Advertisement

ಮಲ್ಲಿಕಾರ್ಜುನ ಖರ್ಗೆಗೆ ಪಟ್ಟ; ಹಳಬರಿಗೆ ಇಷ್ಟ!

02:35 PM Oct 20, 2022 | Team Udayavani |

ಬಾಗಲಕೋಟೆ: ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರಾಗಿ ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದೆ ತಡ, ಇತ್ತ ಜಿಲ್ಲೆಯ ಹಳೆಯ ಕಾಂಗ್ರೆಸ್‌ ನಾಯಕರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ.

Advertisement

ಹೌದು, ಜಿಲ್ಲೆಯ ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಇರುವುದು ಗುಟ್ಟಾಗಿ ಉಳಿದಿಲ್ಲ. ಈಚಿನ ದಿನಗಳಲ್ಲಿ ಒಂದು ಗುಂಪಿನ ನಾಯಕರ ಅಣಿಯಂತೆ ನಡೆಯುವ ಪರಿಸ್ಥಿತಿ ಇತ್ತು. ಹೀಗಾಗಿ ಹಲವು ಹಳೆಯ ನಾಯಕರೇ, ಬೇಸರಗೊಂಡು ಪಕ್ಷದ ಚಟುವಟಿಕೆಗಳಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಭಾಗವಹಿಸುತ್ತಿದ್ದರು ಎಂಬುದು ಪಕ್ಷದ ಪ್ರಮುಖರಲ್ಲಿ ನಡೆಯುತ್ತಿದ್ದ ಚರ್ಚೆ.

ಕಾರ್ಯಕರ್ತರ ಪಡೆ: ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಗೃಹ, ಸಹಕಾರ, ಲೋಕೋಪಯೋಗಿ ಸಹಿತ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಮುಖ್ಯವಾಗಿ ಜಿಲ್ಲೆಗೆ ಹತ್ತಿರವಾಗುವ ಕಲಬುರಗಿ ಜಿಲ್ಲೆಯವರು. ಜಿಲ್ಲೆಯ ಮಾಜಿ ಸಚಿವರಾದ ಆರ್‌.ಬಿ. ತಿಮ್ಮಾಪುರ, ಬಿ.ಬಿ. ಚಿಮ್ಮನಕಟ್ಟಿ, ದಿ.ಸಿದ್ದು ನ್ಯಾಮಗೌಡ ಹಾಗೂ ದಿ.ಎಸ್‌.ಆರ್‌. ಕಾಶಪ್ಪನವರ ಅವರ ಕುಟುಂಬದೊಂದಿಗೆ ಇಂದಿಗೂ ನಿಕಟ ಸಂಪರ್ಕ, ರಾಜಕೀಯ ಸಂಬಂಧ ಹೊಂದಿದವರು. ಇವರಲ್ಲದೇ 1995ರಿಂದ 2008ರವರೆಗೂ ಅವರದೇ ಗರಡಿಯಲ್ಲಿ ಬೆಳೆದ ಹಲವು ಕಾರ್ಯಕರ್ತರ ಪಡೆಯೂ ಜಿಲ್ಲೆಯಲ್ಲಿದೆ.

ಆದರೆ, ಪಕ್ಷದಲ್ಲಿನ ಬದಲಾದ ರಾಜಕೀಯ ನಾಯಕತ್ವ, ಖರ್ಗೆ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೋದ ಬಳಿಕ ಅವರ ಗರಡಿಯಲ್ಲಿ ಬೆಳೆದ ಹಲವು ಕಾರ್ಯಕರ್ತರೂ, ಕೊಂಚ ಉತ್ಸಾಹ ಕಡಿಮೆ ಮಾಡಿಕೊಂಡರು. ರಾಜ್ಯ, ಜಿಲ್ಲೆಯ ರಾಜಕಾರಣದಲ್ಲಿ ನಮ್ಮದೇನೂ ನಡೆಯುತ್ತಿಲ್ಲ. ನಮ್ಮಂತಹ ಹಳೆಯ ಕಾರ್ಯಕರ್ತರ ಮಾತೆಗೆ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೆ, ಇದೀಗ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಅವರೆಲ್ಲ ಮತ್ತೆ ಅವರೆಲ್ಲ ಮುನ್ನೆಲೆಗೆ ಬರಲು ಮುಂದಾಗಿದ್ದಾರೆ.

ಗುಂಪುಗಾರಿಕೆಗೆ ಕೊನೆ ಬೀಳುತ್ತಾ?: ಜಿಲ್ಲೆಯ ಕಾಂಗ್ರೆಸ್‌ ನಾಯಕರಲ್ಲೇ ಗುಂಪುಗಾರಿಕೆ ಇದೆ. ಅದು ಕಾರ್ಯಕರ್ತರಿಗೂ ವಿಸ್ತರಿಸುವುದು ಸಾಮಾನ್ಯ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್‌ ನಾಯಕರು, ಒಟ್ಟಾರೆ ಸಿದ್ದರಾಮಯ್ಯ ಅವರ ನಾಯಕತ್ವ ಒಪ್ಪಿಕೊಂಡರೂ ತಮ್ಮ ಕೆಲಸ-ಕಾರ್ಯಗಳಾಗುವುದರಲ್ಲಿ ಕೊಂಚ ಹಿನ್ನಡೆಯಾಗುತ್ತದೆ ಎಂಬ ಮಾತು ಕೆಲವರಿಂದ ಕೇಳಿ ಬಂದಿತ್ತು. ಅದರಲ್ಲೂ ಜಿಲ್ಲೆಯ ಹಿರಿಯ ಕಾಂಗ್ರೆಸ್‌ ನಾಯಕರೂ ಆಗಿರುವ ಮಾಜಿ ಸಚಿವರಾದ ಎಸ್‌.ಆರ್‌. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಅವರೊಂದಿಗೆ ಕೊಂಚ ಬೇಸರವೇಗೊಂಡಿದ್ದಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿತ್ತು. ಈಗ ಖರ್ಗೆ, ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಅವರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ ಎನ್ನಲಾಗುತ್ತಿದೆ.

Advertisement

ಮುಂಚೂಣಿಗೆ ಬರಲು ಹವಣಿಕೆ: ಖರ್ಗೆ ಅವರು ಅಧ್ಯಕ್ಷರಾದ ಬಳಿಕ, ಇನ್ಮುಂದೆ ನಮಗೂ ಒಳ್ಳೆಯ ಕಾಲ ಬಂತು ಎಂದು ಖುಷಿಪಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಹಲವರು, ಈ ವರೆಗೆ ಯಾರ ಮೇಲೆ ಒತ್ತಡ ತರುತ್ತಿದ್ದರೋ, ಈಗ ವರಸೆ ಬದಲಿಸುವ ಸಾಧ್ಯತೆಗಳೇ ಹೆಚ್ಚು. ಅದರಲ್ಲೂ, ನಾನು ಕ್ಷೇತ್ರ ಬಿಟ್ಟುಕೊಟ್ಟು ಸಂಕಷ್ಟ ಎದುರಿಸುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಕುಟುಂಬದಲ್ಲಿ ಹೊಸ ಹುರುಪು ಬಂದಿದೆ ಎನ್ನಲಾಗಿದೆ.

ಇನ್ನು ಇನ್ನೋರ್ವ ಮಾಜಿ ಸಚಿವ ಎಸ್‌.ಆರ್‌. ಪಾಟೀಲರು, ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದು, ಸತತ ನಾಲ್ಕು ಬಾರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುತ್ತ ಬಂದರೂ, ಕಳೆದ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾಗಿದ್ದರು. ಈ ಕುರಿತು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿತ್ತು. ಅವರ ಬೆಂಬಲಿಗರು ಬಹಿರಂಗವಾಗಿಯೇ ರಾಜ್ಯ ನಾಯಕರೊಬ್ಬರ ವಿರುದ್ಧ ಹರಿಹಾಯ್ದು ಬೇಸರ ವ್ಯಕ್ತಪಡಿಸಿದ್ದರು. ಎಸ್‌.ಆರ್‌. ಪಾಟೀಲರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕದಿದ್ದರೂ ಆಪ್ತರ ಬಳಿ ಹಲವು ಬಾರಿ ಬೇಸರ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.

ಒಟ್ಟಾರೆ, ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಜಿಲ್ಲೆಯ ಕಾಂಗ್ರೆಸ್‌ ವಲಯದ ಹಳಬರಲ್ಲಿ ಹೊಸ ಹುರುಪು-ಹುಮ್ಮಸ್ಸು ಮರುಕಳಿಸಿದೆ ಎಂಬ ಮಾತು ಹರಿದಾಡುತ್ತಿದೆ. ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next