Advertisement

ಕಾಂಗ್ರೆಸ್ ಮಾಡಿದ್ದ ಆಸ್ತಿಯನ್ನು ಖಾಸಗಿಯವರಿಗೆ ಕೊಟ್ಟಿದ್ದೇ ಬಿಜೆಪಿ ಸಾಧನೆ: ಮಧು ಬಂಗಾರಪ್ಪ

05:01 PM Aug 10, 2022 | Team Udayavani |

ಶಿವಮೊಗ್ಗ:  ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಎಲ್ಲ ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ನಡೆಸಲು ಕೆಪಿಸಿಸಿ ತೀರ್ಮಾನಿಸಿದೆ. ಸೊರಬ ವಿಧಾನಸಭೆ ಕ್ಷೇತ್ರದಲ್ಲಿ ನಾಳೆ ನಡೆಯಲಿದೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಧ್ವಜ ಬದಲಾವಣೆ, ಸಂವಿಧಾನ ತಿದ್ದುಪಡಿ ಮಾಡುವ ಹೇಳಿಕೆ ಕೊಡುವವರೇ ಹರ್ ಘರ್ ತಿರಂಗಾ ಮಾಡುತ್ತಿದ್ದಾರೆ. ಸಂವಿಧಾನ ಬದಲಿಸುವವರನ್ನೇ ಮತದಾರ ಬದಲಾಯಿಸ್ತಾನೆ ಎಂದು ಅಂಬೇಡ್ಕರ್ ಹೇಳಿದ್ದರು. ಆ ಸಮಯ ಬಂದಿರುವುದು ಸ್ವತಃ ಬಿಜೆಪಿ ನಾಯಕರಿಗೆ ಅರ್ಥ ಆಗಿದೆ. ಗಾಂಧಿ ಮತ್ತು ಕಾಂಗ್ರೆಸ್ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಬಿಜೆಪಿ ಕೊಡುಗೆ ಏನಿಲ್ಲ ಎಂದು ಟೀಕಿಸಿದರು.

ಸಿದ್ಧರಾಮೋತ್ಸವದಲ್ಲಿ ಜನ ಸೇರಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಗೆ ಸ್ಪೂರ್ತಿ ನೀಡಿದೆ. ಆದರೆ, ಚುನಾವಣೆ ಗೆಲ್ಲಲು ಸಾಕಷ್ಟು ಯೋಜನೆ ಕಸರತ್ತು ಮಾಡಬೇಕಿದೆ. ಈಗಾಗಲೇ ಈ ಬಗ್ಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ನವರು ನಮ್ಮ ಮುಖಂಡರ ಜೊತೆ ಪ್ರತಿದಿನ ಚರ್ಚಿಸುತ್ತಿದ್ದಾರೆ. ಚುನಾವಣೆ ಗೆಲ್ಲಲು ನಾವು ತಂತ್ರ ಹೂಡುತ್ತಿದ್ದೇವೆ. ಸಿದ್ಧರಾಮೋತ್ಸವ ನಮಗೆ ಬಲ ನೀಡಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಮಾಡಲು ನಿಜವಾದ ಹಕ್ಕು ಕಾಂಗ್ರೆಸ್ ಗೆ ಇದೆ ಎಂದರು.

ಬಿಜೆಪಿ ಸ್ವಾರ್ಥದ ರಾಜಕಾರಣ ನಡೆಸುತ್ತಿದೆ. ಕಾಂಗ್ರೆಸ್ ಮಾಡಿದ್ದ ದೇಶದ ಆಸ್ತಿಯನ್ನೆಲ್ಲಾ ಖಾಸಗಿಯವರಿಗೆ ವಹಿಸಿಕೊಟ್ಟಿರುವುದೇ ಅವರ ಸಾಧನೆ. ಧ್ವಜದ ಬಗ್ಗೆ ಮಾತನಾಡಲು ಕೂಡ ಬಿಜೆಪಿಯವರಿಗೆ ಯೋಗ್ಯತೆ ಇಲ್ಲ.ಆರ್.ಎಸ್.ಎಸ್. ದೇಶದ ತಿರಂಗಾ ಧ್ವಜ ಹಾರಿಸಲ್ಲ ಎಂದಿದ್ದರು ಅವರು ದೇಶದ ಬಾವುಟ ಒಪ್ಪಿರಲಿಲ್ಲ. ದೇಶಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಹೇಳುವ ಮೂಲಕ ಬಿಜೆಪಿಯವರು, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲ ಪಂಗನಾಮ: ಅಶ್ವತ್ಥನಾರಾಯಣ ವಿರುದ್ದ ಹೆಚ್ ಡಿಕೆ

Advertisement

ಮುಂದಿನ ಚುನಾವಣೆಗಾಗಿ ಜಿಲ್ಲಾ ಮಟ್ಟದಲ್ಲೂ ಪ್ರಣಾಳಿಕೆ ಇರಲಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಹಲವಾರು ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಯೋಜನೆಗಳೆಲ್ಲ ಶೇ.90 ರಷ್ಟು  ಯಶಸ್ವಿಯಾಗಿತ್ತು. ಅವುಗಳನ್ನೆಲ್ಲ ಬಿಜೆಪಿ ಸರ್ಕಾರ ಗಾಳಿಗೆ ತೂರಿದೆ. ಯಶಸ್ವಿ ಯೋಜನೆಗಳನ್ನೆಲ್ಲ ಪುನಃ ಜಾರಿಗೆ ಬರಲಿವೆ ಪ್ರಣಾಳಿಕೆ ಸಿದ್ಧತೆ ಸಂಬಂಧ ಚಿಂತನ ಮಂಥನ ನಡೆಯುತ್ತಿದೆ ಎಂದರು.

ಬಗರ್ ಹುಕುಂ ಅರ್ಜಿದಾರರಿಗೆ ಇವರಿಗೆ ಈವರೆಗೂ ಹಕ್ಕು ಪತ್ರ ನೀಡಲು ಆಗಿಲ್ಲ. ಮಲೆನಾಡಿನಲ್ಲಿ ಬಗರ್ ಹುಕುಂದಾರರಿಗೆ ಡಬಲ್ ಇಂಜಿನ್ ಸರ್ಕಾರ ತೊಂದರೆ ನೀಡುತ್ತಿದೆ. 75 ವರ್ಷದ ದಾಖಲೆಯನ್ನು ಸರ್ಕಾರ ಕೇಳುತ್ತದೆ. ಮನೆ ಕೊಡಲು ಕಾಂಗ್ರೆಸ್ ಇದೆ, ಮನೆಗೆ ಹಕ್ಕುಪತ್ರ ನೀಡಲು ಕಾಂಗ್ರೆಸ್ ಇದೆ. ಆದರೆ, ಮನೆ ಉರುಳಿಸಲು ಬಿಜೆಪಿ ಸರ್ಕಾರವಿದೆ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಗರ್ ಹುಕುಂದಾರರಿಗೆ ನ್ಯಾಯ ಕೊಡಿಸಲಾಗುವುದು ಎಂದರು.

ನೆಹರು ಈ ದೇಶವನ್ನು ಮೂರು ಭಾಗ ಮಾಡಿದವರು, ಅವರ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಲಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆಗ ಆ ಸಂದರ್ಭದಲ್ಲಿ ಏನೇನಾಗಿದೆ ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಮೋದಿ ಬಗ್ಗೆ ಮಾತನಾಡಿದರೆ, ಐಟಿ, ಇ.ಡಿ., ಪೊಲೀಸರು ಸರ್ಜಿಕಲ್ ಸ್ಟ್ರೈಕ್ ಮಾಡಿ ಬಿಡುತ್ತಾರೆ ಎಂದು ಟಾಂಗ್‌ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next