Advertisement

ದಾಂಡೇಲಿ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಕೊಲೆ

11:18 PM Sep 25, 2019 | Lakshmi GovindaRaju |

ಧಾರವಾಡ: ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಬಿಹಾರ ಮೂಲದ ವ್ಯಕ್ತಿ ಶೂಟೌಟ್‌ ಘಟನೆ ಮಾಸುವ ಮುನ್ನವೇ ಒಂದೇ ವಾರದ ಅಂತರದಲ್ಲಿ ಮತ್ತೂಂದು ಶೂಟೌಟ್‌ ನಡೆದಿರುವುದು ಆತಂಕ ಸೃಷ್ಟಿಸಿದೆ. ಕಾರನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ದಾಂಡೇಲಿ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

Advertisement

ದಾಂಡೇಲಿಯ ಶ್ಯಾಮ್‌ಸುಂದರ್‌ ದೇವರಾಜ್‌ (42) ಹತ್ಯೆಯಾದವರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲು ದಾಂಡೇಲಿಯಿಂದ ತಮ್ಮ ಕಾರಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ದಾಂಡೇಲಿಯಿಂದ ಕಾರು ಹಿಂಬಾಲಿಸಿಕೊಂಡೇ ಪಲ್ಸರ್‌ ಬೈಕ್‌ನಲ್ಲಿ ಬಂದ ಮೂವರು, ಸಲಕಿನಕೊಪ್ಪ ಗ್ರಾಮ ದಾಟುತ್ತಿದ್ದಂತೆಯೇ ಬೆಳಗ್ಗೆ 9.30ರ ಸುಮಾರಿಗೆ ಕಾರು ಅಡ್ಡಗಟ್ಟಿದ್ದಾರೆ. ಕಾರು ನಿಲ್ಲಿಸುವಷ್ಟರಲ್ಲಿ ಚಾಲಕನ ಪಕ್ಕ ಕುಳಿತಿದ್ದ ಶ್ಯಾಮ್‌ಸುಂದರ್‌ ಅವರತ್ತ ಗುಂಡು ಹಾರಿಸಿದ್ದಾರೆ.

ಶ್ಯಾಮ್‌ಸುಂದರ್‌ ಎಡಭುಜಕ್ಕೆ ತಾಗಿ ಗುಂಡು ಎದೆ ಪ್ರವೇಶಿಸಿದೆ. ಈ ವೇಳೆ ಭಯಗೊಂಡ ಕಾರು ಚಾಲಕ ಅಬ್ದುಲ್‌, ಕಾರು ಸಮೇತ ರಕ್ತಸಿಕ್ತರಾಗಿದ್ದ ಶ್ಯಾಮ್‌ಸುಂದರ್‌ರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆ ತಂದರು. ಕೆಲ ಹೊತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಶ್ಯಾಮ್‌ಸುಂದರ್‌ ಮೃತಪಟ್ಟಿದ್ದಾರೆ. ಹತ್ಯೆಗೆ ವೈಯಕ್ತಿಕ ವೈಷಮ್ಯವೋ ಅಥವಾ ರಾಜಕೀಯ ವೈರತ್ವವೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next