ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಶಾನ್ಯ ರಾಜ್ಯವನ್ನು ಬೆಚ್ಚಿಬೀಳಿಸಿದ ಹಿಂಸಾಚಾರದ ಬಗ್ಗೆ ಕೇಂದ್ರ ಮತ್ತು ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಬಂಗಾಳದಲ್ಲಿ ಏನಾದರೂ ಸಂಭವಿಸಿದರೆ ಬಂಗಾಳ ಸರ್ಕಾರವನ್ನು ದೂಷಿಸಲು ನೂರಾರು ಕೇಂದ್ರ ತಂಡಗಳನ್ನು ಕಳುಹಿಸಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ಬಂಗಾಳದಲ್ಲಿ ಏನಾದರೂ ಸಂಭವಿಸಿದಾಗ, ನಮ್ಮ ಮಾನಹಾನಿ ಮಾಡಲು ನೂರಾರು ಕೇಂದ್ರ ತಂಡಗಳನ್ನು ಇಲ್ಲಿಗೆ ಕಳುಹಿಸಲಾಗುತ್ತದೆ. ಆದರೆ ಮಣಿಪುರ ಬಿಜೆಪಿ ಆಡಳಿತದ ರಾಜ್ಯವಾಗಿರುವುದರಿಂದ ಏನೂ ಮಾಡಲಾಗುತ್ತಿಲ್ಲ. ಆದರೆ ಜನರು ಅಂಕಿಅಂಶಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
“ಕಂಡಲ್ಲಿ ಗುಂಡಿಕ್ಕುವ ಆದೇಶ ಮತ್ತು ಸಾಮಾನ್ಯ ಹಿಂಸಾಚಾರದಿಂದಾಗಿ ಎಷ್ಟು ಜನರು ಸಾವನ್ನಪ್ಪಿದ್ದಾರೆಂದು ನಮಗೆ ತಿಳಿದಿಲ್ಲ. ರಾಜ್ಯ ಸರಕಾರ ಅಂಕಿ ಅಂಶಗಳನ್ನು ಹೇಳುತ್ತಿಲ್ಲ. ಕೆಲವು ಸಮಯದ ಹಿಂದೆ ಅಲ್ಲಿ 60-70 ಸಾವುಗಳಾಗಿದೆ ಎಂದು ತಿಳಿದುಕೊಂಡೆ” ಎಂದು ಮಮತಾ ಹೇಳಿದರು.
ಕಳೆದ ವಾರ ಮೈತೈ ಸಮುದಾಯದ ಸದಸ್ಯರು ಮತ್ತು ಬುಡಕಟ್ಟು ಜನಾಂಗದವರ ನಡುವೆ ಘರ್ಷಣೆ ನಡೆದ ನಂತರ ಮಣಿಪುರದಲ್ಲಿ ಅಸ್ಥಿರ ಪರಿಸ್ಥಿತಿಯ ಬಗ್ಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.