Advertisement

ಮಕ್ಕಳನ್ನು ಸಮಾಜದ ಆಸ್ತಿಯಾಗಿಸಿ: ಸತೀಶ

04:17 PM Sep 25, 2022 | Team Udayavani |

ಗೋಕಾಕ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಶನಿವಾರ ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಲ್ಲಾ ಸಮುದಾಯದ ಮಕ್ಕಳು ಉತ್ತಮ ಸಾಧಕರಾಗುತ್ತಿದ್ದು, ಅವರ ಮುಂದಿನ ಭವಿಷ್ಯದ ಚಿಂತನೆ ಆಗಬೇಕು. ಸಮಾಜದ ಮುಖಂಡರು, ಉನ್ನತ ಹುದ್ದೆಯಲ್ಲಿರುವವರು ಅವರ ಭವಿಷ್ಯಕ್ಕೆ ಸಹಕಾರ ನೀಡಬೇಕು. ಸ್ವಾಮೀಜಿ ಅವರ ಹೋರಾಟದಿಂದ ಇಂದು ಸಮಾಜ ಜಾಗೃತವಾಗಿ ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿದೆ. ಸಮಾಜ ಬಾಂಧವರು ಸಂಘಟಿತರಾಗಿ ಅವರನ್ನು ಬೆಂಬಲಿಸಬೇಕು. ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಪ್ರಯತ್ನಶೀಲರಾಗಿ ಅದರೊಂದಿಗೆ ಕೃಷಿ ಹಾಗೂ ಉದ್ಯೋಗಗಳಿಗೂ ಹೆಚ್ಚಿನ ಮಹತ್ವ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು.

ಇತಿಹಾಸ ಬಲ್ಲವರು ಇತಿಹಾಸ ನಿರ್ಮಿಸುತ್ತಾರೆ. ಆ ನಿಟ್ಟಿನಲ್ಲಿ ಎಲ್ಲರೂ ಇತಿಹಾಸ ತಿಳಿದುಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಎಲ್ಲಾ ಸಮಾಜದವರಿಗೆ ಮೀಸಲಾತಿ ಒಂದು ದೊಡ್ಡ ಗೊಂದಲ ಆಗಿಬಿಟ್ಟಿದೆ. ಡಾ| ಅಂಬೇಡ್ಕರ್‌ ಅವರು ಮೀಸಲಾತಿಯನ್ನು ಕೇವಲ ಹತ್ತು ವರ್ಷಕ್ಕೆ ಅಷ್ಟೇ ಮಾಡಿದ್ದರು. ಆದರೆ ಅದು ಇನ್ನೂವರೆಗೆ ನಡೆದಿದೆ. ಅಂಬೇಡ್ಕರ್‌ ಅವರನ್ನು ದೂರವಿಟ್ಟವರೇ ಇಂದು ಅಂಬೇಡ್ಕರ್‌ ಭಾವಚಿತ್ರ ಇಟ್ಟು ಹೋರಾಟ ಮಾಡುತ್ತಿದ್ದಾರೆ. ಅಂಬೇಡ್ಕರ್‌ ಅವರ ತತ್ವಗಳನ್ನು ಬಿಟ್ಟರೆ ಏನೂ ಸಾಧಿ ಸಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ ಉಪ್ಪಾರ, ರಾಜ್ಯದಲ್ಲಿ ಒಟ್ಟು 36 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದ ಪ್ರಾಬಲ್ಯವಿದೆ. ಬೆಳಗಾವಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಸಮಾಜದ ಮತಗಳು ನಿರ್ಣಾಯಕವಾಗಿವೆ. ಬರುವ ಚುನಾವಣೆಯಲ್ಲಿ ಕನಿಷ್ಟ 4 ರಿಂದ 5 ಕ್ಷೇತ್ರಗಳಲ್ಲಿಯಾದರೂ ಗೆಲ್ಲಲೇಬೇಕು ಎನ್ನುವ ಹಠದಿಂದ ಎಲ್ಲ ಕಡೆ ಸಂಘಟನೆ ಮಾಡುತ್ತಿದ್ದೇವೆ. ಉಳಿದ ಕ್ಷೇತ್ರಗಳಲ್ಲಿ ನಾವು ಗೆಲ್ಲದಿದ್ದರೂ ಅಲ್ಲಿಯ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಹೊಂದಿದ್ದೇವೆ. ಪೂಜ್ಯರ ನೇತೃತ್ವದಲ್ಲಿ ನಾವೆಲ್ಲ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

Advertisement

ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ| ಪುರುಷೋತ್ತಮಾನಂದ ಪುರಿ ಸ್ವಾಮಿಗಳು ಆಶೀರ್ವಚನ ನೀಡಿ, ಸಾಧನೆ ಸಾಧಕರ ಸ್ವತ್ತು, ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ವಿದ್ಯಾರ್ಥಿಗಳು ಭಗೀರಥ ಮಹರ್ಷಿಗಳ ಪ್ರಯತ್ನದಂತೆ ತಾವೂ ಪ್ರಯತ್ನಶೀಲರಾಗಿ ಸಾಧನೆ ಮಾಡಿ ತಮ್ಮ ಭವಿಷ್ಯದೊಂದಿಗೆ ಸಮಾಜವನ್ನು ಅಭಿವೃದ್ಧಿಪಡಿಸಿ. ಸಮಾಜದ ಜಾಗೃತಿಗಾಗಿ ಬೀದರ್‌ನಿಂದ ಚಾಮರಾಜ ನಗರದವರೆಗೂ ಭಗೀರಥ ಜ್ಯೋತಿ ಯಾತ್ರೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದ ಸಮಾವೇಶ ನಡೆಸಿ ಉಪ್ಪಾರ ಸಮಾಜ ಬಾಂಧವರನ್ನು ಸಂಘಟಿಸಲಾಗುವುದು ಈ ಕಾರ್ಯಕ್ಕೆ ಸಮಾಜ ಸಹಕಾರ ನೀಡುವಂತೆ ಹೇಳಿದರು.

ಉಪ್ಪಾರ ಸಮಾಜದ 500 ವಿದ್ಯಾರ್ಥಿಗಳು, ಉನ್ನತ ಹುದ್ದೆಯಲ್ಲಿರುವ ಸಮಾಜದ ಅಧಿಕಾರಿಗಳನ್ನು ಸತ್ಕರಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಕಟಕಭಾಂವಿಯ ಶ್ರೀ ಅಭಿನವ ಧರೇಶ್ವರ ಸ್ವಾಮಿಗಳು, ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಶ್ರೀಕಾಂತರಾವ್‌, ಹಿಂದುಳಿದ ಆಯೋಗದ ಮಾಜಿ ಸದಸ್ಯ ಎಸ್‌.ಎಂ ಹತ್ತಿಕಟಗಿ, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು. ವೆಂಕೋಬಾ, ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಮಾಜಿ ಅಧ್ಯಕ್ಷ ಬಿ.ಆರ್‌.ಕೊಪ್ಪ, ಜಿಲ್ಲಾಧ್ಯಕ್ಷ ಜಿ.ಎಸ್‌. ಉಪ್ಪಾರ, ಯುವಕ ಸಂಘದ ಗೌರವಾಧ್ಯಕ್ಷ ಭರಮಣ್ಣ ಉಪ್ಪಾರ, ಮಹಿಳಾ ಸಂಘದ ಅಧ್ಯಕ್ಷ ಕಮಲಾ ಜೇಡರ, ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಾಶಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷರಾದ ಶಿವಪುತ್ರ ಜಕಬಾಳ, ರಾಮಣ್ಣ ಹಂದಿಗುಂದ, ಪದಾಧಿಕಾರಿಗಳಾದ ಕುಶಾಲ ಗುಡ್ಡೇನವರ, ಅಡಿವೆಪ್ಪಾ ಕಿತ್ತೂರ, ವಿಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ, ವಿಠಲ ಸವದತ್ತಿ, ಪರಸಪ್ಪ ಚೂನನ್ನವರ, ಯಮನಪ್ಪ ಕೌಜಲಗಿ, ನಗರಸಭೆ ಸದಸ್ಯ ಭಗವಂತ ಹುಳಿ, ಗಣ್ಯರಾದ ಸತೀಶ ಕಡಾಡಿ, ಶಾಮಾನಂದ ಪೂಜೆರಿ, ಸದಾಶಿವ ಗುದಗಗೋಳ, ಭೀಮಶಿ ಭರಮನ್ನವರ, ಹನಮಂತ ದುರ್ಗನ್ನವರ, ಬಿಇಒಗಳಾದ ಅಜೀತ ಮನ್ನಿಕೇರಿ, ಜಿ.ಬಿ.ಬಳಗಾರ, ಅಕಾರಿಗಳಾದ ಡಾ.ವಿಜಯಕುಮಾರ್‌ ತೋರಗಲ್‌, ಲಕ್ಕಪ್ಪ ಹಣುಮನ್ನವರ, ಜಗದೀಶ್‌ ಗಂಗಣ್ಣವರ, ಲಕ್ಷ್ಮಣ ಬಬಲಿ, ಡಾ.ಸಂದೀಪ್‌ ದಂಡಿನ, ಲಕ್ಷ್ಮಣ ಉಪ್ಪಾರ, ಬಸವರಾಜ ಮೆಳವಂಕಿ, ಆರ್‌.ಕೆ ಬಿಸಿರೊಟ್ಟಿ, ಎಂ.ಆರ್‌.ಮುಂಜಿ, ಯಲ್ಲಪ್ಪ ಗದಾಡಿ, ಅಡಿವೇಶ ಗುದಿಗೋಪ್ಪ, ಶಂಕರ ಅಂತಗಟ್ಟಿ, ನಾಗರಾಜ್‌ ಕಿಲಾರಿ, ಶಿವಾನಂದ ಬಬಲಿ, ಕೃಷ್ಣಾ ಕುಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next