Advertisement

ನಿಮ್ಮ ನಿರ್ಧಾರ ಪರಿಸರ ಸ್ನೇಹಿಯಾಗಿರಲಿ

12:29 PM Sep 11, 2018 | |

ಬೆಂಗಳೂರು: ಗೌರಿ ಗಣೇಶ ಉತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಾವು  ಬರಮಾಡಿಕೊಳ್ಳುವ ಗೌರಿ-ಗಣಪ ಪರಿಸರ ಸ್ನೇಹಿಯಾಗಿರಬೇಕು ಎಂಬ ಎಚ್ಚರಿಕೆ ವಹಿಸಲು ಇದು ಸಕಾಲ. ರಾಸಾಯನಿಕ ಬಣ್ಣ ಬಳಸಿದ ಅಪಾಯಕಾರಿ ಪಿಓಪಿ ಮೂರ್ತಿಗಳು ಪರಿಸರಕ್ಕೆ ಮಾರಕ ಎಂಬುದು ಈಗಾಗಲೇ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮಣ್ಣಿನ ಮೂರ್ತಿಗಳ ಮೂಲಕ ಗೌರಿ-ಗಣಪ ಹಬ್ಬ ಆಚರಣೆಗೆ ಕೈ ಜೋಡಿಸಬೇಕಿದೆ.

Advertisement

ಮಹಾನಗರ ಪಾಲಿಕೆಯೂ ಜಾಗೃತಿ ಜತೆಗೆ ಉಚಿತ ಗೌರಿ-ಗಣಪ ಮೂರ್ತಿಗಳ ವಿತರಣೆ ಮೂಲಕ ಪ್ರೇರಣೆ ನೀಡುತ್ತಿದೆ. ಇದಕ್ಕೆ ಕೆಲವು ಸಂಘ-ಸಂಸ್ಥೆಗಳು, ಸಿನಿಮಾ ನಟ-ನಟಿಯರು, ಜನಪ್ರತಿನಿಧಿಗಳು ಸಹ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ, ಹೀದಿನ ತಪ್ಪು ಪುನರಾವರ್ತನೆಯಾಗದಂತೆ ವಿಷಕಾರಿ ಬಣ್ಣ ಬಳಿದ ಗಣೇಶ ಬೇಡ ಎಂಬ ದೃಢ ಸಂಕಲ್ಪ ತಳೆಯಬೇಕಿದೆ. ಅಷ್ಟೇ ಅಲ್ಲ, ಕೆರೆಗಳಿಗೆ ವಿಸರ್ಜಿಸಿ, ಕಲುಷಿತಗೊಳಿಸುವ ಬದಲು, ಮನೆಗಳಲ್ಲೇ ಬಕೆಟ್‌ಗಳಲ್ಲಿ ಗಣೇಶನ ವಿಸರ್ಜನೆ ಮಾಡಬೇಕು.

ಈ ನಿಟ್ಟಿನಲ್ಲಿ ಗಣೇಶನನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಮಕ್ಕಳು, ಯುವಕರು ಸೇರಿದಂತೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹಾಗಿದ್ದರೆ, ಈ “ಪರಿಸರ ಸ್ನೇಹಿ’ ಗಣಪ ದೊರೆಯುವುದು ಎಲ್ಲಿ? ವಿಸರ್ಜನೆ ಮಾಡುವುದು ಹೇಗೆ? ಈ ಮಾದರಿ ಗಣೇಶನ ಖರೀದಿಗಾಗಿಯೇ ನಿರ್ದಿಷ್ಟ ಸಂಸ್ಥೆಗಳಿವೆಯೇ? ಎಂಬ ಹಲವು ಗೊಂದಲಗಳು ಜನರಲ್ಲಿವೆ. ಇದಕ್ಕಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ.  

ಉಚಿತ ವಿತರಣೆ: ಈ ನಿಟ್ಟಿನಲ್ಲಿ ಸ್ವತಃ ಬಿಬಿಎಂಪಿ ಮುಂಚೂಣಿಯಲ್ಲಿದೆ. ಉಚಿತವಾಗಿ ಮಣ್ಣಿನ ಗಣೇಶನನ್ನು ವಿತರಿಸಲಾಗುತ್ತಿದ್ದು, ಭಾನುವಾರ ನಗರದ ವಿವಿಧೆಡೆ 150ಕ್ಕೂ ಅಧಿಕ ಗಣೇಶನ ವಿಗ್ರಹಗಳನ್ನು ಹಂಚಲಾಗಿದೆ. ಮಂಗಳವಾರ ಕೂಡ ಉಚಿತ ಮೂರ್ತಿಗಳ ವಿತರಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ. 

ಅದೇ ರೀತಿ, ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಸೌಮ್ಯಾ ರೆಡ್ಡಿ, ಜೆ.ಪಿ. ನಗರದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ಮಂಗಳವಾರ ಮೂರು ಸಾವಿರ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳನ್ನು ವಿತರಿಸಲಿದ್ದಾರೆ. ಇದರೊಂದಿಗೆ ನಟ ಪ್ರಜ್ವಲ್‌ ದೇವರಾಜ್‌ ಸಂಜಯನಗರದ ರಾಧಾಕೃಷ್ಣ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. 

Advertisement

ಮಣ್ಣಿನ ಗಣಪತಿ ಖರೀದಿಸಿ; ಅದೃಷ್ಟ ಪರೀಕ್ಷಿಸಿ: ಸಮರ್ಪಣ ಟ್ರಸ್ಟ್‌ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಮಣ್ಣಿನ ಗಣಪತಿ ಪ್ರತಿಷ್ಠಾಪಿಸುವವರಿಗೆ ಬೆಳ್ಳಿನಾಣ್ಯ ಕೂಡ ನೀಡಲಿದೆ. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ- ಟ್ರಸ್ಟ್‌ನಿಂದ ಮಣ್ಣಿನ ಗಣಪತಿ ಖರೀದಿಸಿ, ಅದೃಷ್ಟ ಪರೀಕ್ಷೆಗೆ ನಿಲ್ಲಬೇಕು. 

ಹೌದು, ಪರಿಸರ ಸ್ನೇಹಿ ಗಣೇಶ ಉತ್ಸವವನ್ನು ಪ್ರೋತ್ಸಾಹಿಸಲು ಟ್ರಸ್ಟ್‌ ಈ ಐಡಿಯಾ ಮಾಡಿದೆ. ಇದಕ್ಕಾಗಿ ಹತ್ತು ಸಾವಿರ ಮಣ್ಣಿನ ಮೂರ್ತಿಗಳನ್ನು ತಯಾರು ಮಾಡಿದ್ದು, ಈ ಪೈಕಿ ಸುಮಾರು ಮೂರು ಸಾವಿರ ಗಣೇಶ ಮೂರ್ತಿಗಳಲ್ಲಿ ಬೆಳ್ಳಿ ನಾಣ್ಯಗಳನ್ನು ಇರಿಸಿದೆ. ಈ ಮೂರ್ತಿಗಳನ್ನು ಖರೀದಿಸಿ ಮನೆಗಳಲ್ಲಿಯೇ ವಿಸರ್ಜನೆಯಾಗುವಂತೆ ಮಾಡುವುದು ಟ್ರಸ್ಟ್‌ನ ಉದ್ದೇಶ. 

30 ನಿಮಿಷದಲ್ಲಿ ಕರಗುತ್ತೆ: ಸಂಪೂರ್ಣ ಮಣ್ಣು ಹಾಗೂ ಸಗಣಿಯಿಂದ ತಯಾರಾದ ಈ ಮೂರ್ತಿ 30 ನಿಮಿಷದಲ್ಲಿ ಕರಗುತ್ತದೆ. ಚಿಕ್ಕಮೂರ್ತಿಯಾಗಿರುವುದರಿಂದ ಬಕೆಟ್‌ನಲ್ಲೇ ವಿಸರ್ಜಿಸಬಹುದು. ಟ್ರಸ್ಟ್‌ನ ಕಚೇರಿ ರಾಜಾಜಿನಗರದ ಮೊದಲನೇ ಮುಖ್ಯ ರಸ್ತೆ ಸೇರಿದಂತೆ ಆಯ್ದ ಕಡೆ ಈ ಮೂರ್ತಿಗಳನ್ನು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಬಾರಿ ಪರಿಸರ ಸ್ನೇಹಿ ಗಣಪನನ್ನು ಪರಿಸರ ಸ್ನೇಹಿ ವಾಹನದಲ್ಲಿಯೇ ಮನೆ ಮನೆಗೆ ತಲುಪಿಸಲಾಗುತ್ತಿದೆ. ಟ್ರಸ್ಟ್‌ ಬಳಿ ಅನೇಕರು ಈಗಾಗಲೇ ಮೂರ್ತಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ಹಿರಿಯರು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮೂರ್ತಿ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದವರಿಗೆ ಖುದ್ದಾಗಿ ಮೂರ್ತಿಯನ್ನು ಮನೆಗೆ ತಲುಪಿಸಲಾಗುತ್ತಿದೆ. ಜತೆಗೆ ಶಾಲೆ ಕಾಲೇಜುಗಳಿಗೂ ತಲುಪಿಸಲಾಗುತ್ತಿದೆ. ಈ ವಿತರಣಾ ಕಾರ್ಯಕ್ಕೆ ಎಲೆಕ್ಟ್ರಿಕಲ್‌ ವಾಹನ ಬಳಸಲಾಗುತ್ತಿದೆ. 

ಮಾಲ್‌ಗ‌ಳಲ್ಲೂ ಮಣ್ಣಿನ ಗಣೇಶ: ಬಸವನಗುಡಿ, ಜಯನಗರ, ಜೆ.ಪಿ. ನಗರ, ಮಲ್ಲೇಶ್ವರ, ನ್ಯೂ ಬಿಇಎಲ್‌ ರಸ್ತೆ, ಗೋಕುಲ ಎಕ್ಸ್‌ಟೆನÒನ್‌, ಬನಶಂಕರಿ, ಬನ್ನೇರುಘಟ್ಟ ರಸ್ತೆಗಳಲ್ಲಿ, ಬಿಗ್‌ ಬಜಾರ್‌, ಮಾಲ್‌ಗ‌ಳಲ್ಲೂ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ದೊರೆಯುತ್ತವೆ. ಹಲವು ಸ್ವಯಂ ಸೇವಾ ಸಂಸ್ಥೆಗಳು “ಪರಿಸರ ಸ್ನೇಹಿ’ ಗಣಪನ ತಯಾರಿ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿವೆ. 

ಪರಿಸರ ಸ್ನೇಹಿ ಬೀದಿ ಗಣಪ ಅಸಾಧ್ಯ?: ಪ್ರಮುಖ ಬೀದಿಗಳಲ್ಲಿ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಲು ತಾಂತ್ರಿಕ ಸಮಸ್ಯೆ ಇದೆ. ಮುಖ್ಯವಾಗಿ ಈ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಆಕರ್ಷಿಸುವುದೇ ಪ್ರತಿಷ್ಠಾಪನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳು ಮುಂದಿಡುವ ಗಾತ್ರ, ವಿನ್ಯಾಸಗಳಂತೆ ಗಣಪನನ್ನು ಕೇವಲ ಮಣ್ಣಿನಲ್ಲಿ ತಯಾರಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಬೀದಿಗಳಲ್ಲಿಡುವ ಗಣಪನ ಗಾತ್ರ ಚಿಕ್ಕದಾಗಬೇಕು ಅಥವಾ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣಪನನ್ನೇ ಪ್ರತಿಷ್ಠಾಪಿಸಬೇಕು. ಈ ನಿಟ್ಟಿನಲ್ಲಿ ಜನರ ಮನಃಪರಿವರ್ತನೆಯೊಂದೇ ನಮಗಿರುವ ಮಾರ್ಗ. ಈ ದಿಸೆಯಲ್ಲಿ ಪ್ರಯತ್ನ ನಡೆದಿದೆ. ಇದು ಸಾಧ್ಯವೂ ಆಗಲಿದೆ.

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next