ಮಂಗಳೂರು: ಗಾಂಜಾ ಮಾರಾಟದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ನಗರದ ಕುಂಟಿಕಾನ ಕ್ರಾಸ್ ಬಳಿ ಸಿಸಿಬಿ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ವಿಜಯ ಕುಮಾರ್ ಶೆಟ್ಟಿ (24) ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನಿಂದ 10.200 ಕೆ.ಜಿ. ಗಾಂಜಾ, ಮಾರುತಿ ಸ್ವಿಪ್ಟ್ ಕಾರು, ಮೊಬೈಲ್, 500 ರೂ. ಸಹಿತ ಒಟ್ಟು 5,65,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಯು ಈ ಹಿಂದೆಯೂ ಗಾಂಜಾ ಸಾಗಾಟ ಹಾಗೂ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಚಿಕ್ಕಮಗಳೂರು ಹಾಗೂ ಉಡುಪಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಪ್ರಕರಣದಲ್ಲಿ 20 ಕೆ.ಜಿ. ಗಾಂಜಾದೊಂದಿಗೆ ಸೆರೆಯಾಗಿದ್ದ. ಚಿಕ್ಕಮಗಳೂರು ಜಿಲ್ಲಾ ಅಬಕಾರಿ ಇಲಾಖೆ ಪ್ರಕರಣದಲ್ಲಿ 10 ಕೆ.ಜಿ. ಗಾಂಜಾದೊಂದಿಗೆ ಈತನನ್ನು ಬಂಧಿಸಲಾಗಿತ್ತು.
ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್. ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಯವರಾದ ರಾಜೇಂದ್ರ ಬಿ., ಸುದೀಪ್ ಎಂ.ವಿ. ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.