Advertisement
ಬೆಳ್ತಂಗಡಿ: ಅದೊಂದು ಅದ್ಭುತ ಅನುಭವ. ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಕೆತ್ತನೆ ಜೀವಮಾನದ ಒಂದು ಅನುಭವ ವಿಶೇಷವೇ ಸರಿ. ಆ ಮಹಾನ್ಮೂರ್ತಿಯನ್ನು ಕೆತ್ತಿ ನಿಲ್ಲಿಸಿ ವರುಷಗಳು ಕಳೆದು ಹೋದವೆಷ್ಟು…! ಇದು ರೆಂಜಾಳ ಗೋಪಾಲ ಶೆಣೈ ಅವರ ನಿರ್ದೇಶನದಡಿ ಧರ್ಮಸ್ಥಳ ಬಾಹುಬಲಿ ಮೂರ್ತಿಯ ಕೆತ್ತನೆ ಕೆಲಸದಲ್ಲಿ ಭಾಗಿಯಾಗಿದ್ದ ಶಿಲ್ಪಿ ವಿ.ಆರ್. ಕಣ್ಣನ್ ಅವರ ಮನದಾಳದ ಮಾತುಗಳು.
Related Articles
ಧರ್ಮಸ್ಥಳದ ವಿಗ್ರಹವನ್ನು ಕೆತ್ತಿದ ಬಳಿಕ ಕಣ್ಣನ್ ಅದಕ್ಕಿಂತ ಗಾತ್ರದಲ್ಲಿ ಕೊಂಚ ಕಿರಿದಾದ ಮತ್ತೂಂದು ಬಾಹುಬಲಿ ಮೂರ್ತಿ ಯನ್ನೂ ಕೆತ್ತಿದ್ದರಂತೆ. ಅದನ್ನು ಉತ್ತರ ಭಾರತದ ಆಗ್ರಾದತ್ತ ಸಾಗಿಸಲಾಗಿತ್ತು ಎಂದು ಕಣ್ಣನ್ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ 73ರ ಮಾಗಿದ ವಯಸ್ಸಿನಲ್ಲಿದ್ದರೂ ಕಣ್ಣನ್ ಕೇರಳದ ತಳಿಪರಂಬದ ದೇವಸ್ಥಾನವೊಂದರ ಶಿಲ್ಪ ಕೆತ್ತನೆಯ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.
Advertisement
ಶಿಲೆಯ ಆಯ್ಕೆಯ ಸವಾಲು ಮಹಾನ್ ಮೂರ್ತಿ ಕೆತ್ತನೆಯ ಹೊಣೆಯನ್ನು ವಹಿಸಿಕೊಂಡ ಶೆಣೈ ಅವರ ಎದುರಿದ್ದುದು ಶಿಲೆಯ ಆಯ್ಕೆಯ ಸವಾಲು. ರೂಪುಗೊಳ್ಳಬೇಕಾದ ಮೂರ್ತಿ ಅಂತಿಂಥದ್ದಲ್ಲ; ಅನಾದಿ ಕಾಲಕ್ಕೆ ಮಳೆ-ಬಿಸಿಲು-ಚಳಿಯನ್ನು ಎದುರಿಸಿ ತಲೆಯೆತ್ತಿ ನಿಂತಿರಬೇಕಾದ ವೈರಾಗ್ಯಮೂರ್ತಿಯದು. ಆಗ ಶೆಣೈ ಅವರಿಗೆ ಸೂಕ್ತವೆನಿಸಿದ್ದು ಕಾರ್ಕಳದ ಸಮೀಪ ಮಂಗಲಪಾದೆಯಲ್ಲಿದ್ದ ನೂರು ಅಡಿ ಎತ್ತರ ಹಾಗೂ ಐವತ್ತೆಂಟು ಅಡಿಗಳ ಬೃಹತ್ ಶಿಲೆ.
ಶಿಲ್ಪಶಾಸ್ತ್ರ ದಂತೆ 39 ಅಡಿಯ ಬೃಹತ್ ಮೂರ್ತಿಯಕೆತ್ತನೆಯ ಅಭೂತಪೂರ್ವ ಕಾರ್ಯಕ್ಕೆ 1967ರ ವಿಜಯ ದಶಮಿಯ ಶುಭದಿನದಂದು ಮೂಹೂರ್ತ ನಿಗದಿಯಾಯಿತು.