ಪಣಜಿ: ಕಳೆದ ಕೆಲವು ದಿನಗಳಿಂದ ಮಹದಾಯಿ ವಿಚಾರವಾಗಿ ಗೋವಾದಲ್ಲಿ ವಾತಾವರಣ ಬಿಸಿಯಾಗಿತ್ತು. ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ನೀರು ಪೂರೈಸುವ ಮಹದಾಯಿ ವಿಚಾರದಲ್ಲಿ ಉಭಯ ರಾಜ್ಯಗಳ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಮಹದಾಯಿ ನದಿ ನೀರು ಹರಿಸುವ ವಿಚಾರದಲ್ಲಿ ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಆಕ್ರಮಣಕಾರಿ ನಿಲುವು ತಳೆದಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪಣಜಿಯಲ್ಲಿ ಮಹದಾಯಿ ಬಚಾವೋ ಅಭಿಯಾನದ ಅಧಿಕಾರಿಗಳು ಮತ್ತು ಸದಸ್ಯರ ಸಭೆ ನಡೆಸಿ ಕೈಗೊಳ್ಳಬಹುದಾದ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಮಹದಾಯಿ ನದಿ ಜಲಾನಯನ ಪ್ರದೇಶದಲ್ಲಿ ಎರಡು ಅಣೆಕಟ್ಟುಗಳನ್ನು ನಿರ್ಮಿಸುವ ಕರ್ನಾಟಕದ ಯೋಜನಾ ವರದಿಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಪಣಜಿಯಲ್ಲಿ ನಡೆದ ಸಭೆಯ ನಂತರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಾವಂತ್- ಗೋವಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ನಾಟಕ ಸರ್ಕಾರಕ್ಕೆ ಸ್ಟಾಪ್ ವರ್ಕ್ ನೋಟಿಸ್ ನೀಡಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ. ಪಣಜಿಯಲ್ಲಿ “ಮಹದಾಯಿ ಬಚಾವೋ ಅಭಿಯಾನ್” ಸದಸ್ಯರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು. ಗೋವಾ ಕಲ್ಯಾಣಕ್ಕೆ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಕುರಿತು ಸದಸ್ಯರಿಗೆ ವಿವರವಾಗಿ ವಿವರಿಸಲಾಯಿತು ಎಂಬ ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಮಹದಾಯಿ ಬಚಾವೋ ಅಭಿಯಾನದ ಅಧ್ಯಕ್ಷೆ ನಿರ್ಮಲಾ ಸಾವಂತ್, ಪರಿಸರವಾದಿ ರಾಜೇಂದ್ರ ಕೇರ್ಕರ್ ಉಪಸ್ಥಿತರಿದ್ದರು. ಸಭೆಯ ನಂತರ ರಾಜ್ಯ ಅಡ್ವೊಕೇಟ್ ಜನರಲ್ ದೇವಿದಾಸ್ ಪಂಗಮ್ ಸುದ್ಧಿಗಾರರೊಂದಿಗೆ ಮಾತನಾಡಿ- ಕರ್ನಾಟಕ ಸರ್ಕಾರ ಡಿಪಿಆರ್ ಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದೆ. ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು 2019 ರಲ್ಲಿ ಅಂತರ-ರಾಜ್ಯ ಜಲ ವಿವಾದಗಳ ನ್ಯಾಯಮಂಡಳಿ ನೀಡಿದ ತೀರ್ಪನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ದಾವೆಯ ಭಾಗವಾಗಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ: ಗೆಳೆಯರ ಜೊತೆ ಬ್ಯಾಡ್ಮಿಂಟನ್ ಆಟವಾಡುತ್ತಲೇ ಕುಸಿದು ಬಿದ್ದು ಕೊನೆಯುಸಿರೆಳೆದ ಭಾರತೀಯ ಮೂಲದ ವ್ಯಕ್ತಿ