಲ್ಲು ಮಳೆ ಮಾವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

Advertisement

ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯ ತೋಟಗಳಲ್ಲಿ ರುಚಿಕರ ತಳಿಗಳ ಮಾವು ಫ‌ಸಲು ಕೊಯ್ಲಿಗೆ ಸಿದ್ಧವಾಗುತ್ತಿದೆ. ಮೇ ಅಂತ್ಯದೊಳಗೆ ಇಲ್ಲವೇ ಜೂನ್‌ ಮೊದಲ ವಾರದಲ್ಲಿ ಜಿಲ್ಲೆಯ ಮಾವಿನ ಸುಗ್ಗಿ ಆರಂಭ ವಾಗುವ ನಿರೀಕ್ಷೆ ಇದೆ.
ಕೋಲಾರ ಜಿಲ್ಲೆಯ ಮಣ್ಣು ವಿವಿಧ ತಳಿಯ ಮಾವನ್ನು ಬೆಳೆಯಲು ಹೇಳಿ ಮಾಡಿಸಿದಂತಿದೆ. ಅದರಲ್ಲೂ ಶ್ರೀನಿವಾಸ
ಪುರ ಮಾವಿಗೆ ರುಚಿ ಹೆಚ್ಚು, ಗುಣ ಮಟ್ಟವೂ ಅಧಿಕ. ರಫ್ತಿಗೆ ಕೋಲಾರ ಜಿಲ್ಲೆಯ ಮಾವು ಹೇಳಿ ಮಾಡಿಸಿದ್ದು
ಎನ್ನುವ ನಂಬಿಕೆ ಇದೆ. 

48 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆ: ಜಿಲ್ಲೆಯಲ್ಲಿ 48,875 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು,
ರಾಜ್ಯದಲ್ಲಿ ಮಾವು ಬೆಳೆಯುವ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ ಜಿಲ್ಲೆ
ಒಳಗೊಂಡು ಪ್ರಮುಖ 5 ಜಿಲ್ಲೆಗಳ ಪೈಕಿ ಕೋಲಾರ ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯ ಮಾವು ವಿಸ್ತೀರ್ಣ 48,875 ಹೆಕ್ಟೇರ್‌. ಈ ಪೈಕಿ ಶ್ರೀನಿವಾಸಪುರದಲ್ಲಿ 28 ಸಾವಿರ ಹೆಕ್ಟೇರ್‌ ಪ್ರದೇಶವಿದೆ. ಪ್ರಮುಖವಾಗಿ ತೋತಾಪುರಿ, ರಾಜಗಿರಾ, ಬೇನಿಷಾ, ಮಲ್ಲಿಕಾ, ನೀಲಂ, ಮಲಗೂಬಾ, ಬಾದಾಮಿ, ಸಿಂಧೂರ ತಳಿಗಳ ಮಾವು ಹೆಚ್ಚು ಬೆಳೆಯಲಾಗುತ್ತಿದೆ.

ಹವಾಮಾನ ವೈಪರೀತ್ಯ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವು ಹೂವು ಬಿಟ್ಟಿದ್ದು ತೀರಾ ವಿಳಂಬ. ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಒಂದೇ ಹಂತದಲ್ಲಿ ಮಾವು ಹೂವು ಚೆನ್ನಾಗಿ ಬಿಟ್ಟಿತ್ತು.ಆದರೆ ಹವಾಮಾನ ವೈಪರೀತ್ಯ ದಿಂದಾಗಿ ಮಾವು ಕಾಯಿ ಕಚ್ಚುವ  ಹಂತ ದಲ್ಲಿ ಹೂವುಗಳು ಉದುರಿದ್ದವು, ಮೋಡ ಕವಿದ ವಾತಾವರಣ, ಸುಡುಬಿಸಿಲಿನಿಂದ ಹಾಗೂ ಏಪ್ರಿಲ್‌ ಆರಂಭದಲ್ಲಿ ಬಿದ್ದ ಮಳೆಗೆ ಪಿಂದೆಗಳು ಉದುರಿಹೋಗಿ ರೈತರು ನಷ್ಟ ಅನುಭವಿಸಿದ್ದರು.

ಶೀಘ್ರ ಮಾರುಕಟ್ಟೆಗೆ: ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ತೋತಾಪುರಿ, ರಾಜಗಿರಾ ಮತ್ತು ಬಾದಾಮಿ ಇನ್ನು
15ರಿಂದ 25 ದಿನಗಳಲ್ಲಿ ಕೊಯ್ಲಿಗೆ ಬರುವ ಸಾಧ್ಯತೆ ಇದೆ. ಉಳಿದ ತಳಿಗಳ ಮಾವು ಜೂನ್‌ ಎರಡನೇ ವಾರದ
ನಂತರ ಕೊಯ್ಲಿಗೆ ಬರಲಿದೆ. 

Advertisement

ಮಂಡಿಗೆ ಸಿದ್ಧತೆ: ಶ್ರೀನಿವಾಸಪುರ ಮಾವಿಗೆ ಅತೀ ದೊಡ್ಡ ಮಾರುಕಟ್ಟೆ. ಈಗಾಗಲೇ ವಿಶಾಲವಾದ ಪ್ರದೇಶದಲ್ಲಿ
ಮಾವಿನ ಮಂಡಿಗಳು ತಲೆಎತ್ತಲಾರಂಭಿಸಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಿಂದ ಮೊದಲು ಮಾವು
ಮಂಡಿಗಳಿಗೆ ಬಂದರೆ ನಂತರದಲ್ಲಿ ನೆರೆಯ ಆಂಧ್ರದ ಪುಂಗನೂರು, ಮದನ ಪಲ್ಲಿ, ಪಲಮನೇರು ಭಾಗಗಳಿಂದ
ಮಾವಿನ ಕಾಯಿ ಮಂಡಿಗಳಿಗೆ ಬರುವ ನಿರೀಕ್ಷೆ ಇದೆ. ಸ್ಥಳೀಯ ಶ್ರೀನಿವಾಸಪುರದ ಮಾವು ಈ ತಿಂಗಳಾಂತ್ಯ ದಿಂದ ಕಟಾವು ಆರಂಭವಾಗಲಿದ್ದು, ಜೂನ್‌ ಮತ್ತು ಜುಲೈ ತಿಂಗಳಿಡೀ ಮಾವಿನ ತವರೂರಿ ನಲ್ಲಿ ಮಾವಿನ ಸುಗ್ಗಿಯದ್ದೇ ಸಂಭ್ರಮ.

ಸದ್ಯಕ್ಕೆ ನೆರೆ ರಾಜ್ಯದ ಮಾವು: ಪ್ರಸ್ತುತ ಕೋಲಾರ ನಗರ ಸೇರಿದಂತೆ ವಿವಿಧೆಡೆ ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಮಾವು ಪ್ರವೇಶಿಸಿದ್ದು, ಪ್ರತಿ ಕೆಜಿಗೆ 100 ರಿಂದ 120 ರೂ. ಧಾರಣೆ ಇದೆ. ಆದರೆ ರುಚಿ ಕಡಿಮೆ ಎನ್ನುವ ಕಾರಣಕ್ಕೆ ಬೇಡಿಕೆಯೂ ಕಡಿಮೆಯೇ.
 
ಮಲ್ಲಿಕಾ ಇನ್ನಿತರೆ ತಳಿಗಳ ಮಾವು ಕೆಜಿಗೆ 150 ರೂ. ವರೆಗೆ ಮಾರಾಟವಾಗುತ್ತಿದೆ. ಈ ಬಾರಿ ಮಾವು ಫ‌ಸಲು ಕಡಿಮೆ ಇರುವುದರಿಂದ ಗ್ರಾಹಕರು ಮಾವಿನ ಹಣ್ಣಿಗಾಗಿ ಮಾವಿನ ಸುಗ್ಗಿ ಯಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ಬೆಲೆ ತೆರಬೇಕಾಗಿಬರಬಹುದು ಎನ್ನುತ್ತಾರೆ ವ್ಯಾಪಾರಸ್ಥರು.

ಆಲಿಕಲ್ಲು ಮಳೆಯಿಂದ ಆತಂಕ ಮೇ 2ರಂದು ಬಿದ್ದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಕೋಲಾರ, ಶ್ರೀನಿವಾಸಪುರ
ಸೇರಿದಂತೆ ವಿವಿಧೆಡೆ 203.78 ಹೆಕ್ಟೇರ್‌ ಮಾವು ಬೆಳೆ ಹಾನಿಯಾಗಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ನಿರಂತರವಾಗಿ ಮಳೆ ಬೀಳುತ್ತಿರುವುದು ರೈತರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮಾವು ಫ‌ಸಲಿನ ಹಂತದಲ್ಲಿ ಮಳೆ ಬೀಳುತ್ತಿರುವುದ ರಿಂದ ತೇವಾಂಶ ಹೆಚ್ಚಿ ಮಾವಿನ ಕಾಯಿಯ ಗಾತ್ರ ದೊಡ್ಡದಾಗುತ್ತದೆ. ಮಾವಿನ ಕಾಯಿಗಳಲ್ಲಿ ಚೆನ್ನಾಗಿ ರಸ ತುಂಬಿ ಸ್ವಲ್ಪ ಹೆಚ್ಚು ಬಾಳಿಕೆ ಬರುತ್ತವೆ. ಹೊರ
ರಾಜ್ಯಗಳಿಗೆ ರಫ್ತು ಮಾಡುವುದಕ್ಕೂ ಸಹಾಯವಾಗುತ್ತದೆ. ಆದರೆ, ಆಲಿಕಲ್ಲು ಮಳೆಯ ಆತಂಕ ಕಾಡುತ್ತಿದೆ.
ಟಿ.ವಿ.ರಮೇಶ್‌, ಮಾವು ಬೆಳೆಗಾರ

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next