Advertisement

ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ಲಕ್ಷಾಂತರ ರೂ. ದರೋಡೆ : ನಾಪೋಕ್ಲು ಕೊಳಕೇರಿಯಲ್ಲಿ ಘಟನೆ

08:48 PM Feb 01, 2022 | Team Udayavani |

ಮಡಿಕೇರಿ : ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಹಿಳೆಯರೇ ಇರುವ ಒಂಟಿ ಮನೆಗಳ ಮೇಲೆ ಅಪರಿಚಿತ ವ್ಯಕ್ತಿಗಳು ಹಾಗೂ ಕಳ್ಳರ ದಾಳಿ ಹೆಚ್ಚಾಗುತ್ತಿದೆ. ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ನಡೆದಿದೆ.

Advertisement

ಸೋಮವಾರ ಮಧ್ಯ ರಾತ್ರಿ ವಾಂಜಂಡ ಜಾನಕಿ (78) ಹಾಗೂ ಅವರ ತಂಗಿ ಅಮ್ಮಕ್ಕಿ (68) ವಾಸವಿದ್ದ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ನಾಲ್ವರು ಚೋರರು 2.5 ಲಕ್ಷ ನಗದು ಹಾಗೂ ಸುಮಾರು 83 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಯೊಳಗೆ ನುಗ್ಗಿದ ಚೋರರು ಇಬ್ಬರು ಮಹಿಳೆಯರನ್ನು ಕೋಣೆಯೊಂದರಲ್ಲಿ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಚಾಕುವಿನಿಂದ ಹತ್ಯೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭ ಅಂಗಲಾಚಿದ ಮಹಿಳೆಯರು ನಮ್ಮನ್ನು ಏನೂ ಮಾಡಬೇಡಿ, ಹಣ, ಒಡವೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಇದರಿಂದ ಸುಮ್ಮನಾದ ದುಷ್ಕರ್ಮಿಗಳು ಹಣ ಮತ್ತು ಚಿನ್ನಾಭರಣಗಳನ್ನು ಕಸಿದು ಪರಾರಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ವಾಸವಿರುವ ಸಹೋದರ ನಿವೃತ್ತ ನ್ಯಾಯಾಧೀಶ ವಾಂಜಂಡ ಬೋಪಯ್ಯ ಅವರಿಗೆ ಮಹಿಳೆಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಲ್ಲೆಗೊಳಗಾದ ಮಹಿಳೆಯರನ್ನು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ಇದನ್ನೂ ಓದಿ : ಕೋವಿಡ್ ಪರಿಹಾರಕ್ಕಾಗಿ ವಿವರ ಪಡೆಯಲು ಕರೆ ಮಾಡಿದರೆ : ಮೃತ ವ್ಯಕ್ತಿಯೇ ಕರೆ ಸ್ವೀಕರಿಸುವುದೇ !

Advertisement

ನಂತರ ಮನೆಯ ಸುತ್ತ ಮಹಜರು ನಡೆಸಿದಾಗ ಚೋರರು ಮದ್ಯದ ಪಾರ್ಟಿ ಮಾಡಿರುವುದು ಕಂಡು ಬಂದಿದೆ. ಈ ಘಟನೆಯಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ.

ಡಿವೈ ಎಸ್ಪಿ ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣೆಯ ಪಿಎಸ್‌ಐ ವೆಂಕಟೇಶ್, ನಾಪೋಕ್ಲು ಠಾಣೆಯ ಪ್ರಭಾರ ಠಾಣಾಧಿಕಾರಿ ಕುಶಾಲಪ್ಪ, ಸಿಬ್ಬಂದಿಗಳಾದ ರವಿಕುಮಾರ್, ಪಂಚಲಿಂಗಪ್ಪ, ನವೀನ್, ಸಾಜನ್ ಮಹಿಳಾ ಸಿಬ್ಬಂದಿ ರೇಷ್ಮಾ, ಚಾಲಕ ಷರೀಫ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next