Advertisement

Mangaluru: ಪ್ಲಾಸ್ಟಿಕ್‌ ನಿಯಂತ್ರಣ: ಸಂಘ-ಸಂಸ್ಥೆಗಳ ಪಣ

04:19 PM Oct 27, 2024 | Team Udayavani |

ಮಹಾನಗರ: ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಜಾಗೃತಿ ಮತ್ತು ಹೊಸ ಮಾದರಿಗಳ ಅನುಷ್ಠಾನವೇ ಪ್ರಧಾನ ಎನ್ನುವುದು ಜಗತ್ತಿನೆಲ್ಲೆಡೆ ಸಾಬೀತಾದ ಸತ್ಯ. ಮಂಗಳೂರಿನಲ್ಲಿ ಹಲವು ಸಂಸ್ಥೆಗಳು ಪ್ಲಾಸ್ಟಿಕ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಹೊಸ ಮಾಡೆಲ್‌ಗ‌ಳನ್ನು ರೂಪಿಸಿ ಕಾರ್ಯಾಚರಿಸುತ್ತಿವೆ. ರಸ್ತೆಯಲ್ಲಿ ಎಸೆದ ಪ್ಲಾಸ್ಟಿಕ್‌ ಸಂಗ್ರಹಣೆಯಿಂದ ಹಿಡಿದು ರಾಜಕಾಲುವೆಗಳಲ್ಲಿ ಹರಿದು ಬರುವ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಕೆಲಸಗಳೂ ನಡೆಯುತ್ತಿವೆ. ಅವುಗಳಲ್ಲಿ ಕೆಲವು ಸಂಸ್ಥೆಗಳ ಕೆಲಸವನ್ನು ಇಲ್ಲಿ ದಾಖಲಿಸಲಾಗಿದೆ.

Advertisement

ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌
ರಾಮಕೃಷ್ಣ ಮಿಷನ್‌ನ ಕೈಗೊಂಡ ‘ಸ್ವತ್ಛ ಮಂಗಳೂರು ಅಭಿಯಾನ’ದ ಮುಂದುವರಿದ ಭಾಗವಾಗಿ, ಅಭಿಯಾ ನದ ಸದಸ್ಯರೇ ಹುಟ್ಟಿಹಾಕಿದ ಸಂಸ್ಥೆಯೇ ‘ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆ'(ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ). 2019ರಲ್ಲಿ ಆರಂಭವಾದ ಈ ಸ್ಟಾರ್ಟ್‌ ಅಪ್‌ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಕುರುಕಲು ತಿಂಡಿ, ಬಿಸ್ಕತ್‌ ಕವರ್‌ ಮೊದಲಾದವುಗಳನ್ನು ಸೇರಿಸಿ ಸಮಗ್ರ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 219 ಗ್ರಾಮ ಪಂಚಾಯತ್‌ ವ್ಯಾಪ್ತಿಯ 324 ಗ್ರಾಮಗಳ ಪ್ರತಿ ದಿನ 22 ಟನ್‌ ಪ್ಲಾಸ್ಟಿಕ್‌ ಸಹಿತ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ವಾರ್ಷಿಕವಾಗಿ ನಿರ್ವಹಿಸುವ ಕಸದ ಪ್ರಮಾಣ 8,030 ಮೆ.ಟನ್‌!

ಸಂಸ್ಥೆಯು ಕಾರ್ಕಳದ ನಿಟ್ಟೆ ಮತ್ತು ಮಂಗಳೂರಿನ ತೆಂಕ ಎಡಪದವಿನಲ್ಲಿ ಸುಮಾರು 7 ಟನ್‌ ಸಾಮರ್ಥ್ಯದ ಎಂಆರ್‌ಎಫ್‌ (ಮೆಟೀರಿಯಲ್‌ ರಿಕವರಿ ಫೆಸಿಲಿಟಿ) ಘಟಕಗಳನ್ನು ಹೊಂದಿದೆ. ಬಂಟ್ವಾಳದ ನರಿಕೊಂಬು ಮತ್ತು ಪುತ್ತೂರಿನ ಕೆದಂಬಾಡಿಯಲ್ಲಿ ಮಿನಿ ಎಂಆರ್‌ಎಫ್‌ ಘಟಕಗಳನ್ನು ನಡೆಸುತ್ತಿದೆ. ಘಟಕದಿಂದ ವಾರ್ಷಿಕ ಸುಮಾರು 5 ಸಾವಿರ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಿಮೆಂಟ್‌ ಫ್ಯಾಕ್ಟರಿಗಳ ಬಳಕೆಗೆ ನೀಡಲಾಗುತ್ತಿದೆ. ದೇರಳಕಟ್ಟೆಯ ಕ್ಷೇಮಾ ಮತ್ತು ಮುಡಿಪು ಇನ್ಫೋಸಿಸ್‌ ಕ್ಯಾಂಪಸನ್ನು ಝೀರೋ ವೇಸ್ಟ್‌ ಕ್ಯಾಂಪಸ್‌ ಮಾಡುತ್ತಿದೆ. ತ್ಯಾಜ್ಯ ಮುಕ್ತ ದೇವಾಲಯ ಪರಿಕಲ್ಪನೆಯಡಿ ಕಟೀಲು ದೇಗುಲದಲ್ಲಿಯೂ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್‌
ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್‌ ಮನಪಾ ವ್ಯಾಪ್ತಿಯ ಮಂಗಳಾದೇವಿ, ಬೋಳಾರ ಮತ್ತು ಹೊಯ್ಗೆ ಬಜಾರ್‌ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ತ್ಯಾಜ್ಯ ವಿಂಗಡನೆ ವಿಚಾರವಾಗಿ ಪಾಲಿಕೆಯ ಜತೆ ಕೈ ಜೋಡಿಸಿದೆ. ಟ್ರಸ್ಟ್‌ನ ಪ್ರತಿನಿಧಿಗಳು ನಿರಂತರವಾಗಿ ಮನೆಗಳಿಗೆ ತೆರಳಿ ಮಾಹಿತಿ ನೀಡುವುದು ಮಾತ್ರವಲ್ಲದೆ, ಕಸ ವಿಲೇವಾರಿಗೆ ಮಾಡುವ ಸಿಬಂದಿಯೊಂದಿಗೂ ಸಂಪರ್ಕದಲ್ಲಿದ್ದಾರೆ. ಅಂಬಾ ಮಹೇಶ್ವರಿ ಭಜನ ಮಂದಿರದಲ್ಲೂ ಪ್ರಸಾದವನ್ನು “ಬಟ್ಟೆ ಚೀಲ’ದಲ್ಲಿಯೇ ನೀಡಲಾಗುತ್ತಿದೆ. ‘ಉದಯವಾಣಿ’ಯ ಪ್ಲಾಸ್ಟಿಕ್‌ ಸರಣಿಗೆ ಪೂರಕವಾಗಿ 350 ಮನೆಗಳಿಗೆ ಸಾಮಾನು ತರಲು ಬೇಕಾದ ದೊಡ್ಡ – ಸಣ್ಣ ಬಟ್ಟೆಯ ಚೀಲ ನೀಡಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಪ್ರಮುಖರು.

Advertisement

ಪ್ಲಾಸ್ಟಿಕ್‌ ಫಿಶರ್‌ನ ‘ತ್ರ್ಯಾಶ್‌ಬೂಮ್‌’
ರಾಜಕಾಲುವೆಗಳ ನೀರಿನ ಮೂಲಕ ಹರಿದು ನದಿಯ ಮೂಲಕ ಕಡಲು ಸೇರುವ ಪ್ಲಾಸ್ಟಿಕ್‌ ಹಾಗೂ ಇತರ ತ್ಯಾಜ್ಯಗಳನ್ನು ತಡೆದು, ನಿರ್ವಹಿಸುವ ಕಾರ್ಯವನ್ನು ಪ್ಲಾಸ್ಟಿಕ್‌ ಫಿಶರ್‌ ಎನ್ನುವ ಸಂಸ್ಥೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಸ್ಥಳೀಯ ಕಚೇರಿ ಹೊಂದಿರುವ ಜರ್ಮನಿ ಮೂಲದ ಈ ಸಂಸ್ಥೆ ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಿದೆ. ಕಳೆದೆರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಸ್ಥೆ ನಗರದ ಅಳಕೆ, ಪಾಂಡೇಶ್ವರ, ಕೂಳೂರು, ಜಪ್ಪು ಸಹಿತ ವಿವಿಧಡೆ ರಾಜಕಾಲುವೆಗಳಿಗೆ ತ್ರ್ಯಾಶ್‌ಬೂಮ್‌ ಅಳವಡಿಸಿದೆ.

ಹಸಿರು ದಳದಿಂದ ತ್ಯಾಜ್ಯ ನಿರ್ವಹಣೆ
ಮಂಗಳೂರಿನ ಹಸಿರು ದಳ ಎನ್ನುವ ಎನ್‌ಜಿಒ ಸಂಸ್ಥೆ ಸ್ಟೇಟ್‌ಬ್ಯಾಂಕ್‌ ಇಂಡಿಯಾ ಫೌಂಡೇಶನ್‌ ನೆರವಿನೊಂದಿಗೆ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಮಂಗಳೂರು ಸುತ್ತಲಿನ ಹರೇಕಳ, ಪಾವೂರು, ಬೋಳಿಯಾರ್‌, ಗೋಳ್ತಮಜಲು, ಬಾಳ್ತಿಲ, ಪುದು, ತುಂಬೆ, ಅಡ್ಯಾರ್‌, ನೀರುಮಾರ್ಗ, ಜೋಕಟ್ಟೆ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನೇ ತೊಡಗಿಸಿಕೊಳ್ಳಲಾಗುತ್ತಿದೆ. ತ್ಯಾಜ್ಯವನ್ನು ಗ್ರಾಮ ಮಟ್ಟದಲ್ಲಿಯೇ ವಿಂಗಡಣೆ ಮಾಡಿ, ಮರುಬಳಕೆಗೆ ಸಾಧ್ಯವಿರುವ ವಸ್ತುಗಳನ್ನು ಮಾರಾಟ ಮಾಡಿ, ಅದರ ಒಂದಂಶವನ್ನು ಅವರಿಗೇ ನೀಡಲಾಗುತ್ತದೆ. ಇದಕ್ಕಾಗಿ ಅವರಿಗೆ ತರಬೇತಿಯನ್ನೂ ನೀಡಲಾಗಿದೆ.

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು. ವಾಟ್ಸಪ್‌: 9900567000

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next