Advertisement

ಕಾಂಗ್ರೆಸ್‌, ಎಡಪಕ್ಷ ಜತೆ ದೀದಿ ಮೈತ್ರಿ?

12:30 AM Feb 14, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ವೇಳೆ ಬಿಜೆಪಿಯನ್ನು ಎದುರಿಸಲು ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದ್ದೇನೆ ಎಂಬ ಇಂಗಿತವನ್ನು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ನೀಡಿದ್ದಾರೆ. ಹೊಸದಿಲ್ಲಿಯಲ್ಲಿರುವ  ಜಂತರ್‌ ಮಂತರ್‌ನಲ್ಲಿ ಆಪ್‌ ನೇತೃತ್ವದ ಪ್ರತಿಪಕ್ಷಗಳ ರ್ಯಾಲಿಯಲ್ಲಿ ಟಿಎಂಸಿ ನಾಯಕಿ ಮಾತನಾಡಿದರು.  ಮಮತಾ ಸಭೆಗೆ ಬರುವುದಕ್ಕೂ ಮುನ್ನವೇ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ,  ಸಿಪಿಐ ಮುಖಂಡ ಡಿ. ರಾಜಾ  ಸಭೆ ಯಿಂದ ತೆರಳಿದ್ದರು. ಎಎಪಿಯವರಿಗೇ ಅಚ್ಚರಿಯಾಗುವಂತೆ ಈ ಸಭೆಗೆ ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಕೂಡ ಹಾಜರಾಗಿದ್ದರು. ಮೋದಿ ಪ್ರಧಾನಿಯಾಗಿ ಮುಂದು ವರಿದರೆ ದೇಶ ನಾಶವಾಗುತ್ತದೆ. ದೇಶವನ್ನು ರಕ್ಷಿಸಲು ಮೋದಿ ವಿರುದ್ಧ ಮತಹಾಕಬೇಕು ಎಂದು ಮಮತಾ ಈ ವೇಳೆ ಹೇಳಿದ್ದಾರೆ. ಡೆಮಾಕ್ರಸಿ ಎಂಬುದು ನಮೋಕ್ರಸಿಯಾಗಿದೆ ಎಂದು ಮಮತಾ ಟೀಕಿಸಿದ್ದಾರೆ.

Advertisement

ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ?: ಬಿಜೆಪಿ ಜೊತೆಗೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತಮಿಳುನಾಡು ಉಪಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಸುಳಿವು ನೀಡಿದ್ದಾರೆ. ಕಾಂಗ್ರೆಸ್‌ ಜೊತೆಗೆ ಡಿಎಂಕೆ ಒಪ್ಪಂದ ಮಾಡಿಕೊಂಡಿದ್ದು, ಎಐಎಡಿಎಂಕೆ ಸ್ವತಂತ್ರವಾಗಿ ಚುನಾವಣೆ ಕಣಕ್ಕೆ ಇಳಿಯುವುದಿಲ್ಲ ಎಂದು ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದಾರೆ. ಮೂಲಗಳ ಪ್ರಕಾರ ಎಐಎಡಿಎಂಕೆ ಮತ್ತು ಬಿಜೆಪಿ ಚರ್ಚೆ ನಡೆಸಿದ್ದು, ಮಾತುಕತೆ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next