ನಾಗ್ಪುರ: ರೈತರ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಉದ್ಯಮಿಯೊಬ್ಬರು 5,400 ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ಎನ್ಸಿಪಿ ಶಾಸಕ ಧನಂಜಯ ಮುಂಡೆ ಆರೋಪಿಸಿದ್ದಾರೆ. ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಿದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಮೋಸ ಮಾಡಿದ ನೀರವ್ ಮೋದಿಯಂತೆ ಆತ ದೇಶ ತೊರೆದು ಪರಾರಿಯಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ವಿಧಾನಪರಿಷತ್ನಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಭಾನಿ ಜಿಲ್ಲೆಯ ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಲಿಮಿಟೆಡ್ನ ಪ್ರವರ್ತಕ ರತ್ನಾಕರ ಗುಟ್ಟೆ ಈ ರೀತಿ ವಂಚನೆ ಎಸಗಿದ್ದಾರೆ. ಅದಕ್ಕಾಗಿ ಗುಟ್ಟೆ 22 ನಕಲಿ ಕಂಪನಿಗಳನ್ನು ತೆರೆದಿದ್ದಾರೆ ಎಂದೂ ಪ್ರತಿಪಾದಿಸಿದ್ದಾರೆ. 2015ರಲ್ಲಿ 600 ರೈತರ ಹೆಸರಿನಲ್ಲಿ “ಹಾರ್ವೆಸ್ಟ್ ಆ್ಯಂಡ್ ಟ್ರಾನ್ಸ್ಪೊàರ್ಟ್ ಸ್ಕೀಮ್’ ಯೋಜನೆಯನ್ವಯ ಸಾಲ ಪಡೆದುಕೊಳ್ಳಲಾಗಿತ್ತು. ಪ್ರತಿ ರೈತನ ಹೆಸರಿನಲ್ಲಿ 25 ಲಕ್ಷ ರೂ.ಸಾಲವಿದೆ.ಈಗ ಅವರಿಗೆ ಅದನ್ನು ಪಾವತಿ ಮಾಡುವಂತೆ ನೋಟಿಸ್ ಬರುತ್ತಿದೆ. ಜು.5ರಂದು ಗುಟ್ಟೆ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ, ಅವರನ್ನು ಬಂಧಿಸಲಾಗಿಲ್ಲ ಎಂದಿದ್ದಾರೆ.