ಗುವಾಹಟಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಹಲವಾರು ಸಚಿವರು ಮತ್ತು ತಮ್ಮ ಕುಟುಂಬಗಳೊಂದಿಗೆ ಶನಿವಾರ ಗುವಾಹಟಿಗೆ ಭೇಟಿ ನೀಡಿ ಕಾಮಾಖ್ಯ ದೇವಿಯ ದರ್ಶನ ಪಡೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (MVA) ಸರಕಾರವನ್ನು ಉರುಳಿಸುವ ಮೊದಲು ಜೂನ್ 22-29 ರಿಂದ ಒಂದು ವಾರದವರೆಗೆ ಶಿವಸೇನೆಯ ಶಾಸಕರು ಮತ್ತು ಸ್ವತಂತ್ರ ಶಾಸಕರ ಗುಂಪಿನೊಂದಿಗೆ ಶಿಂಧೆ ಗುವಾಹಟಿಯ ಹೋಟೆಲ್ನಲ್ಲಿ ತಂಗಿದ್ದ ಐದು ತಿಂಗಳ ನಂತರ ಈಶಾನ್ಯ ರಾಜ್ಯಕ್ಕೆ ಕಿರು ಪ್ರವಾಸ ಕೈಗೊಂಡಿದ್ದಾರೆ.
“ಮಹಾರಾಷ್ಟ್ರದ ಮುಖ್ಯಮಂತ್ರಿ ಶಿಂಧೆ , ಹಲವಾರು ಸಚಿವರು, ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಚಾರ್ಟರ್ಡ್ ಸೇರಿದಂತೆ ಪ್ರತ್ಯೇಕ ವಿಮಾನಗಳಲ್ಲಿ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ವಿಮಾನ ನಿಲ್ದಾಣದಲ್ಲಿ ಅಸ್ಸಾಂನ ಮೂವರು ಸಚಿವರು ಮತ್ತು ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ನಮಗೆ ತಿಳಿದಿರುವಂತೆ, ಅವರು ಕಾಮಾಖ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಂದಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ರಾತ್ರಿ ಕಳೆದು ನಾಳೆ ವಾಪಸಾಗಲಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ನಲ್ಲಿ ಇದೇ ಹೋಟೆಲ್ನಲ್ಲಿ ಬಂಡಾಯವೆದ್ದಿದ್ದ ಶಾಸಕರು ತಂಗಿದ್ದರು.
Related Articles
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ಶಿಂಧೆ ಹೇಳಿದ್ದಾರೆ.
”ಜೂನ್ನಲ್ಲಿ ಆಗಿನ ಬಂಡಾಯ ಶಾಸಕರು ಕಾಮಾಖ್ಯ ದೇವಿಯ ದರ್ಶನ ಪಡೆದು ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ದೇವಿಯು ನಮ್ಮ ಪ್ರಾರ್ಥನೆಯನ್ನು ಕೇಳಿದಳು ಮತ್ತು ಶಿಂಧೆ ಜಿ ಮುಖ್ಯಮಂತ್ರಿಯಾದರು”ಎಂದು ಶಾಸಕರೊಬ್ಬರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಶಿಂಧೆ ಅವರು ಜೂನ್ 22 ರಂದು ಭಿನ್ನಮತೀಯ ಶಿವಸೇನೆ ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರೊಂದಿಗೆ ಮುಂಬೈನಿಂದ ಸುಮಾರು 2,700 ಕಿಮೀ ದೂರದಲ್ಲಿರುವ ಗುವಾಹಟಿಯನ್ನು ತಲುಪಿದ್ದರು.ಜೂನ್ 29 ರವರೆಗೆ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಅವರು ಗೋವಾಕ್ಕೆ ತೆರಳಿ ನಂತರ ಮುಂಬೈಗೆ ತೆರಳಿದ್ದರು.