Advertisement

ಮಂಗಳೂರು ಸಂಗೀತೋತ್ಸವ ಖುಷಿ ನೀಡಿದ ಕಛೇರಿಗಳು

07:11 PM Jan 24, 2020 | Team Udayavani |

ಮಂಗಳೂರಿನಲ್ಲಿ ಸಂಗೀತ ಪರಿಷತ್‌ ಆಯೋಜಿಸಿದ್ದ ವಿವಿಧ ಸಂಗೀತ ಕಛೇರಿಗಳು ಕೇಳುಗರಿಗೆ ಮನೋಜ್ಞ ಅನುಭೂತಿಯನ್ನು ನೀಡಿದವು.

Advertisement

ಮಂಗಳೂರು ಸಂಗೀತ ಪರಿಷತ್‌ ತನ್ನ 26ನೇ ವಾರ್ಷಿಕ ಸಂಗೀತೋತ್ಸವವನ್ನೂ ಗಟ್ಟಿಯಾದ ಹೆಜ್ಜೆ ಇರಿಸಿ ಸಂಭ್ರಮಿಸಿತು. 4 ದಿನಗಳ ಅವಧಿಯ ಈ ಉತ್ಸವದಲ್ಲಿ ಸಂಸ್ಥೆಯು ಯುವ ಪ್ರತಿಭೆಗಳ ಕಛೇರಿಗಳು, ಘನವೆತ್ತ ವಿದ್ವಾಂಸರ ಸಂಗೀತ ಸುಧೆ, ವಾದ್ಯಗಳ ಅಪರೂಪದ ಕಚೇರಿ-ವಿಸ್ತƒತ ಹಿಮ್ಮೇಳ ಕಲಾವಿದರ ಗಡಣ, ಇತ್ಯಾದಿಗಳ ಸಂಯೋಜನೆಯಿಂದ ಸಂಸ್ಥೆಯ ಉದ್ದೇಶ ಮತ್ತು ಸಾಮಾಜಿಕ ಬದ್ಧತೆಯನ್ನು ಅಚ್ಚುಕಟ್ಟಾಗಿ ಪೂರೈಸಿತು.

ಪ್ರಾರಂಭದ ದಿನದ ಕಛೇರಿಯು ಚೆನ್ನೈಯ ವಯೋಲಿನ್‌ ವಾದಕ ಮತ್ತು ಗಾಯಕ ವಿ| ಶ್ರೀರಾಂ ಕುಮಾರ್‌ರವರಿಂದ ನಡೆದಿದ್ದು, ಗಾಯಕರ ಧ್ವನಿಯ ಸ್ವರಭಾರದ ಅಡಚಣೆಯಿಂದಾಗಿ ಕಛೇರಿ ಹೆಚ್ಚು ಪರಿಣಾಮ ಬೀರದೆ ಹೋಯಿತು. ಕಛೇರಿ ಶಾಸ್ತ್ರೀಯ ಚೌಕಟ್ಟಿನಲ್ಲೇ ಇದ್ದು, ಶಿಷ್ಯೆ ಅಮೃತಾ ಮುರಳಿಯವರ ಸಹಕಾರ, ವಿ| ಚಾರುಲತಾ ರಾಮಾನುಜಂರವರ ವಯೋಲಿನ್‌ ಪಕ್ಕವಾದ್ಯ, ಜೆ. ವೈದ್ಯನಾಥ್‌ರವರ ಹಿತವಾದ ಮೃದಂಗ ನುಡಿಸಾಣಿಕೆ ಕಛೇರಿಗೆ ಪುಷ್ಟಿ ಒದಗಿಸಿತು. ಎರ ಡನೇ ದಿನದ ಅತ್ಯಂತ ಪ್ರಬುದ್ಧ ಶುದ್ಧ ಶಾಸ್ತ್ರೀಯ ಪರಂಪರೆಯ ಹಾಗೂ ಆಪ್ಯಾಯಮಾನ ಕಛೇರಿ ನೀಡಿದವರು ಚೆನ್ನೈಯ ವಿಜಯಶಿವಂ. ಘನವಾದ ಶಾರೀರ, ಸಮತೋಲನ ಕಾಪಿಟ್ಟ ಕೃತಿಗಳ ಆಯ್ಕೆ, ಮೇಲ್ಮಟ್ಟದ ರಾಗಾಲಾಪನೆ, ನೆರವಲ್‌, ಕಲ್ಪನಾ ಸ್ವರಗಳ ಮನೋಧರ್ಮಗಳ ವಿಭಿನ್ನ ಶೈಲಿ, ಶಿಸ್ತಿನ ನಿರ್ವಹಣೆ, ವಯೋಲಿನ್‌ ವಾದಕ ರಾಂಕುಮಾರ್‌ರ ಹದವರಿತ ನುಡಿಸಾಣಿಕೆ ಸೊಗಸಾಗಿ ಮೃದಂಗ ವಾದನ ಮತ್ತು ತನಿ ಆವರ್ತನದಲ್ಲಿ ರಂಜಿಸಿ ಕಛೇರಿ ಕಳೆಗಟ್ಟಿಸಿದ ವಿ.ಜೆ. ವೈದ್ಯನಾಥನ್‌ರವರ ಪ್ರೌಢಿಮೆ, ಸುನಿಲ್‌ರವರ ಖಂಜಿರದ ಹಿತಮಿತದ ಅನುಸರಣೆ, ಗಾಯಕನಿಗೆ ಗಾಯನದಲ್ಲಿ ಉತ್ತಮವಾಗಿ ಆಧಾರವಿತ್ತ ಯುವ ಗಾಯಕರಾದ ಪ್ರಮೋದ್‌ ಗೋಖಲೆ ಹಾಗೂ ಪ್ರಭಾತ್‌ ಗೋಖಲೆಯವರ ಗಾಯನ ಇವರೆಲ್ಲರ ಸಂಘಟಿತ ಪ್ರಯತ್ನದಿಂದ ಈ ಕಛೇರಿ ಅತ್ಯಂತ ಪ್ರಭಾವಿ ಕಛೇರಿಯಾಗಿ ಮೂಡಿ ಬರಲು ಸಾಧ್ಯವಾಯಿತು.

ಆರಂಭದಲ್ಲೇ ಕಛೇರಿ ಬಿಗುತನಕ್ಕೆ ಸೂಚ್ಯಂಕವಾದ ಅಟ್ಟತಾಳದ ಭೈರವಿಯ ವೀರಿಬೋಣಿ ವರ್ಣ 2 ಕಾಲಗಳಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿತು. ವೈಶಿಷ್ಟ್ಯ ಮೆರೆದ ರಾಗಗಳು, ವಾಗ್ಗೇಯಕಾರ ತಾಳಗಳಿಂದಲೂ ಪರಿಪೂರ್ಣವಾದ ಯೋಗ್ಯವಾದ ಆಲಾಪನೆ, ನೆರವಲ್‌ ಸ್ವರಪ್ರಸ್ತಾರಗಳಿಂದಲೂ ರಂಜಿಸಿದರು. ತೋಡಿಯ ಒಳಹೊರಗನ್ನೂ ಆಳವಾಗಿ ನಿಧಾನವಾಗಿ ಮೊಗೆಮೊಗೆದು ಉಣ್ಣಿಸಿದ ರೀತಿ ಅನನ್ಯ. ಶ್ರೀ ಕೃಷ್ಣಂನ ದಷ್ಟಪುಷ್ಟ ಸಂಗತಿಗಳು, ನೆರವಲ್‌ ಇವೂ ಕೇಳ್ಮಗೆ ಬಹು ಸೌಖ್ಯ ನೀಡಿದವು. ಕಾಫಿ ರಾಗದ ರಾಗಂ ತಾನಂ ಪಲ್ಲವಿಯು ಚುಟುಕಾದ ರಾಗತಾನಗಳೊಂದಿಗೆ ಮಾಂದೇಹಿಯು ಬಿಲಹರಿ, ಕಮಾಚ್‌ ರಾಗಮಾಲಿಕೆಯಿಂದ ಆಕರ್ಷಿಸಲ್ಪಟ್ಟಿತು. ಮಾತಾಡಬಾರದೇನೋ ಜಾವಳಿ, ಫ‌ರಜ್‌ ರಾಗದ ತಿರುಪ್ಪುಗಳ್‌, ಕಛೇರಿಯನ್ನು ಭಜನ್‌ನಿಂದ ವಿದ್ಯುಕ್ತವಾಗಿ ಕೊನೆಗೊಳಿಸಿದರು.

ಮೂರನೇ ದಿನದ ಕಚೇರಿಯನ್ನು ಮೈಸೂರಿನ ಯುವ ಗಾಯಕಿ ಸುಧಾರವರು ಪ್ರಸ್ತುತಿಗೊಳಿಸಿದರು. ತಮ್ಮ ಕಛೇರಿಯಲ್ಲಿ ಜಿ.ಎನ್‌. ಬಿ., ಎಂ.ಎಲ್‌.ವಿ. ಬಾಣಿಯನ್ನು ಎತ್ತಿಹಿಡಿದರು. ಮೈಸೂರಿನ ವಾಗ್ಗೇಯಕಾರರ, ಪುರಂದರದಾಸರ ಕೃತಿಗಳ ಆಯ್ಕೆ ಇವರ ತವರಿನ ಪ್ರೀತಿ, ಕಾಳಜಿಯನ್ನು ಸೂಚಿಸಿತು. ಪಕ್ಕವಾದ್ಯದಲ್ಲಿ ಯುವ ಕಲಾವಿದ ವೈಭವ್‌ರಮಣಿ ವಯೋಲಿನ್‌ ಹಾಗೂ ಮೃದಂಗದಲ್ಲಿ ಹಿರಿಯ ಕಲಾವಿದ ಚೆಲುವರಾಜ್‌ ಸಾಥ್‌ ನೀಡಿದರು.

Advertisement

ಸಮಾರೋಪದಂದು ಸುಪ್ರಭಾತ ಕಛೇರಿಯು ಚೆನ್ನೈಯ ಯುವ ಕಲಾವಿದ ಅನನ್ಯ ಅಶೋಕ್‌ರಿಂದ ನಡೆಯಿತು. ಕು. ಅದಿತಿಕೃಷ್ಣ ಪ್ರಕಾಶ್‌ ವಯೋಲಿನ್‌, ಜಿ.ಎಸ್‌. ನಾಗರಾಜ್‌ ಮೃದಂಗ ಹಾಗೂ ಫ‌ಣೀಂದ್ರ ಭಾಸ್ಕರ್‌ರವರು ಘಟಂನಲ್ಲಿ ನೆರವಿತ್ತರು. ಈ ಗಾಯಕಿ ಆರಿಸಿದ ರಾಗಗಳು, ಕೃತಿಗಳು, ಸ್ಪಷ್ಟ ಸಾಹಿತ್ಯ ಉಚ್ಛಾರ ರಾಗಂ ತಾನಂ ಪಲ್ಲವಿ, ನೆರವಲ್‌, ಕಲ್ಪನಾ ಸ್ವರಗಳು-ಇವೆಲ್ಲವೂ ಕಛೇರಿಯನ್ನು ಮೆರಗುಗೊಳಿಸಿದ ರೀತಿ ಅನನ್ಯವಾಗಿತ್ತು.

ಸಮಾರೋಪದ ಕಛೇರಿಯಾಗಿ ಕರ್ನಾಟಕ ಶಾಸ್ತ್ರೀಯ ಚೌಕಟ್ಟಿನ ಚತುಷ್ಟಯ ಎಂಬ ವಿನೂತನ ಶೈಲಿಯ ವಯೋಲಿನ್‌ (ಶ್ರೀಯಾ ವೈದ್ಯನಾಥನ್‌). ನಾದಸ್ವರ (ಮೈಲೇ ಕಾರ್ತಿಕೇಯನ್‌). ತವಿಲ್‌ (ಜಿ. ಸಿಲಂಬರಸನ್‌) ಹಾಗೂ ಮೃದಂಗ (ಪ್ರವೀಣ್‌ ಸ್ಪರ್ಶ್‌) ಗಳು ಚೆನ್ನೈಯ ಮೇರುಕಲಾವಿದರುಗಳಿಂದ ಜುಗಲ್‌ಬಂದಿಯಾಗಿ ಅಚ್ಚರಿ ಮೂಡುವಂತೆ ನೆರವೇರಿತು. ಅತ್ಯಂತ ಕ್ಲಿಷ್ಟಕರವಾದ ತಂತಿ ಹಾಗೂ ಸುಷಿರವಾದ್ಯಗಳ ಈ ಸಮ್ಮಿಲನ ಯಾವ ರೀತಿಯ ಅಸಮತೋಲನವೂ ಇಲ್ಲದೆ ಸುಲಲಿತವಾಗಿ ಹರಿದುಬಂದದ್ದು ವಿಸ್ಮಯವೇ ಸೈ.

ವಿ| ಪ್ರತಿಭಾ ಎಂ. ಎಲ್‌. ಸಾಮಗ , ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next