Advertisement

‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’

04:41 PM Mar 24, 2023 | Team Udayavani |

ನಟ ರಾಜವರ್ಧನ್‌ ಮತ್ತು ನೈನಾ ಗಂಗೂಲಿ ಜೋಡಿಯಾಗಿ ಅಭಿನಯಿಸಿರುವ ರೊಮ್ಯಾಂಟಿಕ್‌, ಕ್ರೈಂ-ಥ್ರಿಲ್ಲರ್‌ ಕಥಾಹಂದರದ”ಪ್ರಣಯಂ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. “ಪಿ2 ಪ್ರೊಡಕ್ಷನ್ಸ್‌’ ಮತ್ತು “ಮಾನ್ಸಿ ವೆಂಚರ್’ ಬ್ಯಾನರಿನಲ್ಲಿ ಪರಮೇಶ್‌ ನಿರ್ಮಿಸಿರುವ “ಪ್ರಣಯಂ’ ಚಿತ್ರಕ್ಕೆ ಎಸ್‌. ದತ್ತಾತ್ರೇಯ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಸದ್ಯ “ಪ್ರಣಯಂ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದ ಮೊದಲ ರೊಮ್ಯಾಂಟಿಕ್‌ ಲಿರಿಕಲ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌, “ಪ್ರಣಯಂ’ ಸಿನಿಮಾದ “ಮಳೆಗಾಲ ಬಂತು ಸನಿಹ…’ ಎಂಬ ಈ ರೊಮ್ಯಾಂಟಿಕ್‌ ಲಿರಿಕಲ್‌ ವಿಡಿಯೋ ಸಾಂಗ್‌ನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮನೋಮೂರ್ತಿ ಸಂಗೀತ ಸಂಯೋಜನೆಯ ಈ ಗೀತೆಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯವಿದ್ದು, ಸೋನು ನಿಗಮ್‌ ಈ ಗೀತೆಗೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ:ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ಇದೇ ವೇಳೆ ಮಾತನಾಡಿದ ನಿರ್ಮಾಪಕ ಪರಮೇಶ್‌, “ಇದೊಂದು ಲವ್‌ ಕಂ ರೊಮ್ಯಾಂಟಿಕ್‌ ಕಥಾಹಂದರದ ಸಿನಿಮಾ. ಸಿನಿಮಾದ ಕಥೆಗೆ ತಕ್ಕಂತೆ ಮೆಲೋಡಿ ಹಾಡುಗಳನ್ನು ಸಂಗೀತ ನಿರ್ದೇಶಕ ಮನೋಮೂರ್ತಿ ಸಂಯೋಜಿಸಿದ್ದಾರೆ. ಮಳೆ ಮತ್ತು ಪ್ರೀತಿಯ ಸುತ್ತ ಈ ಮೆಲೋಡಿ ಗೀತೆ ಮೂಡಿಬಂದಿದೆ. ಕನ್ನಡ ಸಿನಿಪ್ರಿಯರಿಗೆ ಖಂಡಿತವಾಗಿಯೂ ಈ ಗೀತೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಇನ್ನು ಈ ಗೀತೆಯ ಬಗ್ಗೆ ಮಾತನಾಡಿದ ಚಿತ್ರ ಸಾಹಿತಿ ಜಯಂತ ಕಾಯ್ಕಿಣಿ, “ಮನೋಮೂರ್ತಿ, ಸೋನು ನಿಗಮ್‌ ಮತ್ತು ನನ್ನ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ “ಮಳೆ’ ಹಾಡು ಇದಾಗಿದೆ. ಹಿಂದಿನ ಹಾಡುಗಳಂತೆ, ಈ ಹಾಡು ಕೂಡ ಕೇಳುಗರ ಮನಮುಟ್ಟಲಿದೆ’ ಎಂದು ಭರವಸೆಯ ಮಾತುಗಳನ್ನಾಡಿದರು.

“ಪ್ರಣಯಂ’ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಉಳಿದಂತೆ ಚಿನ್ಮಯ್‌ ಭಾವಿಕೆರೆ, ಹೃದಯ ಶಿವ ಇತರ ಹಾಡುಗಳಿಗೆ ಸಾಲುಗಳನ್ನು ಬರೆದಿದ್ದಾರೆ.

ಕಾರ್ಯಕ್ರಮದಲ್ಲಿ “ಝೇಂಕಾರ್‌ ಮ್ಯೂಸಿಕ್‌’ನ ಭರತ್‌ ಜೈನ್‌, ಗೀತ ಸಾಹಿತಿ ಚಿನ್ಮಯ್‌ ಭಾವಿಕೆರೆ ಮೊದಲಾದವರು ಹಾಜರಿದ್ದು ಗೀತೆಯ ಬಗ್ಗೆ ಮಾತನಾಡಿದರು. ಸದ್ಯ “ಝೇಂಕಾರ್‌ ಮ್ಯೂಸಿಕ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಈ ಗೀತೆ ಬಿಡುಗಡೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next