Advertisement

ರಾಜ್ಯ ಹೆದ್ದಾರಿಯಲ್ಲಿ ತಗ್ಗು; ನಿರ್ಲಕ್ಷ್ಯಕ್ಕೆ ಆಕ್ರೋಶ

05:15 PM Aug 11, 2022 | Team Udayavani |

ಚಿಂಚೋಳಿ: ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಭಕ್ತಂಪಳ್ಳಿ, ಗಣಾಪುರ, ಬುರುಗಪಳ್ಳಿ, ಚತ್ರಸಾಲ, ಕರ್ಚಖೇಡ, ನಿಡಗುಂದಾ ಗ್ರಾಮಗಳ ವರೆಗೆ ರಾಜ್ಯ ಹೆದ್ದಾರಿಯಲ್ಲಿ ತಗ್ಗು ಬಿದ್ದು ಹದಗೆಟ್ಟು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ ಜನಪ್ರತಿಧಿಗಳು, ಅಧಿಕಾರಿಗಳು ರಸ್ತೆ ಡಾಂಬರೀಕರಣ, ಸುಧಾರಣೆ ಮಾಡಲು ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂದು ಗಣಾಪುರ ಗ್ರಾಮಸ್ಥರು ದೂರಿದ್ದಾರೆ.

Advertisement

ತಾಲೂಕಿನ ಗಣಾಪುರ ಗ್ರಾಮದಲ್ಲಿ ರಸ್ತೆಯಲ್ಲಿ ಭಾರಿ ತಗ್ಗುಗಳನ್ನು ತೋರಿಸಿ ಮಾತನಾಡಿದ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಆಗಿನ ಸೇಡಂ ಶಾಸಕರಾಗಿದ್ದ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು 15ಕಿ.ಮೀ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಮಾಡುವುದಕ್ಕಾಗಿ 2011-12ನೇ ಸಾಲಿನಲ್ಲಿ ಎಚ್‌ಕೆಆರ್‌ಡಿ ವತಿಯಿಂದ 11ಕೋಟಿ ರೂ. ಅನುದಾನ ಮಂಜೂರಿಗೊಳಿಸಿ ಡಾಂಬರೀಕರಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸೇಡಂ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಡಾ| ವೀರಣ್ಣ ಬಿರಾದಾರ ಗಣಾಪುರ, ಭೀಮರೆಡ್ಡಿ ಬುರುಗಪಳ್ಳಿ ದೂರಿದ್ದಾರೆ.

ಗಣಾಪುರ, ಭಕ್ತಂಪಳ್ಳಿ, ಚತ್ರಸಾಲ, ಖರ್ಚಖೇಡ, ನಿಡಗುಂದಾ ಗ್ರಾಮದ ವರೆಗೆ ರಸ್ತೆಯಲ್ಲಿ ಭಾರಿ ತಗ್ಗುಗಳು ಬಿದ್ದಿರುವುದರಿಂದ ಕಲಬುರಗಿ ಮತ್ತು ಚೆಟ್ಟಿನಾಡ ಸಿಮೆಂಟ್‌ ಕಂಪನಿಗಳಿಂದ ಸಿಮೆಂಟ್‌ ತುಂಬಿದ ಲಾರಿಗಳು ರಸ್ತೆಯಲ್ಲಿ ಸಿಕ್ಕಿಕೊಂಡು ವಾರಗಟ್ಟಲೇ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಇದರಿಂದ ಲಾರಿ ಚಾಲಕರು, ಕ್ಲೀನರ್‌ಗಳು ತೊಂದರೆ ಪಡುವಂತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಜಶೇಖರ ಮಾಲಿಪಾಟೀಲ, ರಾಜಶೇಖರ ಪೊಲೀಸ್‌ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಸೇಡಂ ಶಾಸಕರು ಕೂಡಲೇ ಗಣಾಪುರ, ಭಕ್ತಂಪಳ್ಳಿ, ಬುರುಗಪಳ್ಳಿ, ಖರ್ಚುಖೇಡ ಗ್ರಾಮಗಳ ಸಮಸ್ಯೆ ಗಮನಹರಿಸಬೇಕು. ಇಲ್ಲದಿದ್ದರೆ ಎಲ್ಲ ಗ್ರಾಮಸ್ಥರು ನಿಡಗುಂದಾ ಗ್ರಾಮದ ಹತ್ತಿರ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಡಾ| ವೀರಣ್ಣ ಬಿರಾದಾರ, ಭೀಮರೆಡ್ಡಿ ಬುರುಗಪಳ್ಳಿ, ಮಹೇಶ ಪಾಟೀಲ, ಶಿವಶಂಕರಯ್ಯ ಸ್ವಾಮಿ, ರಾಯಪ್ಪ ಪೂಜಾರಿ, ರಮೇಶ ಬುರುಗಪಳ್ಳಿ, ಮಹಮ್ಮದ್‌ ಶಫಿ, ಗುಂಡಪ್ಪ ಹಡಪದ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next