Advertisement

ಮಂಗಳೂರು: ಕೊಲೆಯತ್ನ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ವಿಧಿಸಿ ಕೋರ್ಟ್ 

12:21 AM Sep 10, 2022 | Team Udayavani |

ಮಂಗಳೂರು: ಕೊಲೆ ಯತ್ನ ನಡೆಸಿದ ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

Advertisement

ಜಾಗದ ತಕರಾರಿನ ದ್ವೇಷದಿಂದ ಮೂಡುಬಿದಿರೆ ತಾಲೂಕು ನಿಡ್ಡೋಡಿ ಗ್ರಾಮದ ಕೊಂಟಡ್ಕದಲ್ಲಿ ವಸಂತರಾಜ ಶೆಟ್ಟಿ ಅವರನ್ನು ಆರೋಪಿಗಳಾದ ಪ್ರಸನ್ನ ಕುಮಾರ್‌, ಜಯಂತಿ ಸುವರ್ಣ ಮತ್ತು ರಕ್ಷಾ ಸುವರ್ಣ ಕೊಲೆ ಮಾಡಲು ಯತ್ನಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿವರ
2020ರ ಫೆ. 28ರಂದು ಬೆಳಗ್ಗೆ ವಸಂತರಾಜ ಶೆಟ್ಟಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮನೆಯ ಕಾಂಪೌಂಡ್‌ ಒಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಲ್ಲುಗಳಿಂದಲೂ ಹೊಡೆದು ಹಲ್ಲೆ ನಡೆಸಿದ್ದರು. ಸಂಶಯಾತೀತವಾಗಿ ಹಲ್ಲೆ ರುಜು ಮೂಡುಬಿದಿರೆ ಪೊಲೀಸ್‌ ಉಪನಿರೀಕ್ಷಕರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ 2 ಮಂದಿ ಪ್ರತ್ಯಕ್ಷ ಸಾಕ್ಷಿದಾರರು ಅಭಿಯೋಜನೆ ಪಕ್ಷದ ಪರ ಸಾಕ್ಷಿ ನೀಡಿದ್ದು, ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರುವುದು ಸಂಶಯಾತೀತವಾಗಿ ರುಜುವಾತಾಗಿದೆ ಎಂದು ನ್ಯಾಯಾ ಧೀಶರು ತೀರ್ಪು ನೀಡಿದ್ದಾರೆ.

ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 447ರಂತೆ ತಲಾ 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ವಾರದ ಸಾದಾ ಸಜೆ, ಕಲಂ 326ರಂತೆ 3 ವರ್ಷ ಸಾದಾ ಸಜೆ ಮತ್ತು ತಲಾ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 15 ದಿನಗಳ ಸಾದಾ ಸಜೆ ವಿಧಿಸಿದ್ದಾರೆ. ಕಲಂ 504ರಡಿ 6 ತಿಂಗಳ ಸಜೆ ವಿಧಿಸಿದ್ದಾರೆ. ಕಲಂ 307ರಡಿ 3 ವರ್ಷಗಳ ಸಾದಾ ಸಜೆ ಮತ್ತು ತಲಾ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ತಲಾ 1 ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿದ್ದಾರೆ.

ಸಂಗ್ರಹಿಸಲಾದ ಮೊತ್ತದಲ್ಲಿ ವಸಂತ ರಾಜ ಶೆಟ್ಟಿ ಅವರಿಗೆ 6,000 ರೂ. ಮೊತ್ತ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರ ಅಭಿಯೋಜಕ ನಾರಾಯಣ ಶೇರಿಗಾರ್‌ ಯು. ಅವರು ವಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next