Advertisement

ಹೊಸ ವಿದ್ಯಾರ್ಥಿಗಳಿಗೆ ಸ್ಥಳ ಇಲ್ಲ ! ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಅನುಸರಿಸಲು ಸರಕಾರದ ಸೂಚನೆ

01:54 AM Jul 23, 2022 | Team Udayavani |

ಮಂಗಳೂರು: ರಾಜ್ಯಾದ್ಯಂತ ಎಲ್ಲ ವಿಶ್ವವಿದ್ಯಾ ನಿಲಯಗಳ ವ್ಯಾಪ್ತಿಯಲ್ಲಿ ಏಕ ರೂಪ ಶೈಕ್ಷಣಿಕ ವೇಳಾಪಟ್ಟಿ ಅನುಸರಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಹೊಸ ಪದವಿ ತರಗತಿಗಳನ್ನು ಆ. 17ರಿಂದ ಆರಂಭಿಸಲು ಸೂಚಿಸಿದೆ.

Advertisement

ಆದರೆ ಮಂಗಳೂರು ವಿ.ವಿ. ವ್ಯಾಪ್ತಿಗೆ ಒಳಪಟ್ಟ ಪದವಿ ಕಾಲೇಜುಗಳಲ್ಲಿ 2021-22 ವರ್ಷದ ಪಾಠ ಪ್ರವಚನಗಳು ಮುಗಿದಿಲ್ಲ; ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ತರಗತಿ ಲಭ್ಯವಿಲ್ಲ!ರಾಜ್ಯದ ಹಲವು ವಿಶ್ವ ವಿದ್ಯಾ ನಿಲಯಗಳಲ್ಲೂ ಇದೇ ಪರಿಸ್ಥಿತಿ ಉದ್ಭವಿಸಿದೆ.

ಹೊಸ ವಿದ್ಯಾರ್ಥಿಗಳಿಗೆ ಆನ್‌ಲೈನ್‌?
ಕಾಲೇಜುಗಳಲ್ಲಿ ಹೊಸ ಪದವಿ ವಿದ್ಯಾರ್ಥಿಗಳಿಗೆ ಆ. 17ರಿಂದ ಸ್ಥಳಾವಕಾಶ ಒದಗಿಸಲು ಸಾಧ್ಯವಾಗದೆ ಇದ್ದರೆ ಆನ್‌ಲೈನ್‌ ತರಗತಿ ಆರಂಭಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸರಕಾರಿ ಕಾಲೇಜುಗಳ ಪ್ರಾಂಶುಪಾಲರ ನೇತೃತ್ವದಲ್ಲಿ ಸಭೆ ನಡೆಸಿ ಪ್ರಾರಂಭಿಕವಾಗಿ ಆನ್‌ಲೈನ್‌ ತರಗತಿ ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ. ಸರಕಾರದಿಂದ ಬರುವ ನಿರ್ದೇಶನವನ್ನು ಗಮನಿಸಿ ತರಗತಿ ಆರಂಭದ ಬಗ್ಗೆ ತೀರ್ಮಾನಿಸಲು ವಿ.ವಿ. ಉದ್ದೇಶಿಸಿದೆ.

2021-22ರ ಕಾಲೇಜು ಶೈಕ್ಷಣಿಕ ಅವಧಿ ಪೂರ್ಣವಾಗಲು ಇನ್ನೂ ಒಂದೂವರೆ ತಿಂಗಳು ಬೇಕು. ಅಲ್ಲಿಯವರೆಗೆ ಹೊಸ ವಿದ್ಯಾರ್ಥಿಗಳ ಕಲಿಕೆ ಹೇಗೆ ಎಂಬುದೇ ಪ್ರಶ್ನೆ.

ಪಿಯು ಫಲಿತಾಂಶ ಬಂದು ಎರಡು ತಿಂಗಳು ಕಳೆದಿದೆ. ಪದವಿ ದಾಖಲಾತಿ ಆರಂಭವಾಗಿ ತಿಂಗಳುಗಳು ಕಳೆದಿವೆ.ಆದರೆ ಸದ್ಯ ಈ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಿಲ್ಲ. ಏಕೆಂದರೆ ಮಂಗಳೂರು ವಿ.ವಿ.ಯಲ್ಲಿ 2021- 22ನೇ ಶೈಕ್ಷಣಿಕ ವರ್ಷ ಪೂರ್ಣ ವಾಗುವುದು ಆಗಸ್ಟ್‌ ಅಂತ್ಯಕ್ಕೆ.

Advertisement

ಆಗಸ್ಟ್‌ ಕೊನೆಯ ವರೆಗೆ ತರಗತಿ, ಸಪ್ಟೆಂಬರ್‌ನಲ್ಲಿ ಹಾಲಿ ಶೈಕ್ಷಣಿಕ ವರ್ಷದ ಪರೀಕ್ಷೆ ನಡೆಯಲಿದೆ. ಬಳಿಕ ಸುಮಾರು 10 ದಿನ ಮೌಲ್ಯಮಾಪನ ನಡೆದು ಪದವಿ ಮೊದಲ ವರ್ಷದ ತರಗತಿ ಆರಂಭವಾಗಬೇಕಿದೆ.

ಮೌಲ್ಯಮಾಪನದಲ್ಲಿ ವಿಳಂಬ ಮತ್ತು ಮಳೆ ಹಿನ್ನೆಲೆಯಲ್ಲಿ ರಜೆ ಘೋಷಿಸಿದ ಕಾರಣ ಬೋಧನೆಯ ವೇಳಾಪಟ್ಟಿಯಲ್ಲಿಯೂ ವ್ಯತ್ಯಯ ಉಂಟಾಗಿದೆ. ಮುಂದಿನ ಬೆರಳೆಣಿಕೆ ದಿನಗಳಲ್ಲಿ ಆಂತರಿಕ ಪರೀಕ್ಷೆ, ಕಾಲೇಜು ವಾರ್ಷಿಕೋತ್ಸವ ಮತ್ತಿತರ ಕಾರ್ಯಕ್ರಮಗಳೂ ಇರುವುದರಿಂದ ಬೋಧನೆಗೆ ಹೆಚ್ಚುವರಿ ದಿನ ಬೇಕಾಗಬಹುದು.

ಮೊದಲ ಎನ್‌ಇಪಿ ಮೌಲ್ಯಮಾಪನ ಬಾಕಿ!
ಬಹುನಿರೀಕ್ಷಿತ ಎನ್‌ಇಪಿ ಅಡಿ ಯಲ್ಲಿ ನಡೆದ ಮೊದಲ ಪರೀಕ್ಷೆ ನಡೆದು ಸ್ವಲ್ಪ ಸಮಯ ಕಳೆದಿದ್ದರೂ ಮೌಲ್ಯಮಾಪನ ಮಾತ್ರ ಇನ್ನೂ ಆರಂಭ ವಾಗಿಲ್ಲ.

ಸದ್ಯ ಎಲ್ಲ ಉಪನ್ಯಾಸಕರು ಕಾಲೇಜಿನಲ್ಲಿ ಕೊನೆಯ ಹಂತದ ಬೋಧನೆಯಲ್ಲಿದ್ದು, ಮೌಲ್ಯಮಾ ಪನಕ್ಕೆ ತೆರಳಿದರೆ ಮತ್ತೆ ಬೋಧನೆಗೆ ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಮೌಲ್ಯಮಾಪನ ಇನ್ನಷ್ಟೇ ನಡೆಯಬೇಕಿದೆ.

ಎಲ್ಲ ವಿ.ವಿ. ವ್ಯಾಪ್ತಿಯಲ್ಲಿ ಆ. 17ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸುವಂತೆ ಸರಕಾರದಿಂದ ಸೂಚನೆ ಬಂದಿದೆ. ಆದರೆ ಮಂಗಳೂರು ವಿ.ವಿ. ಸಹಿತ ವಿವಿಧ ವಿ.ವಿ.ಗಳ ವ್ಯಾಪ್ತಿಯಲ್ಲಿ ಹಾಲಿ ಶೈಕ್ಷಣಿಕ ವರ್ಷ ಮುಗಿಯಲು ಇನ್ನೂ ಸ್ವಲ್ಪ ಸಮಯ ಬೇಕು. ಹೀಗಾಗಿ ಹೊಸ ವಿದ್ಯಾರ್ಥಿಗಳಿಗೆ ಹೇಗೆ ತರಗತಿ ಆರಂಭಿಸಬೇಕು ಎಂಬ ಬಗ್ಗೆ ಸರಕಾರದ ನಿರ್ದೇಶನವನ್ನು ನಿರೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ಕಿಶೋರ್‌ ಕುಮಾರ್‌ ಸಿ.ಕೆ. ಕುಲಸಚಿವರು (ಅಡಳಿತ), ಮಂಗಳೂರು ವಿಶ್ವವಿದ್ಯಾನಿಲಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next