Advertisement

ಮಿತಿ ಮೀರಿದ ಮತ “ಮಾತು’

01:27 AM Apr 02, 2019 | Sriram |

ರಾಜ್ಯದ ಹೈವೋಲ್ಟೆಜ್‌ ಕ್ಷೇತ್ರ ಎಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಭರಾಟೆ ರಂಗೇರುತ್ತಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸಿಎಂ ಕುಮಾರಸ್ವಾಮಿ ಸೇರಿ ಜೆಡಿಎಸ್‌ ಮುಖಂಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ವಿರುದ್ಧ ನೀಡುತ್ತಿರುವ ಹೇಳಿಕೆಗಳು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಿನ ಸರದಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರದ್ದು. ಅಂಬರೀಶ್‌ ಹಾಗೂ ಸುಮಲತಾ ಕುರಿತ ಅವರ ವಾಗ್ಧಾಳಿಯ ಸ್ಯಾಂಪಲ್‌ ಹೀಗಿದೆ..

Advertisement

ಶಿವರಾಮೇಗೌಡ ವಿರುದ್ಧ ಪ್ರತಿಭಟನೆ
ಮಂಡ್ಯ: ಸುಮಲತಾ ಅಂಬರೀಶ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಶಿವರಾಮೇಗೌಡರ ವಿರುದ್ಧ ಅಂಬರೀಶ್‌ ಅಭಿಮಾನಿಗಳು ಸೋಮವಾರ ವಿವಿಧೆಡೆ
ಪ್ರತಿಭಟನೆ, ರಸ್ತೆ ತಡೆ ನಡೆಸಿದರು.

ಮದ್ದೂರು ಪಟ್ಟಣದ ಶಿಂಷಾ ಬ್ಯಾಂಕ್‌ ಬಳಿ ಜಮಾವಣೆಗೊಂಡ ಅಂಬರೀಶ್‌ ಅಭಿಮಾನಿಗಳು ಸಂಸದ ಶಿವರಾಮೇಗೌಡರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸುಮಲತಾ ಪರ ಅಪಪ್ರಚಾರ, ಇಲ್ಲಸಲ್ಲದ ಹೇಳಿಕೆಗಳನ್ನು
ನೀಡುವ ಮೂಲಕ ಮಹಿಳೆಗೆ ಅಪಮಾನ ಮಾಡುವುದನ್ನು ನಾವೆಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಮದ್ದೂರು ತಾಲೂಕು ಭಾರತೀನಗರ ಸಮೀಪದ ದೊಡ್ಡರಸಿನಕೆರೆಯ ಮಳವಳ್ಳಿ-ಮದ್ದೂರು ರಸ್ತೆಯಲ್ಲಿ ಅಂಬರೀಶ್‌ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

“23ರ ನಂತರ ಸುಮಲತಾ ಮನೆ ಸೇರ್ತಾರೆ’
ಕೆ.ಆರ್‌.ಪೇಟೆ: “ಇಂದು ಚುನಾವಣಾ ಕಣದಲ್ಲಿರುವ ಸುಮಲತಾ ಮೇ 23ರ ಫ‌ಲಿತಾಂಶದಲ್ಲಿ ಸೋಲು ಎಂದು ಘೋಷಣೆಯಾದ ನಂತರ ಜಿಲ್ಲೆಯಿಂದ ಕಾಣೆಯಾಗುತ್ತಾರೆ. ಆ ನಂತರ ನಿಮ್ಮ ನೆರವಿಗೆ ಗೌಡರ ಕುಟುಂಬವೇ ಬರಬೇಕು’ ಎಂದು ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೋಮುವಾದಿ ಬಿಜೆಪಿ ಬೆಂಬಲ ಪಡೆದು ದಿನಕ್ಕೊಂದು ಸುಳ್ಳು ಹೇಳುತ್ತಾ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿರುವ
ಸುಮಲತಾ ಮೇ.23ರವರೆಗೆ ಮಾತ್ರ ಜಿಲ್ಲೆಯಲ್ಲಿ ಕಾಣಿಸಿಕೊಳ್ತಾರೆ. ಚುನಾವಣೆಯಲ್ಲಿ ಸೋತ ಮರು ಕ್ಷಣದಿಂದಲೇ ಜಿಲ್ಲೆಯಿಂದ ನಾಪತ್ತೆಯಾಗುವ ಅವರು ಮತ್ತೆ ಜಿಲ್ಲೆಯಲ್ಲಿ ಕಾಣಿಸುವುದಿಲ್ಲ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರೈತ ಪರವಾದ ಸರ್ಕಾರವನ್ನು ಬಲಿಷ್ಠಗೊಳಿಸಲು ನಿಖೀಲ್‌ ಅವರಿಗೆ ಮತ ನೀಡುವಂತೆ ಮನವಿ
ಮಾಡಿದರು.

Advertisement

ಅಂಬರೀಶ್‌ ಯಾರಿಗೆ ಏನು ದಾನ ಮಾಡಿದ್ದ?
– ಅಂಬರೀಶ್‌ಗೆ ದಾನಶೂರ ಕರ್ಣ ಎಂಬ ಬಿರುದನ್ನು ಯಾರು
ನೀಡಿದರೋ ಗೊತ್ತಿಲ್ಲ. ಅದು ಯಾರಿಗೆ, ಏನು ದಾನ ಮಾಡಿದ್ದಾನೋ ನನಗಂತೂ ಗೊತ್ತಿಲ್ಲ.
– ಅಂಬರೀಶ್‌ ಇರುವಷ್ಟು ದಿನ ಬಹಳ ಜಾಲಿಯಾಗಿದ್ದ ಪುಣ್ಯಾತ್ಮ. ಸತ್ತಾಗಲೂ ರಾಜನ ರೀತಿ ಮರ್ಯಾದೆ ಮಾಡಿಸಿಕೊಂಡು ಹೋದ. ಕುಮಾರಸ್ವಾಮಿ ಮೇಲಿನ ಅಭಿಮಾನದಿಂದ ಅಂಬಿ ಸಾವಿನ ದಿನ ಸಾಗರದಷ್ಟು ಜನ ಜಮಾಯಿಸಿದ್ದರು. ಆ ಅಭಿಮಾನಕ್ಕೆ ಮಹಾರಾಜನ ರೀತಿ ಕಳುಹಿಸಿಕೊಡುವ ಮೂಲಕ ಕುಮಾರಸ್ವಾಮಿ ಹೆಗಲು ಕೊಟ್ಟರು, ಆ ಹೆಗಲು ಕೊಟ್ಟ ಕರ್ಮಕ್ಕೆ ಇಂದು ಕುಮಾರಸ್ವಾಮಿ ಅನುಭವಿಸಬೇಕಿದೆ.
– ಅಂದು ಕುಮಾರಸ್ವಾಮಿ ಮೆರೆದ ಮಾನವೀಯತೆಗೆ ಕನಿಷ್ಠ ಪ್ರಮಾಣದ ಕೃತಜ್ಞತೆ ಇಲ್ಲದಂತೆ ಇಂದು ಸುಮಲತಾ ವರ್ತಿಸುತ್ತಿದ್ದಾರೆ. ಅಂದು ಸೇರಿದ್ದ ಜನಸ್ತೋಮವನ್ನು ಕಂಡು ಬೆರಗಾಗಿ “ಇವರೆಲ್ಲ ನನ್ನ ಅಭಿಮಾನಿಗಳೇ, ನಾನು ಬಿಡಕ್ಕಾಗೊಲ್ಲ’ ಎಂಬ ಕಲ್ಪನೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸುಮಲತಾ ವರ್ತಿಸುತ್ತಿದ್ದಾರೆ.
– ಅಂಬರೀಶ್‌ನನ್ನು ರಾಜಕೀಯಕ್ಕೆ ಪದಾರ್ಪಣೆ ಮಾಡಿಸಿದ್ದು ನಾನು. ನನ್ನ ಮನೆಯ ಹಣ ಹಾಕಿ ರಾಜಕೀಯಕ್ಕೆ ತಂದಿದ್ದೇನೆ. ಅಂದು ನಾನು ದುಡ್ಡು ಕೊಡದ ವಿನಃ ಅಂಬಿ ಮನೆಯಿಂದ ಕಾಲೆ¤ಗೆಯಲೇ ಇಲ್ಲ. ದುಡ್ಡು ಕೊಟ್ಟಮೇಲೆ ನನ್ನೊಂದಿಗೆ ಬಂದರು. ಆನಂತರ ಅವರನ್ನು ರಾಜಕೀಯಕ್ಕೆ ಕರೆತಂದೆ.
– ಅಂಬರೀಶ್‌ ನೀಡಿರುವ ಕೊಡುಗೆಗಳ ಸಾಕ್ಷಿ ಗುಡ್ಡೆಗಳು ಏನು? ನಂತರ ರಮ್ಯಾ ಸ್ಪರ್ಧೆ ಮಾಡಿ ಜಯಶೀಲರನ್ನಾಗಿ ಮಾಡಿದೆವು. ಆದ್ರೆ ಆ ಪುಣ್ಯಾತ್‌ಗಿತ್ತಿ ಅದೆಲ್ಲಿ ಹೋಗಿ ಕುಂತವಳ್ಳೋ ಗೊತ್ತಿಲ್ಲ. ಎಲ್ಲರೂ ಗೆದ್ದ ನಂತರ ಜಿಲ್ಲೆಯನ್ನು ಬಿಟ್ಟು ಹೊರಗಡೆ ಜೀವನ ಸಾಗಿಸುವುದು, ಜಿಲ್ಲೆಯ ಜನತೆಗೆ ಮೋಸವೆಸಗಿ ಮತದಾರರ ಕೈಗೆ ಸಿಗದಿರುವುದು
ಸಿನಿಮಾರಂಗದವರ ಖಯಾಲಿ.

ಆಂಧ್ರ ನಾಯ್ಡು ಮಂಡ್ಯ ಗೌಡ್ತಿಯಾಗಲು ಸಾಧ್ಯವೇ?
– ಸುಮಲತಾ ಗೌಡರೂ ಅಲ್ಲ, ಒಕ್ಕಲಿಗರೂ ಅಲ್ಲ, ಅವರು ಆಂಧ್ರ ಮೂಲದ ನಾಯ್ಡು. ಅವರು ಹೇಗೆ ಮಂಡ್ಯದ ಗೌಡ್ತಿ ಆಗಲು ಸಾಧ್ಯ?
– ಚುನಾವಣೆ ಇನ್ನೂ 15 ದಿನ ಬಾಕಿ ಇದೆ. ಅಷ್ಟರೊಳಗೆ ಸುಮಲತಾ ಅವರು ಗೌಡ್ರ ಅಥವಾ ಒಕ್ಕಲಿಗರಾ ಎನ್ನುವುದು ತೀರ್ಮಾನವಾಗಬೇಕು. ನಾಯ್ಡು ಜನಾಂಗದವರು ಮಂಡ್ಯದಲ್ಲಿ ಎಷ್ಟರ ಮಟ್ಟಿಗೆ ಜಿಲ್ಲೆಯ ವಿವಿಧೆಡೆ ಜನತೆಯನ್ನು ಮರುಳು ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
– ತೆಲುಗು ಸಿನಿಮಾದಲ್ಲಿ ಕಂಡುಬರುವ ದೃಶ್ಯದಂತೆ ಸುಮಕ್ಕ ಮಂಡ್ಯದ ಜನರನ್ನು ಉದ್ದೇಶಿಸಿ, ನನಗೆ ಭರವಸೆ ಕೊಡಿ, ಭರವಸೆ ಕೊಡಿ, ನಾನು ಲೋಕಸಭೆಯಲ್ಲಿ ಬಡೀತೀನಿ, ಬಡಿತೀನಿ ಎನ್ನುತ್ತಿದ್ದಾರೆ. ಅದೇನು ಬಡಿತಾರೋ ಇವರು ಕಾಣೆ. ನಾನು ಕಾಣದ ಲೋಕಸಭೆಯೇ?
– ಅಂಬಿ ಬದುಕಿದ್ದಾಗ ಮನೆಗೆ ಹೋದ ಮಂಡ್ಯ ಜನರನ್ನು ಕಂಡು ಅವರೆಲ್ಲಾ ಹೋದ ನಂತರ ಹೇಳಿ ಕೆಳಗಡೆ ಬರುತ್ತೇನೆ ಎನ್ನುತ್ತಿದ್ದ ಸುಮಕ್ಕ, ಇಂದು ಇದ್ದಕ್ಕಿದ್ದ ಹಾಗೆ
ಮಂಡ್ಯ ಜನತೆ ಮೇಲೆ ಪ್ರೀತಿ ಸುರಿಸುತ್ತಿರುವುದು ಏಕೆ ಎಂದು ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳಬೇಕು.
– ಸುಮಲತಾ ಮಳವಳ್ಳಿ ಹುಚ್ಚೇಗೌಡರ ಸೊಸೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅವರಿಗೆ ಮಂಡ್ಯ ಜನರ ಸೇವೆ ಮಾಡಬೇಕೆನ್ನುವ ಹಂಬಲವಿದ್ದಿದ್ದರೆ,
ಅಂಬರೀಶ್‌ ಹೆಂಡತಿ ಗೌಡ್ತಿ ಎಂದು ಭಾವಿಸಿದರೂ ಇಷ್ಟು ದಿನ ಏಕೆ ಮಂಡ್ಯ ಜಿಲ್ಲೆಯ ಜನರ ಕಷ್ಟಗಳಲ್ಲಿ ಭಾಗವಹಿಸಲಿಲ್ಲ. ಇಷ್ಟು ವರ್ಷಗಳಲ್ಲಿ ಯಾವ ಚುನಾವಣೆಯಲ್ಲಿ ಅಂಬಿ ಜತೆ ಬಂದು ಮತಹಾಕಿದ್ದಾರೆ ಎಂಬುದನ್ನು ತಿಳಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next