Advertisement

‌ಪಕ್ಷದ ಚುಕ್ಕಾಣಿ ಹಿಡಿದವರಿಂದ ಬೇಸರವಾಗಿದೆ: ಡಿಕೆಶಿ ವಿರುದ್ಧ ಎಂ.ಆರ್. ಸೀತಾರಾಂ ಅಸಮಾಧಾನ

04:09 PM Jun 24, 2022 | Team Udayavani |

ಬೆಂಗಳೂರು: ಎಲ್ಲಿ ನಮಗೆ ಗೌರವ ಇರುತ್ತದೆಯೋ ಅಲ್ಲಿ ನಾವಿರಬೇಕು. ‌ಪಕ್ಷದ ಚುಕ್ಕಾಣಿ ಹಿಡಿದವರಿಂದ ಬೇಸರವಾಗಿದೆ ಎಂದು ಮಾಜಿ ಸಚಿವ ಎಂ.ಆರ್. ಸೀತಾರಾಂ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ‌ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಆದರೂ ಪಕ್ಷಕ್ಕೆ ಸಾಕಷ್ಟು ಮಾಡಿರುವ ಕೆಲಸ ಮಾಡಿದ್ದೇನೆ. ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಈ ಸಭೆ ಕರೆದಿದ್ದೇನೆ. ಕಳೆದ 2008ರ ಚುನಾವಣೆಗೆ ಕಾಂಗ್ರೆಸ್ ಸೋಲುತ್ತಿರಲಿಲ್ಲ. ಆಗ ನಾಯಕರೇ ಸೋಲಿಸಿದರು. ನನ್ನ ಸೋಲಿಗೆ ನಮ್ಮ ನಾಯಕರೇ ಕಾರಣರಾದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಟಿಕೆಟ್ ಅಂತಿಮವಾಗಿತ್ತು. ಆದರೆ ವೀರಪ್ಪ ಮೊಯಿಲಿ ದೆಹಲಿಯಿಂದಲೇ ಟಿಕೆಟ್ ಪಡೆದರು. 2019ರಲ್ಲಿ ಮತ್ತೆ ಚುನಾವಣೆಗೆ ಅವರೇ ನಿಂತರು ಎಂದು ಬೇಸರ ವ್ಯಕ್ತಪಡಿಸಿದರು.

2018ರ ವಿಧಾನಸಭೆ ಚುನಾವಣೆ ವೇಳೆ ಕೆ. ಸಿ‌ ವೇಣುಗೋಪಾಲ್ ದೂರವಾಣಿ ಕರೆ ಮಾಡಿದ್ದರು. ಮಲ್ಲೇಶ್ವರಂ ಕ್ಷೇತ್ರದಲ್ಲೇ ಕಣಕ್ಕೆ ಇಳಿಯಿರಿ ಅಂದರು. ಏಕಾಏಕಿ ಅಲ್ಲಿ ನಿಲ್ಲುವುದು ಕಷ್ಟವೆಂದು ಕ್ಷಮೆ ಕೇಳಿದೆ. ನಾನು ಅವರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಪರಿಷತ್  ಮರು ಆಯ್ಕೆಗೆ ಅವಕಾಶ ಕೊಡಲಿಲ್ಲ‌. 2022ರಲ್ಲಿ ಪರಿಷತ್‌ ನ ಎರಡು ಸ್ಥಾನಕ್ಕೆ ಹಿಂದುಳಿದ, ಅಲ್ಪಸಂಖ್ಯಾತರಿಗೆ ಎಂದು ನಿರ್ಣಯವಾಯ್ತು. ಆದರೆ, ರಾತ್ರೋರಾತ್ರಿ ಹೆಸರು ಬದಲಿಸಿದರು ಎಂದು ಪಕ್ಷದ ನಾಯಕರ ವಿರುದ್ಧ ಸೀತಾರಾಂ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಭೆಯಲ್ಲಿ ಸೀತಾರಾಂ ಬೆಂಬಲಿಗ ನಾರಾಯಣಸ್ವಾಮಿ ಎಂಬುವರು ಅದಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಟಿಕೆಟ್ ಹಂಚುತ್ತಾರೆ. ಬಳಿಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚುತ್ತಾರೆ. ಪರೋಕ್ಷವಾಗಿ ವಸೂಲಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತವಾಯಿತು.

Advertisement

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಅನರ್ಹ ಮಾಡುತ್ತಾರೆ. ಅನರ್ಹಗೊಂಡವರನ್ನು ಅಧ್ಯಕರ ಒತ್ತಾಯದ ಕಾರಣಕ್ಕೆ ಕಣಕ್ಕಿಸಲು ಅವಕಾಶ ಕೊಡಲಾಗುತ್ತದೆ. ಒಂದೇ ವರ್ಷಕ್ಕೆ ನನ್ನ ಮಗನಿಗೆ ಅವಕಾಶ ನೀಡುತ್ತಾರೆ. ಬಳಿಕ ಅನರ್ಹಗೊಂಡವರಿಗೆ ಅವಕಾಶ ನೀಡಿ ರಕ್ಷಾನಿಗೆ ಗಿಫ್ಟ್ ರೀತಿ ರಾಷ್ಟ್ರೀಯ ಜವಾಬ್ದಾರಿ ನೀಡುತ್ತಾರೆ ಎಂದು ಸೀತಾರಾಂ ನೋವು ನೋಡಿಕೊಂಡರು.

ಕಾಂಗ್ರೆಸ್ ಪಕ್ಷದಲ್ಲಿ ನಾವು ಉಳಿಯಬೇಕೆಂದು ಅನೇಕರು ಹೇಳುತ್ತಾರೆ. ಕಳೆದ ನಲ್ವತ್ತು ವರ್ಷ ರಾಜಕಾರಣ ಮಾಡಿ ಈಗ ಬೇರೆ ಯೋಚನೆ ಮಾಡಬೇಡಿ ಎನ್ನುತ್ತಾರೆ. ನನ್ನನ್ನು ಸಿದ್ದರಾಮಯ್ಯ ಎರಡು ವರ್ಷ ಮಂತ್ರಿ ಮಾಡಿದ್ದರು. ನನಗೆ ಕೊಟ್ಟ ಖಾತೆ ಮೂಲಕ ಸಮಾಧಾನಕರ ಸೇವೆಯನ್ನು ನೀಡಿದೆ. ಎಲ್ಲಿ ನಮಗೆ ಗೌರವ ಇರುತ್ತದೋ ಅಲ್ಲಿರುತ್ತೇವೆ. ಸದ್ಯಕ್ಕೆ ಪಕ್ಷದ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ಪಕ್ಷದ ಚುಕ್ಜಾಣಿ ಹಿಡಿದ ನಾಯಕರ ಬಗ್ಗೆ ಬೇಸರವಿದೆ ಎಂದರು.

ಪಕ್ಷದಲ್ಲಿ ಚುಕ್ಕಾಣಿ ಹಿಡಿದವರಿಗಿಂತ ನಾನು ಸೀನಿಯರ್. ಅಂದು ಟಿಕೆಟ್ ತಪ್ಪಿಸಿದಾಗ ಸೌಜನ್ಯಕ್ಕೆ ಒಂದು ಮಾತೂ ಹೇಳಲಿಲ್ಲ.. ನಾನು ಅದನ್ನು ನಿರೀಕ್ಷೆ ಮಾಡಿಯೂ ಇರಲಿಲ್ಲ. ಆದರೆ ಅವರ ಈ ವರ್ತನೆ ಎಷ್ಟು ಸರಿ ? ಈ ಸಮಯದಲ್ಲಿ ನನ್ನ ರೀತಿ ಅನೇಕರನ್ನು ನಡೆಸಿಕೊಂಡಿದ್ದಾರೆ. ಪಕ್ಷದ ಚುಕ್ಕಾಣಿ ಹಿಡಿದವರು ಮನುಷ್ಯತ್ವ, ಮಾನವೀಯತೆ ಇಟ್ಟು ನಡೆಯಬೇಕಾಗುತ್ತದೆ. ನಾನು ಕೈಗೊಳ್ಖುವ ತೀರ್ಮಾನಕ್ಕೆ ಬೆಂಬಲಿಗರು ಜೊತೆ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಮುಂದಿನ ತಿಂಗಳು ದೊಡ್ಡ ಸಮಾವೇಶ ಮಾಡಲಾಗುತ್ತದೆ. ಐತಿಹಾಸಿಕ ನಿರ್ಣಯ ಕೈಗೊಳ್ಳುವ ದಾರಿಯಲ್ಲಿದ್ದೇನೆ. ಅವರು ಈಗ ಭ್ರಮೆಯಲ್ಲಿರಬಹುದು. ಅವರಿಗೆ ಮುಂದೆ ಅರಿವಿಗೆ ಬರಲಿದೆ ಎಂದು ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸದೆ ಸೀತಾರಾಂ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next