Advertisement

ಜೆಡಿಎಸ್‌ ಭದ್ರಕೋಟೆಗೆ ಮೂರು ಬಾಗಿಲು

11:25 AM Mar 27, 2023 | Team Udayavani |

ಮಂಡ್ಯ: ಜೆಡಿಎಸ್‌ ಭದ್ರಕೋಟೆಯಾಗಿರುವ ಶ್ರೀರಂಗ ಪಟ್ಟಣ ವಿಧಾನಸಭಾ ಕ್ಷೇತ್ರದಲ್ಲೀಗ ಬಂಡಾಯದ ಅಲೆ ಜೋರಾಗಿದೆ. ಜೆಡಿಎಸ್‌ನಲ್ಲಿ ಬಂಡಾಯ, ಭಿನ್ನಮತದ ಕಹಳೆ ಮೊಳಗಿದೆ.

Advertisement

ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ, ಈಗಾಗಲೇ ತಗ್ಗಹಳ್ಳಿ ವೆಂಕಟೇಶ್‌ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಜೆಡಿಎಸ್‌ ನಿಂದ ದೂರ ಉಳಿದಿದ್ದಾರೆ. ಇನ್ನೂ ಕೆಲವರು ಜೆಡಿಎಸ್‌ ಪಕ್ಷ ತೊರೆದಿದ್ದಾರೆ.

15 ವರ್ಷದಿಂದ ಜೆಡಿಎಸ್‌ಗೆ ಅಧಿಕಾರ: ಕಳೆದ 15 ವರ್ಷಗಳಿಂದ ಜೆಡಿಎಸ್‌ನದ್ದೇ ಆರ್ಭಟವಾಗಿದೆ. ಆದರೆ, ಈ ಬಾರಿ ಬಂಡಾಯದ ಬೇಗೆಯಲ್ಲಿ ಬೇಯುವಂತಾಗಿದೆ. ಮೊದಲು 10 ವರ್ಷಗಳು ಮಾಜಿ ಶಾಸಕ ರಮೇಶ್‌ ಬಾಬು ಶಾಸಕರಾಗಿದ್ದರು. ನಂತರ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು. ಕಾಂಗ್ರೆಸ್‌ನಲ್ಲಿದ್ದ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ ಸೇರಿ ಮೊದಲ ಗೆಲುವು ದಾಖಲಿಸಿದ್ದರು. ಜೆಡಿಎಸ್‌ ಭದ್ರಕೋಟೆ ಬೇಧಿಸಲಾ ಗದೆ ರಮೇಶ್‌ ಬಾಬು ಪರಾಭವಗೊಳ್ಳಬೇಕಾಗಿತ್ತು.

ಬಂಡಾಯ ಸಾರಿದ ತಗ್ಗಹಳ್ಳಿ ವೆಂಕಟೇಶ್‌: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಮೊದಲ ಹಾಗೂ ಎರಡನೇ ವೃತ್ತದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಹೋಬಳಿಯಾಗಿದೆ. ಇಲ್ಲಿ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಪ್ರಭಾವ ಹೆಚ್ಚಿದೆ. ಇದರಿಂದ ಜೆಡಿಎಸ್‌ ಇಲ್ಲಿ ಪ್ರಭಾವ ಹೊಂದಿತ್ತು. ಆದರೆ, ಈಗ ತಗ್ಗಹಳ್ಳಿ ವೆಂಕಟೇಶ್‌ ಪಕ್ಷದಿಂದ ದೂರ ಉಳಿದು ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದು ಪಕ್ಷದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಕ್ಷ ಬಿಡುತ್ತಿರುವ ಪದಾಧಿಕಾರಿಗಳು: ಜೆಡಿಎಸ್‌ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪದಾಧಿಕಾರಿಗಳು ಪಕ್ಷ ತೊರೆಯುತ್ತಿದ್ದಾರೆ. ಈಗಾಗಲೇ ಹಲವು ಮಂದಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವು ನಿಷ್ಠಾವಂತ ಕಾರ್ಯಕರ್ತರು ಶಾಸಕರ ವಿರುದ್ಧ ಅಸಮಾಧಾನವಿದ್ದರೂ ಪಕ್ಷ ನಿಷ್ಠೆ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಮೇಲಿನ ಪ್ರೀತಿಗೆ ಪಕ್ಷದಲ್ಲೇ ಉಳಿದುಕೊಂಡಿದ್ದಾರೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.

Advertisement

ಗಾಳ ಹಾಕುತ್ತಿರುವ ರಮೇಶ್‌, ಸಚ್ಚಿ: ಜೆಡಿಎಸ್‌ ಪಕ್ಷದಲ್ಲಿನ ಮುಖಂಡರು, ಕಾರ್ಯಕರ್ತರ ಒಡಕಿನ ಲಾಭವನ್ನು ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಾಬು ಹಾಗೂ ಬಿಜೆಪಿ ಮುಖಂಡ ಇಂಡುವಾಳು ಎಸ್‌.ಸಚ್ಚಿ ದಾನಂದ ಪಡೆಯಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಜೆಡಿಎಸ್‌ ಅತೃಪ್ತರ ಸಭೆಗೆ ದಿಢೀರ್‌ ಆಗಮಿಸಿದ ರಮೇಶ್‌ ಬಾಬು ಹಲವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅಲ್ಲದೆ, ಈಗಲೂ ಜೆಡಿಎಸ್‌ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇನ್ನೂ ಸಚ್ಚಿದಾನಂದ ಅಸಮಾಧಾನಿತರನ್ನು ಸಮಾಧಾನ ಮಾಡುವ ಮೂಲಕ ಕಮಲಕ್ಕೆ ಸೆಳೆಯುತ್ತಿದ್ದಾರೆ. ಮತ್ತೂಂದೆಡೆ ತಗ್ಗಹಳ್ಳಿ ವೆಂಕಟೇಶ್‌ ಪಕ್ಷ ಬಿಡದೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಾ, ಕಾರ್ಯಕರ್ತರ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ.

ನೋಟಿಸ್‌ ನೀಡಿದ ಜೆಡಿಎಸ್‌: ಕಳೆದ ಒಂದೂವರೆ ವರ್ಷದಿಂದಲೇ ತಗ್ಗಹಳ್ಳಿ ವೆಂಕಟೇಶ್‌ ಜೆಡಿಎಸ್‌ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯಸಲಾಗುತ್ತಿದೆ. ಯಾವುದೇ ಸಭೆ, ಸಮಾರಂಭಗಳಿಗೆ ಆಹ್ವಾನ ನೀಡದೆ ಅವಮಾನಿಸಲಾಗುತ್ತಿದೆ ಎಂದು ದೂರಿದ್ದರು. ಆಗಲೇ ಕರೆದು ಮಾತುಕತೆ ಮೂಲಕ ಬಗೆಹರಿಸಬಹುದಾಗಿದ್ದ ಸಮಸ್ಯೆ ಯನ್ನು ಈಗ ಬಂಡಾಯ ಸಾರಿದ ಮೇಲೆ ಶಾಸಕರ ಒತ್ತಡಕ್ಕೆ ಮಣಿದು ನೋಟಿಸ್‌ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ತಿಳಿದು ಬಂದಿದೆ. ಆದರೆ, ಇದುವರೆಗೂ ನನಗೆ ನೋಟಿಸ್‌ ತಲುಪಿಲ್ಲ. ನೋಟಿಸ್‌ಗೆ ಸೂಕ್ತ ಉತ್ತರವನ್ನು ನೀಡಲಾಗುವುದು. ಇದೆಲ್ಲವೂ ನಿಷ್ಠಾವಂತ ಕಾರ್ಯಕರ್ತರಿಗೆ ತಿಳಿಯಲಿದೆ ಎಂದು ತಗ್ಗಹಳ್ಳಿ ವೆಂಕಟೇಶ್‌ ಉದಯವಾಣಿಗೆ ತಿಳಿಸಿದರು.

ಮತಗಳು ಛಿದ್ರ ಆಗುವ ಭೀತಿ : ಪ್ರಸ್ತುತ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಜೆಡಿಎಸ್‌ ಮತಗಳು ಛಿದ್ರವಾಗುವ ಭೀತಿ ಎದುರಾಗಿದೆ. ಒಂದೆಡೆ ತಗ್ಗಹಳ್ಳಿ ವೆಂಕಟೇಶ್‌ ಬಂಡಾಯ ವಾಗಿ ಸ್ಪರ್ಧಿಸಿದರೆ, ಕೊತ್ತತ್ತಿ ಸೇರಿದಂತೆ ಇತರೆ ಹೋಬಳಿಗಳಲ್ಲೂ ಮತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತೂಂದೆಡೆ ಮಾಜಿ ಶಾಸಕ ರಮೇಶ್‌ ಬಾಬು ಜೆಡಿಎಸ್‌ ಕಾರ್ಯಕರ್ತರ ನಡುವೆ ನನಗೆ ಅವಿನಾಭಾವ ಸಂಬಂಧವಿದೆ ಎಂಬ ಹಿನ್ನೆಲೆಯಲ್ಲಿ ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ. ಇದರಿಂದ ಒಂದಷ್ಟು ಜೆಡಿಎಸ್‌ ಮತಗಳು ಕೈತಪ್ಪುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

● ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next