Advertisement

ಮಂಗಳೂರು: ನಂತೂರು ವೃತ್ತ, ಕೆಪಿಟಿ ಜಂಕ್ಷನ್‌:ಸಿಗ್ನಲ್‌ ಲೈಟ್‌ ಶೀಘ್ರ ಪುನರಾರಂಭ

04:13 PM Mar 28, 2023 | Team Udayavani |

ನಂತೂರು: ನಿರಂತರ ಅಪಘಾತಗಳು ಸಂಭವಿಸಿ ಅಪಾಯಕಾರಿ ತಾಣವಾಗಿ ಪರಿಣಮಿಸಿರುವ ನಂತೂರು ವೃತ್ತದಲ್ಲಿ ಸಿಗ್ನಲ್‌ ಲೈಟ್‌ ವ್ಯವಸ್ಥೆ ಪುನರಾರಂಭಿಸಲು
ಪೊಲೀಸ್‌ ಇಲಾಖೆ ನಿರ್ಧರಿಸಿದೆ. ಸುಮಾರು ಮೂರು-ನಾಲ್ಕು ವರ್ಷ ಗಳ ಹಿಂದೆ ಇಲ್ಲಿ ಸಿಗ್ನಲ್‌ ಲೈಟ್‌ ಇತ್ತು.

Advertisement

ಆಗಾಗ ಸ್ಥಗಿತಗೊಳ್ಳುತ್ತಿತ್ತು. ಅದರ ನಿರ್ವಹಣೆ ಸಮರ್ಪಕವಾಗಿ ನಡೆಯದೆ ಮೂಲೆ ಗುಂಪಾಗಿತ್ತು. ಅಲ್ಲದೆ ಸಿಗ್ನಲ್‌ ಲೈಟ್‌ನಿಂದ ಕೆಲವೊಮ್ಮೆ ಅನಗತ್ಯವಾಗಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದ ಕಾರಣ ಅದನ್ನು ಬಳಸಿಕೊಂಡಿರಲಿಲ್ಲ. ಮಾತ್ರವಲ್ಲದೆ, ಇಲ್ಲಿ ಓವರ್‌ಪಾಸ್‌ ನಿರ್ಮಾಣ ಯೋಜನೆ ರೂಪಿಸಿದ್ದರಿಂದ ಪೊಲೀಸರು ಸಿಗ್ನಲ್‌ ಲೈಟ್‌ ಅಳವಡಿಕೆಗೆ ಮುಂದಾಗಿರಲಿಲ್ಲ. ಇದೀಗ ಸಿಗ್ನಲ್‌ ಲೈಟ್‌ ಅಳವಡಿಸಬೇಕೆಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಪುನರಾರಂಭಿಸಲು ನಿರ್ಧರಿಸಲಾಗಿದೆ.

ಹೆದ್ದಾರಿಗಳ ಸಂಗಮ
ನಂತೂರು ಸರ್ಕಲ್‌ ಮೂರು ರಾಷ್ಟ್ರೀಯ ಹೆದ್ದಾರಿಗಳು ಸಂಗಮವಾಗುವ ಅಪಾಯಕಾರಿ ತಾಣ. ನಗರ ಸಂಪರ್ಕದ ಪ್ರಮುಖ ರಸ್ತೆ ಕೂಡ ಇಲ್ಲಿಯೇ ಸೇರುತ್ತದೆ. ಸದ್ಯ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೂ ಸಂಚಾರ ಅವ್ಯವಸ್ಥೆ ಪೂರ್ಣ ಸರಿಪಡಿಸುವುದು ಸಾಧ್ಯವಾಗಿಲ್ಲ. ಅಪಘಾತಗಳು ಕೂಡ ನಡೆಯುತ್ತಿವೆ.

ಪಾಲಿಕೆಯಿಂದ ವೆಚ್ಚ
ಈಗ ಇರುವ ಹಳೆಯ ಸಿಗ್ನಲ್‌ ಲೈಟ್‌ನ ಕಂಬಗಳನ್ನೇ ಬಳಸಲಾಗುತ್ತದೆ. ಲೈಟ್‌, ವಯರ್‌ ಮೊದಲಾದವುಗಳನ್ನು ಹೊಸದಾಗಿ ಅಳವಡಿಸಲಾಗುವುದು. ಈ ಬಗ್ಗೆ ಸಭೆ ನಡೆದಿದ್ದು, ಹೆಚ್ಚುವರಿ ವೆಚ್ಚವನ್ನು ಪಾಲಿಕೆಯವರು ಪಾವತಿಸುವುದಾಗಿ ಒಪ್ಪಿಕೊಂಡಿದ್ದಾರೆ. ಸುಮಾರು 6 ಲ.ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಟಿಯಲ್ಲಿಯೂ ಸಿಗ್ನಲ್‌
ಈ ಹಿಂದೆ ಕೆಪಿಟಿ ಜಂಕ್ಷನ್‌ನಲ್ಲಿಯೂ ಸಿಗ್ನಲ್‌ ಲೈಟ್‌ ವ್ಯವಸ್ಥೆ ಇತ್ತು. ಅದು ಕೂಡ ಸ್ಥಗಿತಗೊಂಡಿದ್ದು ಶೀಘ್ರದಲ್ಲೇ ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಾರದೊಳಗೆ ಆರಂಭ ನಿರೀಕ್ಷೆ
ನಂತೂರು ವೃತ್ತದಲ್ಲಿ ಓವರ್‌ಪಾಸ್‌ ನಿರ್ಮಾಣ ಕಾಮಗಾರಿ ನಡೆಯಲಿದೆ. ಅದುವರೆಗೆ ಅಲ್ಲಿ ಸುಗಮ ಸಂಚಾರಕ್ಕಾಗಿ ಸಿಗ್ನಲ್‌ ಲೈಟ್‌ ವ್ಯವಸ್ಥೆ ಪುನರಾರಂಭಿಸಲು ನಿರ್ಧರಿಸಲಾಗಿದೆ. ಒಂದು ವಾರದೊಳಗೆ ಇದು ಕಾರ್ಯಾರಂಭವಾಗುವ ನಿರೀಕ್ಷೆ ಇದೆ.

– ಕುಲದೀಪ್‌ ಕುಮಾರ್‌ ಆರ್‌. ಜೈನ್‌,
ಪೊಲೀಸ್‌ ಆಯುಕ್ತರು, ಮಂಗಳೂರು

ಉದಯವಾಣಿ ಸುದಿನ ವರದಿ ಬಳಿಕ ಕ್ರಮ
ಇತ್ತೀಚೆಗೆ ನಂತೂರು ವೃತ್ತದಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಇಲ್ಲಿ ನಿರಂತರವಾಗಿ ಅಪಘಾತಗಳು ನಡೆದಿರುವ ಬಗ್ಗೆ, ಸಂಚಾರ ಅವ್ಯವಸ್ಥೆ ಬಗ್ಗೆ ಉದಯವಾಣಿ ಸುದಿನ ವರದಿ ಮಾಡಿತ್ತು. ಅನಂತರ ವೃತ್ತದ ಸಮೀಪ ಬಿಕರ್ನಕಟ್ಟೆ ಶಕ್ತಿನಗರ, ಬಜ್ಜೋಡಿ ಬಳಿ ಒಳರಸ್ತೆಗಳಿಂದ ಹೆದ್ದಾರಿ ಪ್ರವೇಶಿಸುವಲ್ಲಿ ಬ್ಯಾರಿಕೇಡ್‌ ಅಳವಡಿಸಿ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಅಲ್ಲದೆ ಪೊಲೀಸರ ಕರ್ತವ್ಯಕ್ಕೆ ಅನುಕೂಲವಾಗುವ ಪೊಲೀಸ್‌ ಹೈಲ್ಯಾಂಡನ್ನು ಬಳಕೆಗೆ ಸಿದ್ಧಪಡಿಸಿಕೊಳ್ಳಲಾಗಿದೆ. ಹೆಚ್ಚುವರಿ ಸಿಸಿ ಕೆಮರಾ ಅಳವಡಿಸಲಾಗಿದೆ. ಇದೀಗ ಸಿಗ್ನಲ್‌ ಲೈಟ್‌ ಅಳವಡಿಕೆಗೂ ಪೊಲೀಸ್‌ ಇಲಾಖೆ ಮುಂದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next