Advertisement

ಕಾಳು ಮೆಣಸು ಕೊಯ್ಯಲು ಇಟ್ಟ ಅಲ್ಯುಮಿನಿಯಂ ಏಣಿಗೆ ವಿದ್ಯುತ್‌ ಸ್ಪರ್ಶ: ಇಬ್ಬರ ಸಾವು

10:59 PM Feb 22, 2023 | Team Udayavani |

ಮಡಿಕೇರಿ: ವಿದ್ಯುತ್‌ ತಂತಿಗೆ ಅಲ್ಯುಮೀನಿಯಂ ಏಣಿ ಸ್ಪರ್ಶಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಒಂದೇ ದಿನ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಶ್ರೀಮಂಗಲ ಹಾಗೂ ಹುದಿಕೇರಿ ಗ್ರಾಮದಲ್ಲಿ ಸಂಭವಿಸಿದೆ.

Advertisement

ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದಲ್ಲಿ ಅಬ್ರುದ್ದೀನ್‌ (31) ಮತ್ತು ಹುದಿಕೇರಿ ಹೋಬಳಿಯ ಹೈಸೊಡ್ಕೂರು ಗ್ರಾಮದಲ್ಲಿ ಇಸ್ಮಾಯಿಲ್‌ ಹುಸೇನ್‌ (33) ಮೃತಪಟ್ಟವರು. ಇಬ್ಬರೂ ಅಸ್ಸಾಂ ಮೂಲದವರು.

ನಾಲ್ಕೇರಿ ಗ್ರಾಮದ ತೋಟವೊಂದರಲ್ಲಿ ಬೆಳಗ್ಗೆ 8.30ರ ವೇಳೆಗೆ ಕರಿಮೆಣಸು ಕೊಯ್ಯುತ್ತಿದ್ದ ಸಂದರ್ಭ 11 ಕೆ.ವಿ. ವಿದ್ಯುತ್‌ ತಂತಿಗೆ ಏಣಿ ತಗುಲಿ ಅಬ್ರುದ್ದೀನ್‌ ಆಘಾತಕ್ಕೊಳಗಾದರು. ಆಸ್ಪತ್ರೆಗೆ ಸಾಗಿಸುವ ಸಂದರ್ಭ ಅವರು ಮೃತಪಟ್ಟರು. ಸ್ಥಳಕ್ಕೆ ಕುಟ್ಟ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ‌ ರವಿಶಂಕರ್‌ ಹಾಗೂ ಸಿಬಂದಿ ಭೇಟಿ ನೀಡಿ ಮಹಜರು ನಡೆಸಿದರು. ಕುಟ್ಟ ಪೊಲೀಸ್‌ ಪ್ರಕರಣ ದಾಖಲಾಗಿದೆ.

ಮತ್ತೂಂದು ಪ್ರಕರಣ
ಹುದಿಕೇರಿ ಹೋಬಳಿಯ ಹೈಸೊಡ್ಲುರು ಗ್ರಾಮದ ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಯುತ್ತಿದ್ದ ಇಸ್ಮಾಯಿಲ್‌ ಹುಸೇನ್‌ (37) ಅವರಿದ್ದ ಏಣಿ ವಿದ್ಯುತ್‌ ತಂತಿಗೆ ಏಣಿ ಸ್ಪರ್ಶಿಸಿ ಆಘಾತಕ್ಕೊಳಗಾದರು. ಕೂಡಲೇ ಗೋಣಿ ಕೊಪ್ಪಲಿನ ಆಸ್ಪತ್ರೆಗೆ ಸಾಗಿಸಿದರೂ ದಾರಿಮಧ್ಯೆ ಮೃತಪಟ್ಟರು. ಸ್ಥಳಕ್ಕೆ ಶ್ರೀಮಂಗಲ ಪೊಲೀಸ್‌ ಠಾಣಾಧಿಕಾರಿ ವಿರೂಪಾಕ್ಷ ಮತ್ತು ಸಿಬಂದಿ ಭೇಟಿ ನೀಡಿದ್ದಾರೆ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕೆ ಆಗ್ರಹ
ಕುಟ್ಟ ಸಮುದಾಯ ಆರೋಗ್ಯ ಕೇಂದ್ರದ ಬಳಿಕ ಕೊಡಗು ರೈತ ಸಂಘದ ಪ್ರಮುಖರು ಜಮಾಯಿಸಿ ಚೆಸ್ಕಾಂ ಇಲಾಖೆಯು ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ಮಾನವೀಯ ಪರಿಹಾರ ನೀಡಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದರು. ಎಲ್ಲ ಹಳೆಯ ವಿದ್ಯುತ್‌ ಕಂಬಗಳನ್ನು ಬದಲಾಯಿಸಬೇಕು. ತೋಟಗಳ ಒಳಗೆ ಕೆಳಮಟ್ಟದಲ್ಲಿ ಹಾದು ಹೋಗಿರುವ ಲೈನ್‌ಗಳನ್ನು ದುರಸ್ತಿ ಮಾಡಬೇಕು ಎಂದು ಕೊಡಗು ರೈತ ಸಂಘದ ಗೌರವಾಧ್ಯಕ್ಷ ಚಿಮ್ಮಂಗಡ ಗಣೇಶ್‌ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next