Advertisement

ಮಾಳ ಚತುಷ್ಪಥ ರಸ್ತೆ ಕಾಮಗಾರಿ : ಮರ ತೆರವಾಗದೆ ರಸ್ತೆಗುರುಳುವ ಭೀತಿ 

04:26 PM May 26, 2023 | Team Udayavani |

ಕಾರ್ಕಳ: ಕಾರ್ಕಳ-ಬಜಗೋಳಿ- ಮಾಳ ರಾಷ್ಟ್ರೀಯ ಹೆದ್ದಾರಿ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಭಿವೃದ್ಧಿಪಡಿಸಲಿದೆ. ಕಾಮಗಾರಿಯೂ ಆರಂಭಗೊಂಡಿದೆ. ಹೆದ್ದಾರಿ ಬದಿ ಮರ ತೆರವು ಗೊಳಿಸದೆ ಕಾಮಗಾರಿ ನಡೆಸಿದ್ದರ ಇಂದೋ ನಾಳೆಯೋ ಮರಗಳು ಹೆದ್ದಾರಿಗೆ ಉರುಳುವ ಭೀತಿಯಿದ್ದು, ಸವಾರರ ತಲೆ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 15.27 ಕಿ.ಮೀ. ದೂರದ ರಸ್ತೆಯನ್ನು ಪ್ರಸ್ತುತ ಎರಡು ಪಥದಿಂದ ನಾಲ್ಕು ಪಥಗಳಾಗಿ ಪರಿವರ್ತಿಸಲು 177.84 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಚಿಕ್ಕಮಗಳೂರು ಮೂಲದ ಏಜೆನ್ಸಿಯೊಂದು ಗುತ್ತಿಗೆ ಪಡೆದುಕೊಂಡಿದೆ. ರಸ್ತೆ ವಿಸ್ತರಣೆಯ ಕಾಮಗಾರಿ ಯನ್ನು 2 ತಿಂಗಳ ಹಿಂದೆಯೇ ಆರಂಭಿಸಿದೆ. ಕಾಮಗಾರಿ ಆರಂಭಕ್ಕೂ ಮೊದಲು ಹೆದ್ದಾರಿ ಬದಿಯ ರಸ್ತೆಗಳಲ್ಲಿನ ಮರಗಳ ತೆರವು ಕಾರ್ಯ ನಡೆಸಬೇಕಿತ್ತು.

1,634 ಮರಗಳ ತೆರವು
ಕಾರ್ಕಳದಿಂದ ಮಾಳ ಗೇಟ್‌ನ ತನಕ ಹೆದ್ದಾರಿ ಬದಿಯ 1,634 ಮರಗಳನ್ನು ಕಾಮಗಾರಿ ವೇಳೆ ತೆರವುಗೊಳಿಸಲಾಗುತ್ತಿದೆ. ಹೆಚ್ಚಿನ ವ್ಯಾಪ್ತಿ ಕಾರ್ಕಳ ಸಾಮಾಜಿಕ ಅರಣ್ಯ, ಸಗವಲ್ಪ ಭಾಗ ಮೂಡುಬಿದಿರೆ ಅರಣ್ಯ ವ್ಯಾಪ್ತಿಯಲ್ಲಿದೆ. ಮರ ತೆರವು ಸಂಬಂಧ ಅರಣ್ಯ ಇಲಾಖೆ ಜತೆ ಪತ್ರ ವ್ಯವಹಾರ ಪ್ರಗತಿಯಲ್ಲಿದೆ. ಅದು ಪೂರ್ಣವಾಗುವ ಮೊದಲೇ ಕಾಮಗಾರಿ ಆರಂಭಿಸಿದ್ದು ಈಗ ಸಮಸ್ಯೆ ತಂದೊಡ್ಡಿದೆ.

ಬಲ ಕಳೆದುಕೊಂಡ ಮರ
ರಸ್ತೆ ವಿಸ್ತರಣೆ ಸಂದರ್ಭ ಗುಡ್ಡಗಳನ್ನು ಅಗೆಯ ಲಾಗಿದ್ದು, ಈ ಸಂದರ್ಭ ರಸ್ತೆ ಬದಿ ಮರಗಳ ಸುತ್ತಲೂ ಮಣ್ಣು ತೆಗೆಯಲಾಗಿದೆ. ಇದರಿಂದ ಮರಗಳ ಬುಡ ಬಲ ಕಳೆದುಕೊಂಡು ಉರುಳಿ ಬೀಳುವ ಅಪಾಯದಂಚಿಗೆ ತಲುಪಿದೆ.
ಮರದ ಬೇರುಗಳು ತುಂಡಾಗಿ ಹೋಗಿದ್ದು ಕೆಲವೇ ಬೇರುಗಳ ಅಧಾರದಲ್ಲಿ ನಿಂತುಕೊಂಡಿದೆ. ಜೋರು ಗಾಳಿ ಮಳೆ ಬಂದರೆ ರಾಷ್ಟ್ರೀಯ ಹೆದ್ದಾರಿಗೆ ಉರುಳುವ ಭೀತಿಯಿದೆ. ಈ ಭಾಗದಲ್ಲಿ ಗಾಳಿ ಮಳೆಯೂ ಹೆಚ್ಚಾಗಿ ಬೀಸುತ್ತವೆ. ಮರಗಳು ರಸ್ತೆಗೆ, ರಸ್ತೆ ಬದಿಯಿರುವ ವಿದ್ಯುತ್‌ ತಂತಿಗಳ ಮೇಲೆ, ಜನವಸತಿ ಇರುವಲ್ಲಿ ಮನೆಗಳ ಮೇಲೆ ಉರುಳಿ ಬಿದ್ದು ಪ್ರಾಣ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ.

ರಾ.ಹೆ. ಸಂಚಾರವೇ ಕಡಿತ ಸಂಭವ!
ನ್ಯಾಶನಲ್‌ ಹೈವೇ ಶೃಂಗೇರಿ, ಧರ್ಮಸ್ಥಳ ಯಾತ್ರಿಕರಿಗೆ ಅನುಕೂಲವಾಗಿದೆ. ಕುದುರೆಮುಖ, ಶೃಂಗೇರಿ, ಕಳಸ, ಹೊರನಾಡು, ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಸಂಪರ್ಕಿಸಲು ಕರಾವಳಿ ಭಾಗದ ಜನತೆ ಈ ರಸ್ತೆ ಮೂಲಕ ಸುಗಮ ಸಂಚಾರಕ್ಕೆ ಚತುಷ್ಪಥ ರಸ್ತೆ ಅನುಕೂಲ ಮಾಡಿಕೊಡಲಿದೆ. ದಿನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಈ ರಾ.ಹೆ.ಯಲ್ಲಿ ಓಡಾಡುತ್ತಿದ್ದು, ಮರಗಳು ರಸ್ತೆಗೆ ಉರುಳಿದಲ್ಲಿ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆಗಳೇ ಹೆಚ್ಚು.

Advertisement

ಗುತ್ತಿಗೆದಾರ ಅವಸರಿಸಿದ್ದೆ ಕಾರಣ!
ಮರಗಳ ತೆರವುಗೊಳಿಸಿಯೇ ಕೆಲಸ ಆರಂಭಿಸ ಬೇಕಿತ್ತು. ಇಲ್ಲಿ ಹಾಗಾಗಿಲ್ಲ. ಮರ ತೆರವು ಕಡತ ಅರಣ್ಯ ಇಲಾಖೆಗೆ ಸಲ್ಲಿಕೆಯಾಗಿದೆ. ಚುನಾವಣೆ ಬಂದಿದ್ದೂ ತೊಡಕಾಗಿದೆ. ಜಾಸ್ತಿ ಮರ ತೆರವುಗೊಳಿಸುವ ವೇಳೆ ಸಾರ್ವಜನಿಕ ಅಹವಾಲು ಸ್ವೀಕಾರ, ಪ್ರಕಟನೆ, ಟೆಂಡರ್‌ ಇತ್ಯಾದಿ ಪ್ರಕ್ರಿಯೆ ನಡೆಯಬೇಕು. ಇಲಾಖೆ ಗಳ ಮಧ್ಯೆ ಸಮನ್ವಯತೆ ಕೊರತೆಯಿಂದ ಈ ಪ್ರಕ್ರಿಯೆ ಮತ್ತಷ್ಟೂ ವಿಳಂಬವಾಗುವ ಸಾಧ್ಯತೆಯಿದೆ.

1 ಮರ ತೆರವಿಗೆ 10 ಗಿಡ ಬೆಳೆಸಬೇಕು
ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ವಿಸ್ತರಣೆ ವೇಳೆ ಸಾವಿರಾರು ಮರಗಳಿಗೆ ಕೊಡಲಿ ಏಟು ಬೀಳಲಿದೆ. ಅರಣ್ಯ, ಪರಿಸರ ನಾಶವಾಗಲಿದೆ. ಕಾಮಗಾರಿ ವೇಳೆ 1 ಮರ ತೆರವುಗೊಳಿಸುವಾಗ 10 ಸಸಿಗಳನ್ನು ಮರು ನೆಡಬೇಕೆನ್ನುವ ನಿಯಮಾನುಸಾರ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತದೆ. ಸಸಿಯೊಂದಕ್ಕೆ 411 ರೂ. ನಿಗದಿಪಡಿಸುತ್ತದೆ. ಆದರೇ ಕಡಿಯಲು ತೋರುವ ಉತ್ಸಾಹ, ಕಾಳಜಿ ಬಳಿಕ ಸಂರಕ್ಷಣೆಯಲ್ಲಿ ಇರುವುದಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ಅಸಮಾಧಾನವಾಗಿದೆ.

ಹೆದ್ದಾರಿ ಕಾಮಗಾರಿ ವೇಳೆ ತ್ವರಿತ ಅಗತ್ಯಕ್ಕೆ ಅನುಸಾರ ಮರ ತೆರವಿಗೆ ನಿಯಮಾನುಸಾರ ಕ್ರಮಕ್ಕೆ ಸೂಚಿಸಲಾಗಿದೆ. ಅಲ್ಲಿನ ವಿಭಾಗದ ಅರಣ್ಯ ಅಧಿಕಾರಿಯ ವರಿಂದ ಮಾಹಿತಿ ಪಡೆದು ಮಳೆಗಾಲಕ್ಕೂ ಮುನ್ನ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುವುದು.
-ಉದಯ್‌ ನಾಯ್ಕ…,
ಉಪ ಅರಣ್ಯ ಸಂರಕ್ಷಣಾಧಿಕಾರಿ,
ಕುಂದಾಪುರ ಅರಣ್ಯ ವಿಭಾಗ

 

Advertisement

Udayavani is now on Telegram. Click here to join our channel and stay updated with the latest news.

Next