Advertisement
ಮಂಗಳೂರು ತಾಲೂಕು ಕಂದಾವರ ಗ್ರಾಮದ ಅಬ್ದುಲ್ ಲತೀಫ್ ಆಲಿಯಾಸ್ ಇಚ್ಚಾ(42) ಶಿಕ್ಷೆಗೊಳಗಾದ ಅಪರಾಧಿ. ಈತ 2017ರಲ್ಲಿ ಅಪ್ರಾಪೆ¤ಯ ಮೇಲೆ ಅತ್ಯಾಚಾರವೆಸಗಿ ಜೀವ ಬೆದರಿಕೆಯೊಡ್ಡಿದ್ದ.
ಅಬ್ದುಲ್ ಲತೀಫ್ ತೆಂಕ ಉಳೆಪಾಡಿ ಗ್ರಾಮದ ಕೈಕಂಬದಲ್ಲಿ ಫಾತಿಮಾ ಡ್ರೆಸ್ ಕಲೆಕ್ಷನ್ಸ್ ಎಂಬ ಬಟ್ಟೆ ಅಂಗಡಿ ಹೊಂದಿದ್ದ. ಈತನ ಅಂಗಡಿಗೆ ಬಾಲಕಿಯೋರ್ವಳು ಕೆಲಸಕ್ಕೆ ಸೇರಿದ್ದಳು. 2017ರ ಎಪ್ರಿಲ್ನಲ್ಲಿ ಮಧ್ಯಾಹ್ನ ವೇಳೆ ಬಾಲಕಿ ತಲೆನೋವೆಂದು ಹೇಳಿದಾಗ ಔಷಧ ತರುವುದಾಗಿ ಹೇಳಿದ ಅಬ್ದುಲ್ ಲತೀಫ್ ಯಾವುದೋ ಒಂದು ಮಾತ್ರೆ ಮತ್ತು ಜ್ಯೂಸ್ ತಂದುಕೊಟ್ಟಿದ್ದ. ಅದನ್ನು ಸೇವಿಸಿದ ಬಾಲಕಿ ಪ್ರಜ್ಞೆ ತಪ್ಪಿದ್ದಳು. ಆ ಸಂದರ್ಭ ಅತ್ಯಾಚಾವೆಸಗಿದ್ದ. ಅನಂತರ ಈ ವಿಚಾರವನ್ನು ಯಾರಿಗೂ ಹೇಳಬಾರದು. ಎಲ್ಲವನ್ನೂ ವೀಡಿಯೋ ಮಾಡಿದ್ದೇನೆ. ಹೇಳಿದರೆ ಅದನ್ನು ವೈರಲ್ ಮಾಡುತ್ತೇನೆ. ನಾನು ಹೇಳಿದಂತೆ ಮುಂದೆಯೂ ಕೇಳಬೇಕು ಎಂದು ಬೆದರಿಕೆ ಹಾಕಿದ್ದ. ಆ ಬಳಿಕ ಬೆದರಿಸಿ ಅತ್ಯಾಚಾರವೆಸಗಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ 2017ರ ಆ. 11ರಂದು ಬಜಪೆ ಪೊಲೀಸರಿಗೆ ದೂರು ನೀಡಿದ್ದಳು. ಅನಂತರ ಮಗುವಿಗೆ ಜನ್ಮ ನೀಡಿದ್ದಳು. ಪೊಲೀಸರು ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ ಅಬ್ದುಲ್ ಲತೀಫ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್ಟಿಎಸ್ಸಿ-2 ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿದರು. ನೊಂದ ಬಾಲಕಿ ಮತ್ತು ಆಕೆಯ ಮನೆಯವರು ಪೂರಕ ಸಾಕ್ಷ್ಯ ನುಡಿಯದೇ ಇದ್ದರೂ ಕೂಡ ಡಿಎನ್ಎ ವರದಿ, ವೈದ್ಯಕೀಯ ಪ್ರಮಾಣಪತ್ರ ಮತ್ತು ತನಿಖಾಧಿಕಾರಿಗಳ ಸಾಕ್ಷ್ಯವನ್ನು ಪರಿಗಣಿಸಿ ಆರೋಪಿ ತಪ್ಪಿತಸ್ಥನೆಂದು ನ್ಯಾಯಾಧೀಶರು ತೀರ್ಪು ನೀಡಿದರು.
Related Articles
Advertisement
ಪೋಕ್ಸೋ ಕಾಯ್ದೆಯ ಕಲಂ 6ರಡಿ ಅತ್ಯಾಚಾರ ಕೃತ್ಯಕ್ಕೆ 10 ವರ್ಷ ಕಠಿನ ಸಜೆ ಮತ್ತು 50,000 ರೂ. ದಂಡ ಹಾಗೂ ಐಪಿಸಿ ಸೆಕ್ಷನ್ 506ರಡಿ ಬೆದರಿಕೆಗೆ 1ವರ್ಷ ಸಾದಾ ಸಜೆ ಮತ್ತು 10,000 ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಆರೋಪಿಗೆ ಸಹಕರಿಸಿದ ಆರೋಪದಲ್ಲಿ ಬಟ್ಟೆ ಅಂಗಡಿಯ ಗೀತಾ ಎಂಬಾಕೆಯ ಮೇಲೆಯೂ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಆಕೆಯನ್ನು ನ್ಯಾಯಾಧೀಶರು ಪ್ರಕರಣದಿಂದ ಬಿಡುಗಡೆಗೊಳಿಸಿದ್ದಾರೆ. ಸರಕಾರದ ಪರವಾಗಿ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್ಟಿಎಸ್ಸಿ-2 ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು. ಇನ್ಸ್ಪೆಕ್ಟರ್ಗಳಾದ ಪಿ.ಡಿ. ನಾಗರಾಜ್, ಪರಶಿವ ಮೂರ್ತಿ ಮತ್ತು ಕೆ.ಆರ್. ನಾಯಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.