Advertisement

ಪ್ರೀತಿಯ ನೋಟ ಮಹಿಷಾಸುರನ ಕಾಟ

11:50 PM Aug 22, 2019 | Team Udayavani |

ಒಳ್ಳೆಯ ಸ್ನೇಹಿತರಾಗಿರುವವರು, ಮುಂದೆ ಹುಡುಗಿಯೊಬ್ಬಳಿಗಾಗಿ ಕಚ್ಚಾಡಿಕೊಂಡ, ಕೊಲೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿದೆ.

Advertisement

ಈಗಗಾಲೇ ಈ ವಿಷಯದ ಸುತ್ತ ಕೆಲವು ಸಿನಿಮಾಗಳು ಕೂಡಾ ಬಂದಿವೆ. ಈಗ ಹೊಸಬರ ತಂಡವೊಂದು ಕೂಡಾ ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದೆ. ಆ ಚಿತ್ರಕ್ಕೆ ಅವರಿಟ್ಟ ಹೆಸರು “ಮಹಿಷಾಸುರ’. ಹೌದು, “ಮಹಿಷಾಸುರ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಚಿತ್ರತಂಡದ ಸದಸ್ಯರು, ಹಿತೈಷಿಗಳು ಜೊತೆಯಾಗಿ ಬಿಡುಗಡೆ ಮಾಡಿದರು.

ಈ ಚಿತ್ರವನ್ನು ಉದಯ್‌ ಪ್ರಸನ್ನ ನಿರ್ದೇಶಿಸಿದ್ದಾರೆ. ಇವರಿಗಿದು ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲೇ ಆ್ಯಕ್ಷನ್‌ ಮೊರೆ ಹೋಗಿರುವ ಉದಯ್‌, ನೈಜ ಘಟನೆಯಿಂದ ಪ್ರೇರಿತರಾಗಿ ಈ ಸಿನಿಮಾ ಮಾಡಿದ್ದಾರಂತೆ. ಇಬ್ಬರು ಗೆಳೆಯರ ನಡುವೆ ಹುಡುಗಿಯೊಬ್ಬಳು ಎಂಟ್ರಿಕೊಟ್ಟಾಗ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಚಿತ್ರ ಮಾಡಿದ್ದಾರಂತೆ. ಇಷ್ಟು ಹೇಳಿದ ಮೇಲೆ ಇದೊಂದು ತ್ರಿಕೋನ ಪ್ರೇಮಕಥೆಯ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಎಲ್ಲಾ ಓಕೆ, ಮಹಿಷಾಸುರ ಎಂದು ಟೈಟಲ್‌
ಇಡಲು ಏನು ಕಾರಣವೆಂದರೆ, ಪ್ರತಿಯೊಬ್ಬ ಮನುಷ್ಯನೊಳಗೂ ಒಬ್ಬ ಅಸುರ ಇರುತ್ತಾನೆ. ನಮ್ಮ ಸಿನಿಮಾದ ಕಾನ್ಸೆಪ್ಟ್ ಕೂಡಾ ಅದೇ ಆಗಿರುವುದರಿಂದ “ಮಹಿಷಾಸುರ’ ಎಂದು ಟೈಟಲ್‌ ಇಟ್ಟಿದ್ದಾಗಿ ಹೇಳುತ್ತಾರೆ ನಿರ್ದೇಶಕರು.

ಸುದರ್ಶನ್‌ ಹಾಗೂ ಮಂಜು ಈ ಚಿತ್ರದ ನಾಯಕರು. ಬಿಂದುಶ್ರೀ ಚಿತ್ರದ
ನಾಯಕಿ. ಊರ ಚೇರ್‌ಮಾನ್ ಮಗಳಾಗಿ ಬಿಂದುಶ್ರೀ ನಟಿಸಿದ್ದಾರಂತೆ. ನಾಯಕರಾಗಿ ನಟಿಸಿರುವ ಸುದರ್ಶನ್‌ ಹಾಗೂ ಮಂಜು ತಮ್ಮ ಪಾತ್ರದ ಬಗ್ಗೆ ಏನೂ ಹೇಳದೇ, ಸಿಕ್ಕಾಪಟ್ಟೆ ಸಸ್ಪೆನ್ಸ್‌ ಎಂದುಬಿಟ್ಟರು. ಲೀಲಾವತಿ ಸುರೇಶ್‌ ಕುಮಾರ್‌ ಹಾಗೂ ಪ್ರೇಮಾ ಚಂದ್ರಯ್ಯ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ರಾಕಿ ರಮೇಶ್‌ ಅವರ ಸಾಹಸ, ಕೃಷ್ಣ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next