Advertisement

2030ಕ್ಕೆ ರಾಜ್ಯ ಎಚ್ಐವಿ ಮುಕ್ತವಾಗಲು ಶ್ರಮಿಸಿ: ಸಚಿವ ಡಾ.ಕೆ.ಸುಧಾಕರ್ ಕರೆ

02:46 PM Dec 01, 2022 | Team Udayavani |

ಚಿಕ್ಕಬಳ್ಳಾಪುರ: ಇಡೀ ದೇಶದಲ್ಲಿಯೇ ಏಡ್ಸ್ ಸೋಂಕು ನಿಯಂತ್ರಣಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, 2030ರ ವೇಳೆಗೆ ರಾಜ್ಯ ಎಚ್ಐವಿ ಮುಕ್ತ ಕರ್ನಾಟಕವಾಗಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.

Advertisement

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಡ್ಸ್ ತಡೆಗಟ್ಟುವಿಕೆಗಾಗಿ ಓಂಬಡ್ಸಮನ್ ನೇಮಸಿದ ಎರಡನೇ ರಾಜ್ಯ ಕರ್ನಾಟಕವಾಗಿದ್ದು, ಸಂಪೂರ್ಣ ಏಡ್ಸ್ ಮುಕ್ತ ರಾಜ್ಯವಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಸೋಂಕಿತರನ್ನು ಕಳಂಕದಿಂದ ನೋಡುವುದು ಶಿಕ್ಷಾರ್ಹ

ರಾಜ್ಯದಲ್ಲಿ ಎಚ್ಐವಿ ಸೋಂಕಿತರನ್ನು ತಾರತಮ್ಯದಿಂದ ನೋಡುವುದನ್ನು ತಪ್ಪಿಸಲು ಮತ್ತು ಸೋಂಕು ನಿಯಂತ್ರಣಕ್ಕಾಗಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಸಚಿವರು, ಸೋಂಕಿತರನ್ನು ಕಳಂಕ ಅಥವಾ ತಾರತಮ್ಯದಿಂದ ನೋಡುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದೆ
ಎಂದರು.

ಸೋಂಕಿತರನ್ನು ತಾರತಮ್ಯದಿಂದ ನೋಡಿದರೆ ಎರಡು ತಿಂಗಳಿಂದ, ಎರಡು ವರ್ಷದ ವರೆಗೆ ಸಜೆ ಅಥವಾ ಎರಡು ಲಕ್ಷದವರೆಗೂ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇದ್ದು, ಈ ಎಲ್ಲ ಕ್ರಮಗಳಿಂದಾಗಿ ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಅಲ್ಲದೆ ಸೋಂಕಿನ ಬಗ್ಗೆ ಅರಿವು ಕಾರ್ಯಕ್ರಮಗಳು ಹೆಚ್ಚಾಗಿರುವುದರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇದೇ ರೀತಿಯಲ್ಲಿ ಮುಂದುವರಿಯದಿದ್ದರೆ ಮತ್ತೆ ಹೆಚ್ಚಾಗುವ ಆತಂಕ ಇದೆ ಎಂದು ಹೇಳಿದರು.

Advertisement

ಸೋಂಕಿನ ಬಗ್ಗೆ ಉದಾಸೀನ ಮಾಡುವ ಕಾಯಿಲೆ ಇದಲ್ಲ, ನಿಯಂತ್ರಣಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು, ರಾಜ್ಯದಲ್ಲಿ ಸೋಂಕನ್ನು ಶೂನ್ಯಕ್ಕೆ ತರುವ ಪ್ರಯತ್ನ ಮುಂದುವರಿಯಬೇಕು 2030ರ ಒಳಗೆ ಸೋಂಕನ್ನು ರಾಜ್ಯದಿಂದ ಓಡಿಸುವ ಕೆಲಸವಾಗಬೇಕು ಎಂದು ಅವರು ಸಲಹೆ ನೀಡಿದರು.

ಸಮಾನಗೊಳಿಸುವುದು ಈ ವರ್ಷದ ಘೋಷವಾಕ್ಯ

ಸೋಂಕಿತರನ್ನು ಯಾವುದೇ ತಾರತಮ್ಯದಿಂದ ನೋಡದೆ ಸಮಾನಗೊಳಿಸುವುದು ಈ ವರ್ಷದ ಘೋಷವಾಕ್ಯವಾಗಿದೆ. ಅಸಮಾನತೆ ಪರಿಹರಿಸೋಣ, ಏಡ್ಸ್ ಕೊನೆಗಾಣಿಸೋಣ ಎಂದು ಪ್ರಚುರ ಪಡಿಸಲಾಗುತ್ತಿದೆ. ಎಚ್ಐವಿಯೊಂದಿಗೆ ಬದುಕುತ್ತಿರುವವರಿಗೆ ಬೆಂಬಲ ಸೂಚಿಸುವ ದಿನ ಇದು, ಅದೇ ರೀತಿಯಲ್ಲಿ ಎಚ್ಐವಿಯಿಂದ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ದಿನವೂ ಆಗಿದೆ ಎಂದು ಸಚಿವರು ಹೇಳಿದರು.

1981ರಲ್ಲಿ ಎಚ್ಐವಿ ಮೊದಲ ಸೋಂಕು ಪತ್ತೆಯಾಗಿಯಿತು. ಭಾರತದಲ್ಲಿ 1986ರಲ್ಲಿ ಪತ್ತೆಯಾದರೆ, ರಾಜ್ಯದಲ್ಲಿ 1987 ರಲ್ಲಿ ಪತ್ತೆಯಾಗಿದೆ. ಎಚ್ಐವಿಗೆ ಈ ಹಿಂದೆ ನಿಖರ ಚಿಕಿತ್ಸೆ ಇರಲಿಲ್ಲ. ಇದರಿಂದ ಎಚ್ಐವಿ ಸೋಂಕಿತರಿಗೆ ಸಾಮಾಜಿಕ ಬಹಿಷ್ಕಾರದಂತಹ ಪರಿಸ್ಥಿತಿ ಇತ್ತು. ಈ ಅಸಮಾನತೆ ಹೋಗಬೇಕು, 30 ವರ್ಷಕ್ಕೂ ಹೆಚ್ಚು ಕಾಲದಿಂದ ವೈದ್ಯಕೀಯ ವ್ಯವಸ್ಥೆಯಲ್ಲಿ ಎಚ್ಐವಿ ಸೋಂಕಿತರು ದೀರ್ಘ ಕಾಲದವರೆಗೂ ಬದುಕಲು ವೈದ್ಯಕೀಯ ರಂಗ ಮುಂದುವರಿದಿದೆ. ಕೆಲವರು ಎರಡು ದಶಕಗಳಿಂದ ಸಹಜವಾಗಿ ಬದುಕುತ್ತಿರುವುದೇ ಇಧಕ್ಕೆ ನಿದರ್ಶನವಾಗಿದೆ ಎಂದರು.

ಸೋಂಕಿತರಿಗೆ ಅರಿವು ಮೂಡಿಸಿ

ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುವ ಕಾಯಿಲೆಗಳಲ್ಲಿ ಇದೂ ಒಂದು, ಯಾವ ವೃತ್ತಿಯಲ್ಲಿ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದ್ದಾರೆ ಎಂಬ ಬಗ್ಗೆ ಸಂಶೋಧನೆ ನಡೆದಿದ್ದು, ಇದರಂತೆ ಹೆಚ್ಚು ದಿನಗಳ ಕಾಲ ಮನೆಯಿಂದ ದೂರ ಇರುವವರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಟ್ರಕ್ ಚಾಲಕರು ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದವರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಂಡಿದೆ ಎಂದು ವಿವರಿಸಿದರು.
ಸೋಂಕಿನ ತಡೆಯುವಿಕೆ ಬಗ್ಗೆ ಅರಿವು ಮೂಡಿಸಲು ತೀವ್ರ ಶ್ರಮಿಸಲಾಗುತ್ತಿದೆ, 7 ಜಿಲ್ಲೆಗಳಲ್ಲಿ ಈ ಸೋಂಕು ಹೆಚ್ಚಿದೆ. ರಾಜ್ಯದಲ್ಲಿ ಎಚ್ಐವಿ ಸೋಂಕು ಹರಡುವುದು ಮತ್ತು ಇದರಿಂದ ಸಾವು ಎರಡನ್ನೂ ಶೂನ್ಯಕ್ಕೆ ತರಲು ಶ್ರಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ಸೋಂಕು ಹರಡಿದ ವ್ಯಕ್ತಿಯ ವಿರುದ್ಧ ತಾರತಮ್ಯವನ್ನು ಶೂನ್ಯಕ್ಕೆ ತರಲು ಶ್ರಮಿಸಲಾಗುತ್ತಿದೆ. ರಾಜ್ಯದಲ್ಲಿ 3.73 ಲಕ್ಷ ಮಂದಿ ಸೋಂಕಿತರಿದ್ದಾರೆ, ಇವರಲ್ಲಿ 1.76 ಲಕ್ಷ ಮಂದಿ ಸ್ವಷ್ಟ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಹೊರ ರಾಜ್ಯಗಳವರಾಗಿ ಹೋಗಿರುವುದು ಮತ್ತು ಮೃತಪಟ್ಟಿರುವವರೂ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಇಲಾಖೆಯ ನಿರ್ದೇಶಕಿ ಇಂದುಮತಿ, ಎನ್ ಎಚ್ ಎಂ ನಿರ್ದೇಶಕಿ ಅರುಂಧತಿ ಚಂದ್ರಶೇಖರ್, ಜಿಪಂ ಸಿಇಒ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ನಾಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಹಾಸ್ಯ ಕಲಾವಿದ ಪ್ರಾಣೇಶ್, ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next