Advertisement

ರಾಜ್ಯದಲ್ಲೂ ಚುನಾವಣೆ ಸನ್ನಿಹಿತ

02:10 AM May 11, 2022 | Team Udayavani |

ಬೆಂಗಳೂರು: ಎರಡು ವಾರಗಳ ಒಳಗೆ ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರ ಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಮಧ್ಯಾಂತರ ಆದೇಶವು ರಾಜ್ಯದಲ್ಲೂ ಸಂಚಲನಕ್ಕೆ ಕಾರಣವಾಗಿದೆ.

Advertisement

ಈ ಆದೇಶದಿಂದಾಗಿ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಜಿ.ಪಂ.,ತಾ.ಪಂ. ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗಳನ್ನು ನಡೆಸಬೇಕಾದ ಅನಿವಾರ್ಯ ಸರಕಾರಕ್ಕೆ ಎದುರಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸರಕಾರ ಮತ್ತು ರಾಜ್ಯ ಚುನಾವಣ ಆಯೋಗವು ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸಬೇಕಾಗಿದೆ. ಮೂರೂ ಪಕ್ಷಗಳಿಗೆ ಈ ಚುನಾವಣೆ ಇಷ್ಟವಿಲ್ಲದ್ದರೂ ಒಲ್ಲದ ಮನಸ್ಸಿನಿಂದ ಸಜ್ಜಾಗಬೇಕಾಗಿದೆ. ಸ್ಪರ್ಧೆಗೆ ಕಾಯುತ್ತಿರುವ ಆಕಾಂಕ್ಷಿಗಳಲ್ಲಿ ಭರವಸೆ ಚಿಗುರೊಡೆದಿದೆ.

ಸುಪ್ರೀಂ ಗಡುವು
ಮಧ್ಯಪ್ರದೇಶದ ವಿಚಾರವಾಗಿ ಮಂಗಳವಾರ ಮಧ್ಯಾಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌, ರಾಜ್ಯದ 23 ಸಾವಿರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರವೇ ಚುನಾವಣೆ ನಡೆಸುವಂತೆ ನಿರ್ದೇಶಿ ಸಿದೆ. 3 ಹಂತಗಳ ಪರಿಶೀಲನೆಯು ಎಲ್ಲ ರೀತಿ ಯಲ್ಲೂ ಪೂರ್ಣಗೊಳ್ಳುವವರೆಗೆ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲಾತಿ ನೀಡುವಂತಿಲ್ಲ. ಮುಂದಿನ 2 ವಾರಗಳೊಳಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕು ಎಂದು ಮಧ್ಯಪ್ರದೇಶ ಚುನಾವಣ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಸೂಚಿಸಿದೆ. ಅಷ್ಟೇ ಅಲ್ಲ, ಈ ತೀರ್ಪು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ ಎಂದೂ ಆದೇಶಿಸಿದೆ.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿ ಮೇ 4ರಂದು ಇದೇ ಮಾದರಿಯ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, 2 ವಾರಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆ ಆದೇಶಿಸಿತ್ತು.

Advertisement

ರಾಜ್ಯದಲ್ಲೂ ಪಾಲನೆ?
ಸು.ಕೋ. ಆದೇಶವನ್ನು ಪರಿಶೀಲಿಸಿ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿ ಬಸವಾಜ ಬೊಮ್ಮಾಯಿ ದಿಲ್ಲಿಯಲ್ಲಿ ಹೇಳಿದರೆ, ರಾಜ್ಯದಲ್ಲಿ ಚುನಾವಣೆ ನಡೆಸಲು ಸರಕಾರ ಸಿದ್ಧವಿದ್ದು, ಈ ಬಗ್ಗೆ ಸಿಎಂ ಜತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಿದ ಅನಂತರ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಅದೇ ರೀತಿ ಜಿ.ಪಂ., ತಾ.ಪಂ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸರಕಾರ ಸೀಮಾ ನಿರ್ಣಯ ಆಯೋಗ ರಚನೆ ಮಾಡಿದೆ. ಈ ಮಧ್ಯೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸೇರಿ ಒಟ್ಟು ಮೀಸಲಾತಿ ಪ್ರಮಾಣ ಶೇ. 50 ಮೀರುವಂತಿಲ್ಲ ಎಂದು ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಒಬಿಸಿಗಳಿಗೆ ಮೀಸಲಾತಿ ಒದಗಿಸುವ ಸಂಬಂಧ ರಾಜ್ಯ ಸರಕಾರ ಇನ್ನೊಂದು ಆಯೋಗ ರಚಿಸಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸುಪ್ರೀಂ ಕೋರ್ಟ್‌ ಮಧ್ಯಾಂತರ ಆದೇಶ ಬಂದಿದ್ದು, ಹಿಂದಿದ್ದ ಸ್ಥಿತಿಯಲ್ಲೇ ಚುನಾವಣೆ ನಡೆಸಬೇಕಾಗಬಹುದು.

ಹಲವು ಸವಾಲುಗಳು
ಸುಪ್ರೀಂ ಆದೇಶ ಪಾಲಿಸಿ ಬಿಬಿಎಂಪಿ ಹಾಗೂ ಜಿ.ಪಂ., ತಾ.ಪಂ. ಚುನಾವಣೆ ನಡೆಸಲು ಸರಕಾರ ಮುಂದಾದರೆ ಹಲವು ಸವಾಲುಗಳು ಎದುರಾಗುತ್ತವೆ. ಬಿಬಿಎಂಪಿ ವಾರ್ಡ್‌ ಸಂಖ್ಯೆ ಹೆಚ್ಚಿಸಿರುವುದು, ತಾ.ಪಂ., ಜಿ.ಪಂ. ಸೀಮಾ ನಿರ್ಣಯ ಆಯೋಗ ರಚಿಸಿರುವುದು, ಒಬಿಸಿ ಮೀಸಲಾತಿ ನಿಗದಿಗೆ ಆಯೋಗ ರಚಿಸಿರುವ ಸರಕಾರದ ಕ್ರಮಗಳ ಬಗ್ಗೆ ಪ್ರಶ್ನೆ ಮೂಡುತ್ತದೆ. ಈ ಸಂಬಂಧ ಈವರೆಗೆ ಆಗಿರುವ ಪ್ರಕ್ರಿಯೆಗಳ ಭವಿಷ್ಯವೇನು ಎಂಬ ಜಿಜ್ಞಾಸೆ ಎದುರಾಗುತ್ತದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಳ, ಸೀಮಾ ನಿರ್ಣಯ ಆಯೋಗ ರಚನೆ ಮಾಡಿದ್ದು ಚುನಾವಣೆ ಮುಂದೂಡುವ ಸರಕಾರದ ತಂತ್ರ ಎನ್ನಲಾಗಿತ್ತು. ಈ ನಡುವೆ ಒಬಿಸಿ ಮೀಸಲಾತಿ ವಿಚಾರ ಮತ್ತೂಂದು ಅಸ್ತ್ರ ಎಂದು ವಿಶ್ಲೇಷಿಸಲಾಗಿತ್ತು. ಇದೆಲ್ಲದರ ನಡುವೆ ಸುಪ್ರೀಂ ಕೋರ್ಟ್‌ ಆದೇಶ ಬಂದಿದ್ದು, ಸರಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?
– ಸಮಯಕ್ಕೆ ಸರಿಯಾಗಿ ಚುನಾವಣೆ ನಡೆ ಸು ವುದು ಅಧಿಕಾರಿಗಳ ಹೊಣೆಗಾರಿಕೆ
– 2 ವಾರಗಳೊಳಗಾಗಿ ಮಧ್ಯಪ್ರದೇಶದ 23,263 ಸ್ಥಳೀಯ ಸಂಸ್ಥೆಗಳಿಗೆ ಅಧಿಸೂಚನೆ ಹೊರಡಿಸಬೇಕು
– ಈ ಬಾರಿ ಒಬಿಸಿ ಮೀಸಲಾತಿಯಿಲ್ಲದೆ ಚುನಾ ವಣೆ ನಡೆದರೆ ಆಕಾಶ ಕಳಚಿ ಬೀಳುವುದಿಲ್ಲ
– ಒಬಿಸಿ ಬಗ್ಗೆ ಒಲವಿದ್ದರೆ ಅಂಥ ರಾಜಕೀಯ ಪಕ್ಷಗಳು ಜನರಲ್‌ ಕೆಟಗರಿ ಸೀಟುಗಳಿಗೆ ಒಬಿಸಿ ಅಭ್ಯರ್ಥಿಗಳನ್ನೇ ನಾಮನಿರ್ದೇಶನ ಮಾಡಲಿ
– ನಾವು ನೀಡುತ್ತಿರುವ ಆದೇಶ ಮಧ್ಯ ಪ್ರದೇಶಕ್ಕಷ್ಟೇ ಸೀಮಿತವಲ್ಲ. ಎಲ್ಲ ರಾಜ್ಯಗಳೂ ಪಾಲಿಸಬೇಕು.

ಚುನಾವಣೆ ನಡೆಸಲು ಆಯೋಗ ಹಿಂದಿನಿಂದಲೂ ಸಿದ್ಧವಾಗಿತ್ತು. ಅದಕ್ಕಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಈಗ ಸುಪ್ರೀಂ ಕೋರ್ಟ್‌ ಮಧ್ಯಾಂತರ ಆದೇಶ ನೀಡಿದೆ. ಈ ಆದೇಶ ಎಲ್ಲರಿಗೂ ಅನ್ವಯ ಮತ್ತು ಎಲ್ಲರೂ ಅದನ್ನು ಪಾಲಿಸಬೇಕು. ಚುನಾವಣೆ ನಡೆಸಲು ಆಯೋಗ ಸದಾ ಸಿದ್ಧವಿದೆ.
– ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ

ಬಿಜೆಪಿ ಎಲ್ಲ ಚುನಾವಣೆಗಳಿಗೂ ಸಿದ್ಧವಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಕುರಿತು ಸಂಪೂರ್ಣ ಅಧ್ಯಯನ ಮಾಡುವಂತೆ ಕಾನೂನು ಇಲಾಖೆ ಹಾಗೂ ಅಡ್ವೊಕೇಟ್‌ ಜನರಲ್‌ಗೆ ತಿಳಿಸಿದ್ದೇನೆ. ಸುಪ್ರೀಂ ಕೋರ್ಟ್‌, ಚುನಾವಣ ಆಯೋಗ ಏನು ತೀರ್ಮಾನ ಕೈಗೊಳ್ಳುತ್ತದೋ ಅದನ್ನು ಪಾಲಿಸಲಾಗುವುದು.
– ಬಸವರಾಜ ಬೊಮ್ಮಾಯಿ, ಸಿಎಂ

 

Advertisement

Udayavani is now on Telegram. Click here to join our channel and stay updated with the latest news.

Next