Advertisement

ಮಡಿಕೇರಿ: ಲಂಚಕ್ಕೆ ಬೇಡಿಕೆ ಇಟ್ಟ ಸರ್ವೇಯರ್‌ ಲೋಕಾಯುಕ್ತ ಬಲೆಗೆ

10:53 PM Jan 24, 2023 | Team Udayavani |

ಮಡಿಕೇರಿ: ವ್ಯಕ್ತಿಯೊಬ್ಬರಿಂದ 2 ಸಾವಿರ ರೂ. ನಗದು ಮತ್ತು 1 ಬಾಟಲಿ ಮದ್ಯ ಸ್ವೀಕರಿಸುತ್ತಿದ್ದ ಮಡಿಕೇರಿ ಸರ್ವೇ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್‌ ಆಗಿರುವ ಮಾದಪ್ಪ ವಿಚಾರಣೆಗೊಳಪಟ್ಟಿರುವ ಆರೋಪಿ. 2 ಸಾವಿರ ನಗದು ಹಾಗೂ 1 ಮದ್ಯದ ಬಾಟಲಿಯನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರಿಸಲಾಗಿದೆ.

Advertisement

ಚೇರಂಬಾಣೆ ಬಾಡಗ ಗ್ರಾಮದ ವ್ಯಕ್ತಿಯೊಬ್ಬರು 2 ಸರ್ವೇ ನಂಬರ್‌ಗಳಲ್ಲಿ ಕಾಫಿ ತೋಟ ಹೊಂದಿದ್ದು, ಮನೆ ನಿರ್ಮಿಸುವ ಸಲುವಾಗಿ ನಿವೇಶನ ಮಾಡಲು ಮುಂದಾಗಿದ್ದರು. ಈ ಸ್ಥಳದಲ್ಲಿ 3 ಬೀಟೆ ಮರಗಳಿದ್ದು, ಅದನ್ನು ತೆರವು ಮಾಡುವುದು ಮತ್ತು ನಿವೇಶನವನ್ನಾಗಿ ಪರಿವರ್ತಿಸಲು ಸ್ಥಳದ ಸರ್ವೇ ನಡೆಸಬೇಕಿತ್ತು. ಈ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಮಡಿಕೇರಿ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೇ ಸರ್ವೇಗಾಗಿ ಸರಕಾರ ನಿಗದಿಪಡಿಸಿದ್ದ ಶುಲ್ಕವನ್ನೂ ಪಾವತಿ ಮಾಡಿದ್ದರು.

ಈ ವೇಳೆ ಸರ್ವೇಯರ್‌ ಮಾದಪ್ಪ ಅವರು 10 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದು, ಜಾಗದ ಮಾಲಕರು 10 ಸಾವಿರ ರೂ. ನಗದು ನೀಡಿದ್ದರು. ಬಳಿಕವೂ ಕೆಲಸ ನಿಧಾನಗತಿಯಲ್ಲಿ ಸಾಗಿದ್ದು ಈ ವೇಳೆ ಸರ್ವೇಯರ್‌ ಮಾದಪ್ಪ ಅವರನ್ನು ಸಂಪರ್ಕಿಸಿದಾಗ ಹೆಚ್ಚುವರಿ 5 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಆ ಹಣವನ್ನೂ ನೀಡಲಾಗಿತ್ತು. ಹೀಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿರಲಿಲ್ಲ. ಮಾತ್ರವಲ್ಲದೇ ಹೆಚ್ಚುವರಿ 2 ಸಾವಿರ ನಗದು ಮತ್ತು 1 ಮದ್ಯದ ಬಾಟಲಿ ನೀಡುವಂತೆ ಒತ್ತಾಯಿಸಿದ್ದರು. ಇದರಿಂದ ಮನನೊಂದ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಆರೋಪಿಸಲಾಗಿದೆ.

ಅರ್ಜಿದಾರರಿಂದ ಆರೋಪಿ ಮಾದಪ್ಪ ಅವರು ಕೆಎಸ್ಸಾ ರ್ಟಿಸಿ ಬಸ್‌ ನಿಲ್ದಾಣದಲ್ಲಿ 2 ಸಾವಿರ ರೂ. ನಗದು ಮತ್ತು 1 ಮದ್ಯದ ಬಾಟಲಿಯನ್ನು ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಲೋಕಾಯುಕ್ತ ಎಸ್‌.ಪಿ. ಸುರೇಶ್‌ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‌ಪಿ ಪವನ್‌ ಕುಮಾರ್‌, ವೃತ್ತನಿರೀಕ್ಷಕ ಲೋಕೇಶ್‌ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next