Advertisement

ಇಂದು ಮೈಲಾರ ಕಾರ್ಣಿಕೋತ್ಸವ

04:14 PM Mar 01, 2021 | Team Udayavani |

ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಮಾ. 1ರಂದು ನಡೆಯಲಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.

Advertisement

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್‌ ಮಾರ್ಗಸೂಚಿ ಅನ್ವಯ ಈ ಬಾರಿ ಸುಕ್ಷೇತ್ರ  ಮೈಲಾರಕ್ಕೆ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಿದ್ದು ಅದಕ್ಕಾಗಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್‌ ಇಲಾಖೆ ಮೈಲಾರ ಸುಕ್ಷೇತ್ರದ ನಾಲ್ಕು ಕಡೆಯಲ್ಲಿ ಬ್ಯಾರಿಕೇಡ್‌ ನಿರ್ಮಿಸಿದ್ದು, ಗ್ರಾಮದ ಸುತ್ತಲೂ ಪೊಲೀಸ್‌ ಪಹರೆ ಹಾಕಲಾಗಿದೆ. ಕೇವಲ ಗ್ರಾಮದ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಹೊರಗಿನಿಂದ ಬಂದು ಹೋಗುವ ಭಕ್ತರಿಗೆ ಅವಕಾಶವಿಲ್ಲದಾಗಿದೆ. ಆದರೂ ಸಹ ಭಕ್ತರು ಧಾರ್ಮಿಕ ಭಾವನೆ ಹಿನ್ನೆಲೆಯಲ್ಲಿ ಕಾರ್ಣಿಕದ ಡೆಂಕನ ಮರಡಿಗೆ ಆಗಮಿಸುವ ನಿರೀಕ್ಷೆ ಇದ್ದು ಸೂಕ್ತ ಮಾರ್ಗಸೂಚಿ ಆನುಸರಿಸಲು ಕ್ರಮ ಕೈಗೊಳ್ಳಲಾಗಿದೆ.

ಧಾರ್ಮಿಕ ಹಿನ್ನೆಲೆ: ಭರತ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ನಾಡಿನ ಸುಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಶ್ರೀ ಮೈಲಾರಲಿಂಗನ ಜಾತ್ರೆಗೆ ರೈತಾಪಿ ವರ್ಗದವರು ಸಕಲ ಸಿದ್ದತೆಯಲ್ಲಿ ತೊಡಗುತ್ತಾರೆ. ಭರತ ಹುಣ್ಣಿಮೆಯ ಮೂರನೆ ದಿವಸ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಜರಗುತ್ತದೆ. ಅಂದು ಜಾತ್ರೆಯ ಕೇಂದ್ರ ಬಿಂದುವಾದ ಕಾರ್ಣಿಕೋತ್ಸವ ನೋಡಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷೋಪ ಲಕ್ಷ ಭಕ್ತರು ಶ್ರೀ ಕ್ಷೇತರ ಮೈಲಾರಕ್ಕೆ ಆಗಮಿಸುತ್ತಾರೆ. ಹುಣ್ಣಿಮೆಗಿಂತ ಮೂರುದಿವಸಗಳ ಕಾಲ ಸುಕ್ಷೇತ್ರ ಮೈಲಾರಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಜಾನಪದ ಸೊಗಡಿನ ಪ್ರತೀಕದಂತೆ ರೈತಾಪಿ ವರ್ಗದವರು ರೈತರ ಗೆಳೆಯ ಎತ್ತುಗಳನ್ನು ಸಿಂಗರಿಸಿಕೊಂಡು ಸವಾರಿ ಬಂಡಿ ಕಟ್ಟಿಕೊಂಡು ಜಾತ್ರೆಗೆ ಹೊರಡುವುದು ಮೈಲಾರಲಿಂಗ ಸ್ವಾಮಿ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ.

ಮನೆಯಿಂದ ವಾರಕ್ಕೆ ಸಾಕಾಗುವಷ್ಟು ಆಹಾರ ಕಟ್ಟಿಕೊಂಡು ಶ್ರೀಕ್ಷೇತ್ರಕ್ಕೆ ಹೊರಡುತ್ತಾರೆ. ಸಾಮಾನ್ಯವಾಗಿ ಪ್ರತಿ ಬಂಡಿಯ ಜೊತೆಯಲ್ಲಿ ಒಬ್ಬರು ಕಾಲ್ನಡಿಗೆಯಲ್ಲಿಯೇ ಮೈಲಾರ ತಲುಪುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು: 11 ದಿವಸಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪ್ರತಿದಿನ ಒಂದೊಂದು ಧಾರ್ಮಿಕ ಕಾರ್ಯಗಳು ನೆರವೇರುತ್ತವೆ. ರಥ ಸಪ್ತಮಿಯಂದು ಶ್ರೀ ಮೈಲಾರ ಲಿಂಗನು ಕಾರ್ಣಿಕ ನುಡಿಯುವ ಡೆಂಕನ ಮರಡಿಗೆ ಆರೋಹಣ ಮಾಡುತ್ತಾನೆ. ಅಂದಿನಿಂದ ಕಾರ್ಣಿಕದ ಗೊರವಪ್ಪನು 11 ದಿವಸಗಳ ಕಾಲ ಡೆಂಕನ ಮರಡಿ ಕಾಯುವ ಮೂಲಕವಾಗಿ ಉಪವಾಸ ವ್ರತ ಕೈಗೊಳ್ಳುತ್ತಾನೆ. ಪವಿತ್ರ ಭಾವನೆಯ ಭಂಡಾರದ ನೀರು, ಹಣ್ಣು, ಹಂಪಲು ಸೇವಿಸುವ ಕಾರ್ಣಿಕದ ಗೊರವಪ್ಪನಿಗೆ ಸಾಕ್ಷಾತ್‌ ಶಿವ ದೈವ ಶಕ್ತಿಯ ವಾಣಿಯನ್ನು (ಕಾರ್ಣಿಕ ನುಡಿ) ನುಡಿಯುತ್ತಾನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಕಾರ್ಣಿಕೋತ್ಸವ ರಾಕ್ಷಸ ಸಂಹಾರದ ವಿಜಯೋತ್ಸವದ ಸಂಕೇತ: ಹಿಂದೆ ಭೂಲೋಕದಲ್ಲಿ ಮಲ್ಲಾಸುರ- ಮಣಿಕಾಸುರ ಎಂಬ ಇಬ್ಬರೂ ಸಹೋದರ ರಾಕ್ಷಸರು ಮಾನವರನ್ನೂ ಒಳಗೊಂಡಂತೆ ಮುನಿಗಳನ್ನು, ತಪಸ್ವಿಗಳನ್ನು ಹಿಂಸುಸುತ್ತಿದ್ದರು. ಇವರ ಉಪಟಳ ತಾಳಲಾರದೆ ಕೊನೆಗೆ ದೇವತೆಗಳು ಸಹ ಶಿವನಲ್ಲಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಲು ಮೊರೆ ಹೋಗುತ್ತಾರೆ. ಆಗ ಶಿವ ಪರಮಾತ್ಮ ತನ್ನ ಏಳು ಕೋಟಿ ದೇವಾನುದೇವತೆಗಳ ಸೈನ್ಯವನ್ನು ಕಟ್ಟಿಕೊಂಡು ಶ್ರೀ ಕ್ಷೇತ್ರದ ಮೂಡಣ ದಿಕ್ಕಿನ ಮಣಿಚುರ ಪರ್ವತಕ್ಕೆ ಸಾಗುತ್ತಾನೆ. ಈ ಸಂದರ್ಭದಲ್ಲಿ ಈಶ್ವರನು ಮಾರ್ತಾಂಡ ಭೈರವನಾಗಿ, ಕಂಬಳಿ ನಿಲುವಂಗಿ ಮುಂಡಾಸ, ಕೈಯಲ್ಲಿ ಡಮರುಗ ತ್ರಿಶೂಲ, ದೋಣಿ ಭಂಡಾರ ಬಟ್ಟಲನ್ನು ಹಿಡಿದುಕೊಂಡು ಶ್ರೀ ವಿಷ್ಣುವಿನನ್ನು ಮುಖ್ಯ ಸೇನಾಧಿಪತಿಯನ್ನಾಗಿ ನಂದೀಶ್ವರ ಕುದುರೆಯಾಗಿ ರಾಕ್ಷಸರ ಸಂಹಾರಕ್ಕೆ ಗುಪ್ತ ಮೌನ ಸವಾರಿ ಮೂಲಕವಾಗಿ ರಾಕ್ಷಸರು ಅವಿತು ಕುಳಿತಿದ್ದ ಡೆಂಕನ ಮರಡಿಗೆ ತೆರಳುತ್ತಾರೆ. ರಥ ಸಪ್ತಮಿ ದಿನದಿಂದ ಸುಮಾರು 22 ದಿನಗಳ ಕಾಲ ರಾಕ್ಷಸರಿಗೂ ಹಾಗೂ ದೇವತೆಗಳಿಗೂ ಘೋರ ಯುದ್ಧ ನಡೆಯುತ್ತದೆ. ನಂತರದಲ್ಲಿ ರಾಕ್ಷಸರ ಸಂಹಾರ ನಡೆಯುತ್ತದೆ ಎನ್ನುವುದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಲ್ಲಾಸುರ ದೈತ್ಯನನ್ನು ಸಂಹರಿಸಿದ್ದಕ್ಕಾಗಿ ಮಲ್ಲಾರಿ ಎಂದು ಹಾಗೆಯೇ ಮಲ್ಲಾರಿ ನೆಲಸಿದ್ದ ಸ್ಥಳವನ್ನು ಮೈಲಾರವೆಂದು ಪ್ರಸಿದ್ಧಿ ಪಡೆದಿರುವುದಾಗಿ ಪ್ರತೀತಿ ಇದೆ. ರಾಕ್ಷಸರ ಸಂಹಾರದ ನಂತರದಲ್ಲಿ ಭೂಲೋಕದಲ್ಲಿ ಮಳೆ ಬೆಳೆ ಸುಭೀಕ್ಷೆಯಿಂದ ಇರಲು ನಾಡಿನ ಭಕ್ತರಿಗೆ ಒಳಿತನ್ನು ಮಾಡುವ ದೈವ ವಾಣಿಯೇ ಇಂದಿಗೂ ಕಾರ್ಣಿಕದ ನುಡಿಯಾಗಿ ಪ್ರಸಿದ್ಧಿಯಾಗಿದೆ.

Advertisement

ಪವಾಡಗಳು: ಕಾರ್ಣಿಕದ ನಂತರದಲ್ಲಿ ಮರು ದಿನ ಸಂಜೆ ಗಂಗಿ ಮಾಳವ್ವ ದೇವಸ್ಥಾನದ ಮುಂದೆ ಗೊರವಪ್ಪನವರು ಸರಪಳಿ ಹರಿಯುವುದು ಕಂಚಿ ವೀರರು ಕಾಲಲ್ಲಿ ಹಾಗೂ ಕೈಯಲ್ಲಿ ಬಗಣಿ ಗೂಟ ಬಡಿದುಕೊಳ್ಳುವುದು ಒಳಗೊಂಡಂತೆ ಆನೇಕ ಪವಾಡಗಳು ನಡೆಯುತ್ತವೆ. ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಭಕ್ತರ ಭಾವನೆಗೆ ಧಕ್ಕೆ ಬಾರದ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲು ಅವಕಾಶ ನೀಡಿದೆ. ಕಾರ್ಣಿಕ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸಿದಂತೆ ಪೊಲೀಸ್‌ ಬಿಗಿ ಭದ್ರತೆ ಕೈಗೊಂಡಿದೆ. ಅದಕ್ಕಾಗಿ 5 ಜನ ಡಿವೈಎಸ್‌ಪಿ, 10 ಸಿಪಿಐ, 30 ಎಎಸ್‌ಐ, ಒಳಗೊಂಡಂತೆ 550 ಸಿಬ್ಬಂದಿಗಳನ್ನು 4 ಕೆಎಸ್‌ಆರ್‌ಪಿ ವಾಹನ ನಿಲುಗಡೆ ಮಾಡಲಾಗಿದೆ.

ಸಾರಿಗೆ ವ್ಯವಸ್ಥೆ ಕಡಿತ: ಪ್ರತಿ ಬಾರಿ ಜಾತ್ರೆಗೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಈ ಬಾರಿ ವಿಶೇಷ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿರುವುದಲ್ಲದೆ ಪ್ರತಿ ದಿನದ ಓಡಾಡುವ ಬಸ್‌ಗಳ ಸಂಖ್ಯೆಯನ್ನು  ಕಡಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next