Advertisement

ಮನೆ ತೊರೆದಿದ್ದೇನೆ, ಬದ್ಧತೆ ಅಲ್ಲ: ಸಿಎಂ ಉದ್ಧವ್‌ ಭಾವನಾತ್ಮಕ ಭಾಷಣ

12:33 AM Jun 25, 2022 | Team Udayavani |

ಮುಂಬಯಿ: “ನಾವು ಸತ್ತರೂ ಶಿವಸೇನೆಯನ್ನು ಮಾತ್ರ ಬಿಡುವುದಿಲ್ಲ ಎಂದು ಹೇಳುತ್ತಿದ್ದವರು, ಇಂದು ಓಡಿಹೋಗಿದ್ದಾರೆ. ನಾನು ನನ್ನ ಅಧಿಕೃತ ನಿವಾಸವನ್ನು ತೊರೆದಿರಬಹುದು, “ಬದ್ಧತೆ’ ಯನ್ನಲ್ಲ. ಕೊನೆಯವರೆಗೂ ನನ್ನ ಹೋರಾಟ ಮುಂದುವರಿಯಲಿದೆ.

Advertisement

ಇದು ಅಧಿಕಾರದ ಗದ್ದುಗೆಯಿಂದ ಇಳಿಯುವ ಹಂತಕ್ಕೆ ತಲುಪಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಆಡಿರುವ ಮಾತು. ಶುಕ್ರವಾರ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಭಾಷಣ ಮಾಡಿ ರುವ ಅವರು, ತಮ್ಮದೇ ಪಕ್ಷದ ನಾಯಕರು ತಮ್ಮ ಬೆನ್ನಿಗೆ ಚೂರಿ ಇರಿದರು ಎಂದು ಆರೋಪಿಸಿದ್ದಾರೆ.

ಶಿಂಧೆಗಾಗಿ ಎಲ್ಲವನ್ನೂ ಮಾಡಿದ್ದೆ: “ಏಕನಾಥ ಶಿಂಧೆ ಅವರ ಮಗ ಶ್ರೀಕಾಂತ್‌ ಶಿಂಧೆಯೂ ಶಿವಸೇನೆಯ ಸಂಸದ. ಅವರಿಗಾಗಿ ನಾನು ಎಲ್ಲ ವನ್ನೂ ಮಾಡಿದ್ದೇನೆ. ನನ್ನ ಬಳಿಯಿದ್ದ ಖಾತೆ ಯನ್ನೂ ಶಿಂಧೆಗೆ ಕೊಟ್ಟಿದ್ದೆ. ನಾನೇನೂ ಅಧಿಕಾ ರದ ಆಸೆಗೆ ಬಿದ್ದಿಲ್ಲ. ಆದರೆ ಶಿವಸೇನೆಯನ್ನು ಸತ್ತರೂ ಬಿಡುವುದಿಲ್ಲ ಎಂದವರು ಈಗ ಓಡಿ ಹೋಗಿ ಎಲ್ಲೋ ಕುಳಿತಿದ್ದಾರೆ’ ಎಂದು ಬಂಡಾಯ ಶಾಸಕರ ವಿರುದ್ಧ ಉದ್ಧವ್‌ ಕಿಡಿಕಾರಿದ್ದಾರೆ.

ಶಾಸಕರಿಗೆ ಸವಾಲು: ಇದೇ ವೇಳೆ, “ನಮ್ಮ ತಂದೆ ಬಾಳಾಸಾಹೇಬ್‌ ಠಾಕ್ರೆ ಅವರ ಹೆಸರಿಲ್ಲದೇ ನೀವು ಜನರ ಮುಂದೆ ಹೋಗಿ ನೋಡೋಣ’ ಎಂದು ಬಂಡಾಯ ಶಾಸಕರಿಗೆ ಉದ್ಧವ್‌ ಸವಾಲು ಹಾಕಿದ್ದಾರೆ. ಪಕ್ಷದ ಶಾಸಕರ ಭೇಟಿಗೆ ಉದ್ಧವ್‌ ಲಭ್ಯವಾಗುತ್ತಿರಲಿಲ್ಲ ಎಂಬ ಆರೋಪದ ಬಗ್ಗೆಯೂ ಸ್ಪಷ್ಟನೆ ನೀಡಿದ ಸಿಎಂ, “ನನ್ನ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನಾನು ಎಲ್ಲರನ್ನೂ ಭೇಟಿಯಾಗುತ್ತಿರಲಿಲ್ಲ. ನನಗೆ ಕಣ್ಣು ತೆರೆಯಲೂ ಆಗುತ್ತಿರಲಿಲ್ಲ. ಕುತ್ತಿಗೆ ಹಾಗೂ ತಲೆ ನೋವಿನಿಂದಲೂ ಬಳಲುತ್ತಿದ್ದೆ. ಆದರೆ ವಿರೋಧಿಗಳು ಈಗ ನನ್ನ ಅನಾರೋಗ್ಯದ ಲಾಭ ಪಡೆದರು’ ಎಂದಿದ್ದಾರೆ. ತಮ್ಮ ಭಾಷಣದಲ್ಲಿ ಶಿವಾಜಿ ಮಹಾರಾಜ್‌ ಹೆಸರನ್ನು ಪ್ರಸ್ತಾಪಿಸಿದ ಉದ್ಧವ್‌, “ಶಿವಾಜಿ ಮಹಾರಾಜ್‌ ಸೋತಾಗಲೂ, ಜನರು ಅವರ ಕೈಬಿಟ್ಟಿರಲಿಲ್ಲ’ ಎಂದು ಸ್ಮರಿಸಿದ್ದಾರೆ.

ಅಭಿವೃದ್ಧಿ ಕಾರ್ಯ ನಿಲ್ಲುವಂತಿಲ್ಲ: ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಡಕು ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಸಿಎಂ ಉದ್ಧವ್‌ ಸೂಚಿಸಿದ್ದಾರೆ. ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಮತ್ತು ಸರ್ಕಾರಿ ಇಲಾಖೆಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದ ಪ್ರಗತಿ ಪರಿಶೀಲನ ಸಭೆಯಲ್ಲಿ ಸಿಎಂ ಈ ಸೂಚನೆ ನೀಡಿದ್ದಾರೆ. ಜನರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಡಿ. ನೇರವಾಗಿ ನನ್ನನ್ನೇ ಸಂಪರ್ಕಿಸಿ ಎಂದಿದ್ದಾರೆ.

Advertisement

ಸಂಧಾನಕಾರನ ಬಂಧನ: ಬಂಡಾಯ ಶಾಸಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸ ಲೆಂದು ಅಸ್ಸಾಂಗೆ ತೆರಳಿದ್ದ ಶಿವಸೇನೆಯ ನಾಯಕ ಸಂಜಯ್‌ ಭೋಸ್ಲೆ ಅವರನ್ನು ಗುವಾ ಹಾಟಿ ಪೊಲೀಸರು ಬಂಧಿಸಿದ್ದಾರೆ. ಶಾಸಕರು ತಂಗಿರುವ ಹೊಟೇಲ್‌ನೊಳಗೆ ಪ್ರವೇಶಿಸಲು ಅವಕಾಶ ನೀಡದ್ದರಿಂದ ಕ್ರುದ್ಧರಾದ ಸಂಜಯ್‌, ಹೊಟೇಲ್‌ ಹೊರಗೆ ಫ‌ಲಕವೊಂದನ್ನು ಹಿಡಿದು ಪ್ರತಿಭಟನೆ ಆರಂಭಿಸಿದರು. ಅಲ್ಲಿಗೆ ಬಂದ ಪೊಲೀಸರು, ಸಂಜಯ್‌ರನ್ನು ಬಂಧಿಸಿದ್ದು “ಸೂಕ್ಷ್ಮ ಪ್ರದೇಶ’ವಾದ ಕಾರಣ ಈ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

182 ಯೋಜನೆಗಳಿಗೆ ಹಣ ಬಿಡುಗಡೆಗೆ ಆದೇಶ!
ಸರಕಾರ ಪತನದ ಅಂಚಿನಲ್ಲಿರುವಂತೆಯೇ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸಚಿವರು ಸಾವಿ ರಾರು ಕೋಟಿ ರೂ. ಹಣ ಬಿಡುಗಡೆಗೆ ಆದೇಶ ಜಾರಿ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳಿಗಾಗಿ ಈ ಹಣ ಬಿಡುಗಡೆಗೆ ಆದೇಶಿಸಲಾಗಿದ್ದರೂ, ಬಿಡುಗಡೆಯ ಪ್ರಮಾಣ ವಿಪಕ್ಷ ಬಿಜೆಪಿಗೆ ಆಘಾತ ತರಿಸಿದೆ. ಅದು ರಾಜ್ಯಪಾಲರಿಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ. ಜೂ. 20ರಿಂದ 23ರ ನಡುವೆ 182 ಸರ‌ಕಾರಿ ಆದೇಶಗಳನ್ನು ಹೊರಡಿಸಲಾಗಿದೆ! ಕೇವಲ ಜೂ. 17ರಲ್ಲೊಂದೇ 107 ಆದೇಶಗಳು (ಗವರ್ನ  ಮೆಂಟ್‌ ರೆಸಲ್ಯೂಷನ್ಸ್‌) ಹೊರಬಿದ್ದಿವೆ. ಬಹುಶಃ ಸರಕಾರ ಬೀಳುವ ಸುಳಿವು ಸಿಕ್ಕಿರುವು ದರಿಂದ ಕಾಂಗ್ರೆಸ್‌-ಎನ್‌ಸಿಪಿ ಸಚಿವರು ಈ ಕೆಲಸಕ್ಕೆ ಕೈಹಾಕಿರಬಹುದು ಎಂದು ಊಹಿಸಲಾ ಗಿದೆ. ಒಂದು ವೇಳೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಮಧ್ಯಪ್ರವೇಶಿಸಿದರೆ ಏನಾಗಬ ಹುದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ರಾಜ್ಯಾದ್ಯಂತ ಅಲರ್ಟ್‌
ಬಂಡಾಯದ ವಿರುದ್ಧ ಶಿವಸೇನೆ ಕಾರ್ಯ ಕರ್ತರು ಬೀದಿಗಿಳಿಯುವ ಸಾಧ್ಯತೆಗಳಿರುವ ಕಾರಣ ಮಹಾರಾಷ್ಟ್ರ ಪೊಲೀಸರು ರಾಜ್ಯಾ ದ್ಯಂತ ಹೈ ಅಲರ್ಟ್‌ ಘೋಷಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಿ ಎಂದು ಎಲ್ಲ ಜಿಲ್ಲೆಗಳ ಎಸ್‌ಪಿಗಳು ಮತ್ತು ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಶುಕ್ರ ವಾರ ಕೊಲ್ಹಾಪುರದಲ್ಲಿ ನೂರಾರು ಸಂಖ್ಯೆ ಯಲ್ಲಿ ಸೇನೆ ಕಾರ್ಯಕರ್ತರು ಬಂಡಾಯ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಾಸಿಕ್‌ನಲ್ಲಿ ಶಿಂಧೆಯ ಪರ ಹಾಕಲಾಗಿದ್ದ ಪೋಸ್ಟರ್‌ಗೆ ಮಸಿ ಬಳಿಯಲಾಗಿದೆ, ಕುರ್ಲಾ ಶಾಸಕನ ಕಚೇರಿಯ ಹೊರಗೆ ಹಾಕಲಾಗಿದ್ದ ಫ‌ಲಕಗಳನ್ನು ಧ್ವಂಸ ಮಾಡ ಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಭದ್ರತೆ ಹೆಚ್ಚಿಸಲಾಗಿದೆ

ಎಲ್ಲರಿಗೂ ಸ್ವಾಗತ!
ಮಹಾರಾಷ್ಟ್ರದ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, “ಕೆಲವು ವ್ಯಕ್ತಿಗಳು ಅಸ್ಸಾಂಗೆ ಬಂದಿದ್ದಾರೆ. ಹೊಟೇಲ್‌ ಬುಕ್‌ ಮಾಡಿದ್ದಾರೆ. ನನಗೆ ಖುಷಿಯಾಗಿದೆ. ಏಕೆಂದರೆ ಇದರಿಂದ ನಮ್ಮ ರಾಜ್ಯದ ಆರ್ಥಿಕತೆ ಅಭಿವೃದ್ಧಿಯಾ ಗುತ್ತದೆ. ಪ್ರವಾಸೋದ್ಯಮಕ್ಕೂ ನೆರವಾಗು ತ್ತದೆ. ನೀವು ಕೂಡ ಇಲ್ಲಿಗೆ ಬರಬಹುದು. ಎಲ್ಲ ಟೂರಿಸ್ಟ್‌ಗಳನ್ನೂ ನಾವು ಸ್ವಾಗತಿಸು ತ್ತೇವೆ’ ಎಂದು ಹೇಳಿದ್ದಾರೆ.

ಮಹಾ ಅಸೆಂಬ್ಲಿಯಲ್ಲಿ ಶಿವಸೇನೆ ಶಾಸಕರ ಸಂಖ್ಯಾಬಲ ಕುಗ್ಗಿರುವುದು ನಿಜ. ಆದರೆ ವಿಶ್ವಾಸಮತ ಯಾಚನೆ ವೇಳೆ ಬಂಡಾಯ ಶಾಸಕರು ಎಂವಿಎ ಸರಕಾರಕ್ಕೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ. ಯಾವ ಕ್ಷಣದಲ್ಲಾದರೂ ಅಂಕಿಸಂಖ್ಯೆ ಬದಲಾಗಬಹುದು.
-ಸಂಜಯ್‌ ರಾವತ್‌, ಶಿವಸೇನೆ ಸಂಸದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next