ಮಂಗಳೂರು: ಪ್ರವಾದಿ ನಿಂದನೆ ಹಿನ್ನೆಲೆಯಲ್ಲಿ ದೇಶದ ಕೆಲವು ಭಾಗಗಳಲ್ಲಿ ನಡೆದಿರುವಂತೆ ಮಂಗಳೂರಿ ನಲ್ಲಿಯೂ ಪ್ರತಿಭಟನೆ ನಡೆಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಿದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು ಸೋಮವಾರ ನಗರದ ಧಾರ್ಮಿಕ ಮುಖಂಡರ ಸಭೆ ನಡೆಸಿದರು.
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, “ಮಂಗಳೂರಿ ನಲ್ಲಿಯೂ ಪ್ರತಿಭಟನೆ ನಡೆಸಿ ದೇಶದ ಬೇರೆ ಭಾಗಗಳಿಗೆ ಸಂದೇಶ ನೀಡಬೇಕು ಎಂಬ ಸಂದೇಶಗಳು ಕೆಲವು ಸಾಮಾಜಿಕ ಜಾಲತಾಣ ಗ್ರೂಪ್ ಗಳಲ್ಲಿ ರವಾನೆ ಯಾ ಗಿದ್ದವು. ಈ ಬಗ್ಗೆ ಕೆಲವು ಮಂದಿ ಮುಸ್ಲಿಂ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಹಾಗಾಗಿ ಸಭೆ ಕರೆಯಲಾಗಿತ್ತು. ಸಭೆ ಯಲ್ಲಿ ಸುಮಾರು 60 ಮಂದಿ ಮುಖಂಡರು ಭಾಗವಹಿಸಿ ದ್ದರು. ಶಾಂತಿ ಸೌಹಾರ್ದ ಕಾಪಾಡಲು ಸಹಕರಿಸುವ ಭರವಸೆ ನೀಡಿದ್ದಾರೆ’ ಎಂದರು.
ಪ್ರಚೋದನಕಾರಿ
ಸಂದೇಶ ವಿರುದ್ಧ ಕ್ರಮ
ಸಮುದಾಯಕ್ಕೆ ತಪ್ಪು ಮಾಹಿತಿ ನೀಡುವ ಸಂದೇಶಗಳು ಹರಿದಾಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಕೆಲವು ಮಂದಿ ಎಲ್ಲೋ ದೂರದಲ್ಲಿ ಕುಳಿತು ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವುದು, ನಕಲಿ ಖಾತೆಗಳ ಮೂಲಕ ಪೋಸ್ಟ್ ಮಾಡು ವುದು ಗಮನಕ್ಕೆ ಬಂದಿದ್ದು ಈಗಾಗಲೇ ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಂತಹ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಧಾರ್ಮಿಕ ಮುಖಂಡರಿಗೆ ತಿಳಿಸಲಾಗಿದೆ ಎಂದರು.
ಪ್ರತಿಭಟನೆಗೆ ನಿರ್ಧರಿಸಿಲ್ಲ
ಮಂಗಳೂರಿನಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚೆ ನಡೆ ದಿಲ್ಲ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಯುವಸಮಿತಿ ರಚನೆ ಪ್ರಕ್ರಿಯೆ ಆರಂಭ ಪೊಲೀಸ್ ಠಾಣೆ, ವಿಭಾಗ ಮಟ್ಟದಲ್ಲಿ ಇಂತಹ ಸಭೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಜನಸಂಪರ್ಕ ಸಭೆ ಹೆಚ್ಚಾಗಿ ಮಾಡು ವಂತೆ ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ. ಈಗಾಗಲೇ ಠಾಣೆ ಮಟ್ಟದಲ್ಲಿ ಯುವ ಸಮಿತಿಗಳ ರಚನೆ ಪ್ರಕ್ರಿಯೆ ಆರಂಭಿಸಲಾಗಿದ್ದು ಎಲ್ಲ ವರ್ಗದವ ರೊಂದಿಗೆ ಸಂಪರ್ಕ ಸಾಧಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
Related Articles
ಎರಡು ಸಮುದಾಯದ ಸಭೆಗೆ ಸಲಹೆ
ಪೊಲೀಸ್ ಆಯುಕ್ತರು ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ಕರೆದಿರುವುದ ರಿಂದ ವಿಶ್ವಾಸ ಹೆಚ್ಚಾಗಿದೆ. ಎರಡು ಸಮುದಾಯದವರನ್ನು ಕೂಡ ಜಂಟಿ ಸಭೆ ಕರೆಯುವಂತೆ ಸಲಹೆ ನೀಡಿದ್ದೇವೆ. ಜಿಲ್ಲೆಯ ಶಾಂತಿ ಸೌಹಾರ್ದ ಮುಂದುವರಿಯಲು ಸಹಕಾರ ನೀಡುವುದಾಗಿ ಹೇಳಿದ್ದೇವೆ ಎಂದು ಸಭೆಯ ಅನಂತರ ಮುಸ್ಲಿಂ ಧಾರ್ಮಿಕ ಮುಖಂಡ ಬಿ.ಎ. ಮುಮ್ತಾಝ್ ಆಲಿ ತಿಳಿಸಿದರು.
ಹೈದರ್ ಪರ್ತಿಪ್ಪಾಡಿ ಮಾತನಾಡಿ, ಇಂತಹ ಶಾಂತಿ ಸಭೆಗಳು ಮುಂಜಾಗ್ರತ ಕ್ರಮವಾಗಿ ಹಿಂದೆಯೂ ನಡೆಯುತ್ತಿತ್ತು. ಪೊಲೀಸರು ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿ ರುವುದು ಸಂತಸ ತಂದಿದೆ ಎಂದರು.
ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಗಳ ಬಗ್ಗೆ ಸಮುದಾಯದಲ್ಲಿ ಆತಂಕದ ಜತೆಗೆ ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದನ್ನು ನಿವಾರಿಸುವಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಈ ನಡೆ ಉತ್ತಮವಾಗಿದೆ. ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಮ್ಮ ಸಹಕಾರ ಎಂದಿಗೂ ಇರಲಿದೆ ಎಂದು ಮುಖಂಡ ಅಬ್ದುಲ್ ಹಮೀದ್ ಹೇಳಿದರು.
ಡಿಸಿಪಿ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿ ಗೀತಾ, ಪಿ.ಎ. ಹೆಗಡೆ, ಮಸೀದಿ, ವಿವಿಧ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.