Advertisement

Mangaluru: ಉಸಿರಾಟ ಸಮಸ್ಯೆ; ಎಂಟು ತಿಂಗಳ ಗರ್ಭಿಣಿ ಸಾವು

08:25 PM Oct 08, 2024 | Team Udayavani |

ಮಂಗಳೂರು: ನಗರ ಹೊರ ವಲಯದ ಅರ್ಕುಳ ಗಣೇಶ್‌ತೋಟ ನಿವಾಸಿ ಎಂಟು ತಿಂಗಳ ಗರ್ಭಿಣಿಯೊಬ್ಬರು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

Advertisement

ಶರಣ್ಯ (29) ಮೃತ ದುರ್ದೈವಿ. ಅವರಿಗೆ ರವಿವಾರ ತಡರಾತ್ರಿ ಸುಮಾರು 1.15ರ ಸುಮಾರಿಗೆ ಉಸಿರಾಡಲು ಸಮಸ್ಯೆಯಾಗಿ ದಮ್ಮು ಕಟ್ಟುವುದಕ್ಕೆ ಆರಂಭವಾಗಿದೆ. ವೈದ್ಯರು ಮೊದಲೇ ನೀಡಿದ್ದ ಸೂಚನೆಯಂತೆ ವಾಕಿಂಗ್‌ ಮಾಡಿದರೂ ಕಡಿಮೆಯಾಗದೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ದಾರಿ ಮಧ್ಯದಲ್ಲಿ ಅವರಿಗೆ ವಾಂತಿಯಾಗಿದೆ. ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.

ಶರಣ್ಯ ಅವರು ರವಿವಾರವಷ್ಟೇ 29ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದರು. ಮನೆಯಲ್ಲೇ ಸಣ್ಣ ಕಾರ್ಯಕ್ರಮವನ್ನೂ ಮಾಡಿದ್ದರು. ಎರಡನೇ ಬಾರಿ ಗರ್ಭಿಣಿಯಾಗಿದ್ದು, ಎರಡು ವರ್ಷದ ಒಂದು ಹೆಣ್ಣು ಮಗುವಿದೆ. ಎರಡು ಮೂರು ದಿನದ ಹಿಂದೆ ವೈದ್ಯರಲ್ಲಿಗೆ ತೆರಳಿ ತಪಾಸಣೆಯನ್ನೂ ಮಾಡಿಸಿಕೊಂಡು ಬಂದಿದ್ದರು.

ಶರಣ್ಯ ಅವರಿಗೆ ಮದುವೆಯಾಗಿ ಸುಮಾರು 8 ವರ್ಷವಾಗಿದ್ದು, ಪತಿಯೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದರು. ಗರ್ಭಿಣಿಯಾಗಿ ಎರಡು ತಿಂಗಳು ಆಗುತ್ತಲೇ ಊರಿಗೆ ಬಂದು ನೆಲೆಸಿದ್ದರು.

ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಘಟನೆಗೆ ನೈಜ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next