Advertisement

ಮತಪ್ರಚಾರ ಮರೆತು ಕನ್ನಡ ಸೇವೆ ಮಾಡಿದ್ದ ಕಿಟ್ಟೆಲ್‌

12:31 AM Nov 13, 2022 | Team Udayavani |

ಮಂಗಳೂರು: ಜರ್ಮನಿಯಿಂದ ಬಂದು ರಾಜ್ಯದಲ್ಲಿ ನೆಲೆಯೂರಿ ಕನ್ನಡ ಭಾಷೆ, ವ್ಯಾಕರಣಕ್ಕೆ ಅಪೂರ್ವ ಕೊಡುಗೆಯಿತ್ತ ರೆ| ಡಾ| ಫರ್ಡಿನಾಂಡ್‌ ಕಿಟ್ಟೆಲ್‌ ಅವರು ಒಂದು ಹಂತದಲ್ಲಿ ಬಾಸೆಲ್‌ ಮಿಷನ್‌ ಸುಪೀರಿಯರ್‌ಗಳಿಂದ ತಾವು ಕ್ರೈಸ್ತ ಮತಪ್ರಚಾರದ ಕೆಲಸ ವನ್ನು ಮಾಡುತ್ತಿಲ್ಲ, ಕೇವಲ ಕನ್ನಡ ಪರಿ ಚಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೂ ಒಳಗಾಗಿದ್ದರು. ಆದರೆ ಅವೆಲ್ಲವನ್ನೂ ಅವಗಣಿಸಿ ಕನ್ನಡದ ಕೆಲಸ ಮುಂದುವರಿಸಿದ ಮಹಾನುಭಾವ ರಾಗಿದ್ದರು ಎಂದು ಹಿರಿಯ ವಿದ್ವಾಂಸ ಪ್ರೊ| ಡಾ| ಬಿ.ಎ. ವಿವೇಕ ರೈ ಹೇಳಿದರು.

Advertisement

ಬಲ್ಮಠದಲ್ಲಿರುವ ಕರ್ನಾಟಕ ಥಿಯೋ ಲಾಜಿಕಲ್‌ ಕಾಲೇಜಿನ (ಕೆಟಿಸಿ) 175 ವರ್ಷಾಚರಣೆ ಅಂಗವಾಗಿ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿ ಸಿದ್ದ ಡಾ| ಕಿಟ್ಟೆಲ್‌ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಿಟ್ಟೆಲ್‌ ಕನ್ನಡ ಪ್ರೇಮ
ಕಿಟ್ಟೆಲ್‌ 1853ರಲ್ಲಿ ಮುಂಬಯಿಗೆ, ಬಳಿಕ ಧಾರವಾಡಕ್ಕೆ ಬಂದರು. ಪ್ರಾರಂಭ ದಲ್ಲೇ ಕನ್ನಡವನ್ನು ಕಲಿತು ಬಳಿಕ ಕನ್ನಡ ಕೃತಿ ರಚನೆ, ಭಾಷಾಂತರ, ವ್ಯಾಕರಣ, ಛಂದಸ್ಸುಗಳ ಸಮಗ್ರ ಮಾಹಿತಿ ಇರುವ ಪಠ್ಯಪುಸ್ತಕ ರಚನೆಯಂತಹ ಕೆಲಸಗಳನ್ನು ಮಾಡಿದ್ದರು. ಅವರ ಕನ್ನಡ ಸೇವೆ ಎಷ್ಟಿತ್ತು ಎಂದರೆ ಅವರ ಮಿಷನ್‌ ಸುಪೀರಿ ಯರ್‌ಗಳೇ ನೀನು ಭಾರತದಲ್ಲಿ ಕ್ರೈಸ್ತ ಮತಪ್ರಚಾರ ಮಾಡದೆ ಕನ್ನಡದ ಕೆಲಸ ಮಾಡುತ್ತಿರುವೆ, ಹೀಗಾದರೆ ಮಿಷನ್‌ನಿಂದ ಕೈಬಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಉತ್ತರಿಸಿದ್ದ ಕಿಟ್ಟೆಲ್‌ ಮಿಷನ್‌ನಿಂದ ಕೈಬಿಟ್ಟರೆ ತನ್ನದೇ ಮಿಷನ್‌ ಸ್ಥಾಪಿಸಿ ಕೆಲಸ ಮುಂದುವರಿಸುವುದಾಗಿ ಹೇಳಿರುವುದು ಅವರ ಪತ್ರಗಳಲ್ಲಿ ಉಲ್ಲೇಖವಾಗಿದೆ ಎಂದು ಪ್ರೊ| ರೈ ವಿವರಿಸಿದರು.

1894ರಲ್ಲಿ ಅವರು ರಚಿಸಿದ ಶಬ್ದಕೋಶ ದಲ್ಲಿ 75 ಸಾವಿರ ಕನ್ನಡ ಪದಗಳಿವೆ. ಮಂಗಳೂರಿನಲ್ಲಿದ್ದು ಕನ್ನಡ ಕಟ್ಟುವ ಕೆಲಸ ಮಾಡಿರುವ ಕಿಟ್ಟೆಲ್‌ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಈ ಪರಿಸರದ ಯಾವುದಾದರೊಂದು ರಸ್ತೆಗೆ ಅವರ ಹೆಸರನ್ನಿಡಬೇಕು, ಜರ್ಮನಿಯಲ್ಲಿರುವ ಕಿಟ್ಟೆಲ್‌ರ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ, ಅವರ ಸಮಗ್ರ ಸಾಹಿತ್ಯ ಸಂಪಾದನೆಗೆ ಮುಂದಾಗ ಬೇಕು ಅಲ್ಲದೆ ಕನ್ನಡ ಇಂಗ್ಲಿಷ್‌ ಶಬ್ದಕೋಶ ರಚಿಸಬೇಕು ಎಂದು ವಿನಂತಿ ಮಾಡಿದರು.

ಜರ್ಮನ್‌ ಸರಕಾರದ ಕೌನ್ಸುಲ್‌ ಜನರಲ್‌ ಫ್ರೆಡರಿಕ್‌ ಬಿರ್ಗೆಲಿನ್‌ ಮಾತನಾಡಿ, ಡಾ| ಕಿಟ್ಟೆಲ್‌ ಅವರು ನಮ್ಮೆರಡು ದೇಶಗಳ ಹಾಗೂ ಸಂಸ್ಕೃತಿಗಳ ನಡುವೆ ಇದ್ದ ಸೇತುವೆಯಂತೆ. ಮಿಷನರಿಯಾಗಿದ್ದುಕೊಂಡು ಕನ್ನಡದ ಕುರಿತು ವಿಸ್ತಾರವಾದ ಸೇವೆ ಮಾಡಿದ ಕಿಟ್ಟೆಲ್‌ ಬಗ್ಗೆ ಇಲ್ಲಿನ ಜನರಿಗೆ ಇರುವ ಪ್ರೀತಿ ನೋಡಿ ವಿಸ್ಮಿತನಾಗಿದ್ದೇನೆ ಎಂದರು.

Advertisement

ಕೆಟಿಸಿ ನಿವೃತ್ತ ಪ್ರಾಂಶುಪಾಲ ಡಾ| ಸಿ.ಎಲ್‌. ಫುರ್ಟಾಡೊ, ಕನ್ನಡ ವಿದ್ವಾಂಸ ಡಾ| ಎ.ವಿ. ನಾವಡ, ಬೆಂಗಳೂರಿನ ಯುನೈಟೆಡ್‌ ಥಿಯೊಲಾಜಿಕಲ್‌ ಕಾಲೇಜಿನ ಡಾ| ಗುಡ್ರುನ್‌ ಲೊÂವ°ರ್‌, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಶ್ರೀನಾಥ್‌, ಮನಪಾ ವಿಪಕ್ಷ ನಾಯಕ ನವೀನ್‌ ಡಿ’ಸೋಜಾ ಉಪಸ್ಥಿತರಿದ್ದರು. ಕೆಟಿಸಿ ಪ್ರಾಂಶುಪಾಲ ಡಾ| ಎಚ್‌.ಎಂ. ವಾಟ್ಸನ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ಸಂದೀಪ್‌ ಸ್ವಾಗತಿಸಿದರು.

ಕಿಟ್ಟೆಲ್‌ ಮರಿಮಕ್ಕಳ ಹರ್ಷ
ಕಿಟ್ಟೆಲ್‌ ಅವರ ಮರಿಮಗಳು ಅಲ್ಮುಥ್‌ ಬಾರ್ಬರಾ ಎಲೆನೊರೆ ಮೈಯರ್‌ (ಕಿಟ್ಟೆಲ್‌) ಮಾತನಾಡಿ, ನನ್ನ ಮುತ್ತಜ್ಜನ ಬಗ್ಗೆ ಅಜ್ಜ ಹೇಳಿದ್ದು ಕೇಳಿದ್ದೇನೆ. ಇಲ್ಲಿನ ಜನರಿಗೆ ಅವರ ಬಗ್ಗೆ ಇದ್ದ ಮಮತೆ ನೋಡಿ ಖುಷಿ ಎನಿಸಿದೆ. ಧಾರವಾಡ ಹಾಗೂ ಮಂಗಳೂರಿಗೆ ಭೇಟಿ ನೀಡಿ ತೃಪ್ತಳಾಗಿದ್ದೇನೆ ಎಂದು ತಿಳಿಸಿದರು.

ಮರಿಮರಿಮಗ ವೈ. ಪ್ಯಾಟ್ರಿಕ್‌ ಮೈಯರ್‌ ಮಾತನಾಡಿ, ಮುತ್ತಜ್ಜನ ತಂದೆಯಾದ ಕಿಟ್ಟೆಲ್‌ ಅವರು ಬೆಸೆದಿರುವ ಎರಡು ದೇಶಗಳ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಬೆಚ್ಚಗಾಗಿಸುವ ಇರಾದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next