Advertisement

ಮಂಗಳೂರು ಕುಕ್ಕರ್ ಪ್ರಕರಣ; ತಮ್ಮ ಸಹೋದರರ ಬಗ್ಗೆ ಮೌನವೇಕೆ?: ಯತ್ನಾಳ್ ಪ್ರಶ್ನೆ

06:26 PM Nov 27, 2022 | Team Udayavani |

ವಿಜಯಪುರ : ಕುಕ್ಕರ್ ಬಾಂಬ್ ಮೂಲಕ ಮಂಗಳೂರಲ್ಲಿ ದುಷ್ಕ್ರತ್ಯ ಎಸಗಿ ದೇಶದ ಭದ್ರತೆಗೆ ಧಕ್ಕೆ ತಂದ ತಮ್ಮ ಸಹೋದರರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಮೌನವೇಕೆ? ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿದ ಕುಮಾರಸ್ವಾಮಿ ಪ್ರತಿಕ್ರಿಯಿಸುತ್ತಿಲ್ಲ ಏಕೆ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವ ದೇವಸ್ಥಾನದ ಮುಂದೆ ಕುಳಿತು, ಹೂ-ಹಣ್ಣು ಮಾರಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ ಅದೇ ದೇವಸ್ಥಾನದ ಮೇಲೆ ದಾಳಿಗೆ ಹುನ್ನಾರ ನಡೆಸಿದ್ದಾರೆ. ಇಂಥ ಗಂಭೀರ ವಿಷಯದ ಬಗ್ಗೆ ಧ್ವನಿ ಎತ್ತದೇ ಮುಸ್ಲಿಂ ತುಷ್ಟೀಕರಣ ಮಾಡುವ ಕಾಂಗ್ರೆಸ್, ಜೆಡಿಎಸ್ ನಾಯಕರು ನಡೆಗೆ ಮೌನವೇ ಸಾಕ್ಷಿ ಎಂದು ಕಿಡಿ ಕಾರಿದರು.

ರಾಜ್ಯದ ಹಿಂದೂಗಳ 7-8 ದೇವಸ್ಥಾನಗಳ ದಾಳಿಗೆ ಸಂಚು ರೂಪಿಸಿದ್ದರು ಎನ್ನುವುದು ಅತ್ಯಂತ ಗಂಭೀರ ವಿಷಯ. ಹೀಗಾಗಿ ಸದರಿ ಕೃತ್ಯದ ಹಿಂದಿರುವ ಶಕ್ತಿಗಳ ಶೋಧಕ್ಕಾಗಿ ಮಂಗಳೂರು  ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಭಾಷಾ ಬಾಂಧವ್ಯದ ಸಂಘರ್ಷ ದೇಶಕ್ಕೆ ಅಪಾಯ

ರಾಜ್ಯದಲ್ಲಿ ಶೂನ್ಯವಾಗಿರುವ ಎಂಇಎಸ್ ಪ್ರಚೋದನೆಯಿಂದ ಮಹಾರಾಷ್ಟ್ರ ರಾಜಕೀಯ ನಾಯಕರು ಕರ್ನಾಟಕದ ವಿಷಯದಲ್ಲಿ ನೀಡುತ್ತಿರುವ ಹೇಳಿಕೆಗಳು ಭಾಷಾ ಬಾಂಧವ್ಯಕ್ಕೆ ಧಕ್ಕೆ ತರಲಿವೆ. ಭಾಷಾ ಸಂಘರ್ಷಕ್ಕೆ ಕಾರಣವಾಗುವ ವರ್ತನೆಯಿಂದ ದೇಶದ ಆಂತರಿಕ ಭದ್ರತೆಗೂ ಧಕ್ಕೆ ಎಂಬುದನ್ನು ಅರಿಯಬೇಕು ಎಂದು ಯತ್ನಾಳ್ ಎಚ್ಚರಿಸಿದರು.

Advertisement

ಬೆಳಗಾವಿ ಭಾಗದಲ್ಲಿ ಭಾಷಾ ಬಾಂಧವ್ಯದ ಪ್ರಚೋದನೆಯಿಂದಲೇ ಬೆಳಗಾವಿ ಭಾಗದಲ್ಲಿ ಎಂಇಎಸ್ 6-7 ಶಾಸಕರು ಆಯ್ಕೆಯಾಗುತ್ತಿದ್ದರು. ಆದರೆ ಇವರ ನೈಜತೆ ಅರಿಯುತ್ತಲೇ ಅಲ್ಲಿನ ಮತದಾರರು ಎಂಇಎಸ್ ಸ್ಥಳೀಯ ಸಂಸ್ಥೆಗೂ ಆಯ್ಕೆಯಾಗದಂತೆ ಶೂನ್ಯಕ್ಕೆ ತಳ್ಳಿದ್ದಾರೆ ಎಂದು ತಿರುಗೇಟು ನೀಡಿದರು.
ಮಹಾರಾಷ್ಟ್ರದ ಕೋರಿಕೆ ಮೇರೆಗೆ ಭಾಷಾವಾರು ಪ್ರಾಂತ್ಯದ ರಚನೆಗೆ ರಚಿಸಿದ್ದ ಮಹಾಜನ್ ಆಯೋಗ ವರದಿ ನೀಡಿದೆ. ಆದರೆ ತಾನೇ ಬೇಡಿಕೊಂಡ ಮಹಾಜನ್ ನೀಡಿವ ವರದಿಯನ್ನೇ ಮಹಾರಾಷ್ಟ್ರ ದಿಕ್ಕರಿಸುತ್ತಿರುವುದು ಖಂಡನಾರ್ಹ ಎಂದರು.

ಭಾಷಾವಾರು ಪ್ರಾಂತ್ಯ ರಚನೆ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಇದನ್ನು ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ ರಾಜ್ಯಗಳೆಲ್ಲವೂ ಒಪ್ಪಲೇಬೇಕು. ಆದರೆ ಮಹಾಜನ್ ವರದಿ ಸಲ್ಲಿಕೆ ಬಳಿಕ ಮಹಾರಾಷ್ಟ್ರ ಸರ್ಕಾರ ತನ್ನ ನೆಲದಲ್ಲಿರುವ ಕನ್ನಡಿಗರು ವಾಸಿಸುವ ಪ್ರದೇಶಗಳನ್ನು ಅಭಿವೃದ್ಧಿ ಮಾಡದೇ ನಿರ್ಲಕ್ಷಿಸಿದೆ ಎಂದು ದೂರಿದರು.

ಕುಡಿಯಲು ನೀರು, ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆಯಂಥ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸದೇ ಗಡಿನಾಡ ಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರ ಮೂರನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ. ಇದರಿಂದ ರೊಚ್ಚಿಗೆದ್ದ ಜತ್ ತಾಲೂಕಿನ 42 ಗ್ರಾ.ಪಂ.ಗಳು ಕರ್ನಾಟಕಕ್ಕೆ ಸೇರುವುದಾಗಿ ನಿರ್ಣಯಿಸಿವೆ. ಮಹಾರಾಷ್ಟ್ರ ಕನ್ನಡಿಗರ ಭಾವನೆಯನ್ನೇ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದರಲ್ಲಿ ತಪ್ಫೇನಿದೆ ಎಂದು ಬೊಮ್ಮಾಯಿ ಅವರನ್ನು ಸಮರ್ಥಿಸಿಕೊಂಡರು.

ಭಾಷಾವಾರು ಪ್ರಾಂತ್ಯ ಅದರಲ್ಲೂ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಹೀಗಾಗಿ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನಾದರೂ ಮಹಾರಾಷ್ಟ್ರ ರಾಜಕೀಯ ನಾಯಕರು ಭಾಷೆಯ ವಿಷಯದಲ್ಲಿ ಅನಗತ್ಯವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಿ ದೇಶದ ಹಿತಕ್ಕೆ ಧಕ್ಕೆ ತರುವ ವರ್ತನೆಯನ್ನು ಬಿಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next